ಒಳಚರಂಡಿ ಕಾಮಗಾರಿ ಅವ್ಯವಹಾರ: ಮೊಯಿದ್ದೀನ್ ಬಾವ ಶಾಮೀಲು
ಮಂಗಳೂರು, ಫೆಬ್ರವರಿ 16 : ಮಂಗಳೂರು ಮಹಾನಗರ ಪಾಲಿಕೆಯ ಎಡಿಬಿ ಕಾಮಗಾರಿಯ ಅವ್ಯವಹಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದೀನ್ ಬಾವ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ. ಎಡಿಬಿ ನೆರವಿನೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಕುರಿತು ಸಭೆಯಲ್ಲಿ ಈ ಆರೋಪ ಕೇಳಿ ಬಂದಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಎಡಿಬಿ ಯ 2 ನೇ ಹಂತದ ಒಳಚರಂಡಿ ಯೋಜನೆಯ ಕಾಮಗಾರಿ ಸಾಧಕ ಭಾಧಕಗಳ ವಿಚಾರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶಾಸಕ ಮೊಯಿದ್ದಿನ್ ಬಾವ ಅವರ ವಿರುದ್ಧವೇ ಎಡ ಪಕ್ಷ ದ ಮುಖಂಡರು ನೇರ ಆರೋಪ ಮಾಡಿದ್ದಾರೆ.
ಎಡ ಪಕ್ಷದ ಮುಖಂಡರ ಆರೋಪದ ಬಗ್ಗೆ ಮಾತನಾಡುವ ವೇಳೆ ಶಾಸಕ ಮೊಯಿದ್ದಿನ್ ಬಾವ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮೇಲೆ ರೇಗಾಡಿದ್ರಿಂದ ಸಭೆಯಲ್ಲಿ ಗದ್ದಲ ಉಂಟಾಗಿದೆ. ಶಾಸಕ ಮೊಯಿದ್ದೀನ್ ಬಾವಾ ಮತ್ತು ಎಡ ಪಕ್ಷದ ಮುಖಂಡರು ಪರಸ್ಪರ ವಾಗ್ದಾಳಿ ನಡೆಸಿದ್ದು ಸಾರ್ವಜನಿಕ ಸಭೆ ರಾಜಕೀಯ ಮುಖಂಡರ ಕೆಸರೆರಚಾಟಕ್ಕೆ ವೇದಿಕೆಯಾಗಿತ್ತು.
ಈ ನಡುವೆ ಶಾಸಕ ಮೊಯಿದ್ದೀನ್ ಬಾವಾ ಪ್ರಾಮಾಣಿಕರು ಹೌದಾದರೆ ಮುಖ್ಯಮಂತ್ರಿಗೆ ಒತ್ತಡ ಹೇರಿ ತನಿಖೆಗೆ ಆದೇಶಿಸಲಿ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸವಾಲು ಹಾಕಿದ್ದಾರೆ.
ಎಡಿಬಿ ಎರಡನೇ ಹಂತದ ಸಾಲದಲ್ಲಿ ಕೆಯುಐಡಿಎಫ್ ಸಿ ಹಮ್ಮಿಕೊಂಡಿರುವ ಪಂಪಿಂಗ್ ಮೇನ್ ಬದಲಾವಣೆ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಶಾಸಕರಾದ ಜೆ ಆರ್ ಲೋಬೊ, ಮೊಯ್ದಿನ್ ಬಾವಾರ ಶಾಮೀಲಾತಿಯ ಕುರಿತ ಆರೋಪಕ್ಕೆ ನಾನು ಈಗಲೂ ಬದ್ದ ಇರುವುದಾಗಿ ಹೇಳಿರುವ ಮುನೀರ್ ಕಾಟಿಪಳ್ಳ ತಿಳಿದಿದ್ದಾರೆ. ನಗರ ಪಾಲಿಕೆಯಲ್ಲಿ ಪಂಪಿಂಗ್ ಮೇನ್ ಸಹಿತ ಎಡಿಬಿ ಅನುದಾನದ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಶಾಸಕ ಮೊಯ್ದಿನ್ ಬಾವಾ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಆದರೆ ಕುಡ್ಸೆಂಪ್ ಕಳಪೆ ಕಾಮಗಾರಿಯ ಕುರಿತ ಆರೋಪಗಳನ್ನು ಒಪ್ಪಿಕೊಳ್ಳುತ್ತಲೇ ತಾನು ಪ್ರಾಮಾಣಿಕ ಎಂದು ಘೋಷಿಸಿದ್ದಾರೆ. ಇದರರ್ಥ ಏನು ಎಂದು ಅವರು ಪ್ರಶ್ನಿಸಿದರು.
ಶಾಸಕ ಮೊಯ್ದಿನ್ ಬಾವ ಪ್ರಾಮಾಣಿಕರಾಗಿದ್ದಲ್ಲಿ ಯೋಜನೆಯ ಮೊತ್ತವನ್ನು 60 ಕೋಟಿ ಯಿಂದ 94 ಕೋಟಿಗೆ ಏರಿಸಿ ಸಾರ್ವಜನಿಕರ ನಿಧಿ ದುರುಪಯೋಗಿಸುವಾಗ ಮೌನ ವಹಿಸಿದ್ದು ಯಾಕೆ ? ಪ್ರಶ್ನಿಸಿರುವ ಮುನೀರ್ ಕಾಟಿಪಳ್ಳ ಶಾಸಕರ ಗಮನಕ್ಕೆ ಬಾರದೆ ಯೋಜನೆಗಳು ಟೆಂಡರ್ ಹಂತಕ್ಕೆ ಹೋಗಲು ಸಾಧ್ಯವೆ ? ಶಾಸಕ ಮೊಯ್ದಿನ್ ಬಾವಾರ ಪ್ರಮಾಣಿಕತೆ ನೈಜವಾದದ್ದಾದರೆ, ತಕ್ಷಣವೇ ಮಧ್ಯಪ್ರವೇಶ ನಡೆಸಲಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಟೆಂಡರ್ ತಡೆ ಹಿಡಿದು ತನಿಖೆಗೆ ಆದೇಶ ಹೊರಡಿಸಲಿ ಎಂದು ಮುನೀರ್ ಕಾಟಿಪಳ್ಳ ಶಾಸಕ ಮೊಯಿದ್ದೀನ್ ಬಾವಾ ಅವರಿಗೆ ಸವಾಲು ಹಾಕಿದ್ದಾರೆ.