ಕಿಡಿಗೇಡಿಗಳ ಕೃತ್ಯಕ್ಕೆ ಕಣ್ಣೀರಿಡುತ್ತಿದ್ದಾಳೆ ಸುಳ್ಯದ ಜೀವನದಿ ಪಯಸ್ವಿನಿ
ಯಾರೋ ಕಿಡಿಗೇಡಿಗಳು ಸುಳ್ಯದ ಜೀವನದಿ ಪಯಸ್ವಿನಿಗೆ ಕೋಳಿ ತ್ಯಾಜ್ಯ, ಕಸಗಳನ್ನ ಹಾಕುತ್ತಿದ್ದಾರೆ, ಜತೆಗೆ ಕೊಳಚೆ ನೀರನ್ನು ನದಿಗೆ ಬಿಡುತ್ತಿದ್ದಾರೆ. ಹೀಗಾಗಿ ಇಲ್ಲಿನ ಜನರಿಗೆ ಈ ನೀರನ್ನು ಕುಡಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು, ಎಪ್ರಿಲ್ 7: ನೀವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೈಚಾರ್ ಗೆ ಭೇಟಿ ನೀಡಿದರೆ ಪಯಸ್ವಿಣಿ ನದಿಯನ್ನು ಕಾಣಬಹುದು. ಇದು ಸುಳ್ಯದ ಜನರ ಪಾಲಿಗೆ ಜೀವನದಿ. ಈ ಭಾಗದ ಜನರು ಕುಡಿಯೋಕೇ, ಕೃಷಿಗಾಗಿ ಈ ನದಿ ನೀರನ್ನ ಬಳಸುತ್ತಾರೆ.
ಈ ಹಿಂದೆ ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಇಲ್ಲಿನ ಜನರು ಈ ನದಿ ನೀರನ್ನೇ ಕುಡಿಯಲು ಬಳಸುತ್ತಿದ್ದರು. ಆದರೆ ಈಗ ಪಯಸ್ವಿನಿ ನದಿಯನ್ನ ನೋಡಿ ನೀವೇ ಕಣ್ಣೀರು ಹಾಕುತ್ತೀರಾ. ಬಿಸಿಲಿನ ತಾಪಕ್ಕೆ ನೀರು ಕಡಿಮೆಯಾಗಿದೆ. ಇದ್ದ ಅಲ್ಪ ಸ್ವಲ್ಪ ನೀರು ಕಲ್ಮಶಗೊಂಡಿದೆ.[ನಾಳೆ ತಂದೆಯ ಅಸ್ಥಿ ವಿಸರ್ಜನೆಗೆ ಐಶ್ವರ್ಯಾ ರೈ ದಂಪತಿ ಮಂಗಳೂರಿಗೆ]
ಯಾರೋ ಕಿಡಿಗೇಡಿಗಳು ಈ ನದಿ ನೀರಿಗೆ ಕೋಳಿ ತ್ಯಾಜ್ಯ, ಕಸಗಳನ್ನ ಹಾಕುತ್ತಿದ್ದಾರೆ, ಜತೆಗೆ ಕೊಳಚೆ ನೀರನ್ನು ನದಿಗೆ ಬಿಡುತ್ತಿದ್ದಾರೆ. ಹೀಗಾಗಿ ಇಲ್ಲಿನ ಜನರಿಗೆ ಈ ನೀರನ್ನು ಕುಡಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ರೋಗದ ಭೀತಿ ಶುರುವಾಗಿದೆ.
ಇಷ್ಟೇ ಅಲ್ಲ. ಇಲ್ಲೇ ಪಕ್ಕದಲ್ಲಿ ಕಂದಡ್ಕ ಎಂಬ ಹೊಳೆ ಇದೆ. ಈ ಹೊಳೆಯಲ್ಲಿ ಬರುವ ಕೊಳಚೆ ನೀರು ಪಯಸ್ವಿನಿ ನದಿ ಒಡಲು ಸೇರುತ್ತಿದೆ. ಪರಿಣಾಮ ನದಿ ನೀರು ನಾರುತ್ತಿದೆ.[ಎಎಸ್ ಐ ಐತಪ್ಪ ಹಲ್ಲೆ ಪ್ರಕರಣ: ಮಂಗಳೂರಲ್ಲಿ ಇಬ್ಬರ ಬಂಧನ]
ಇದೀಗ ಈ ನದಿ ನೀರು ಮಲಿನಗೊಳಿಸುವವರ ವಿರುದ್ಧ ಹೋರಾಡಲು ಇಲ್ಲಿನ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿ ಸ್ಥಳೀಯ ನಾಯಕರು ಸಹ ಬೆಂಬಲ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸ್ಥಳೀಯರಾದ ಕೇಶವ ಎಂಬುವವರು, 'ಮಲಿನಗೊಂಡಿರುವುದರಿಂದ ನದಿ ನೀರನ್ನ ಕುಡಿಯಲು ಆಗುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ನದಿ ನೀರಿನ ಸ್ವಚ್ಚತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ.