Breaking: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ, ಜೀವ ಬೆದರಿಕೆ, ದೂರು ದಾಖಲು ಬೆದರಿಕೆ
ಮಂಗಳೂರು, ಅಕ್ಟೋಬರ್ 14: ದುಷ್ಕರ್ಮಿಗಳ ತಂಡವೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆಯೊಡ್ಡಿದ್ದಾರೆಂದು ಬಂಟ್ವಾಳ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಕಾರಿನ ಚಾಲಕ ದೂರು ದಾಖಲಿಸಿದ್ದಾರೆ.
ಬುಧವಾರದಂದು ಬೆಂಗಳೂರಿಗೆ ತೆರಳಿದ್ದ ಶಾಸಕರು ಗುರುವಾರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಆಗಮಿಸಿ ಕಾರಿನಲ್ಲಿ ಬೆಳ್ತಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಗರದ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡ ಗಟ್ಟಿ ನಿಂದಿಸಿದ್ದಲ್ಲದೆ, ಮಾರಕಾಸ್ತ್ರ ತೋರಿಸಿ ಬೆದಿರಿಸಿದರೆಂದು ಶಾಸಕ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದಾರೆ.
ಗುರುವಾರ ರಾತ್ರಿ 11.30ರ ವೇಳೆಗೆ ಘಟನೆ ನಡೆದಿದ್ದು, ದುಷ್ಕರ್ಮಿಗಳು ಪಡೀಲ್ನಿಂದ ಫರಂಗಿಪೇಟೆ ಯವರೆಗೆ ಶಾಸಕರ ಕಾರನ್ನು ಬೆನ್ನಟ್ಟಿದ್ದು, ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವ್ಯಾಚ್ಯವಾಗಿ ಬೈದು ತಲವಾರು ಝಳಪಿಸಿ ಪರಾರಿಯಾಗಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲೇನಿದೆ?
ಶಾಸಕರು 12ರಂದು ಬೆಂಗಳೂರಿಗೆ ಹೋಗಿದ್ದು, ಗುರುವಾರ ಮಂಗಳೂರು ವಿಮಾನ ನಿಲ್ದಾಣದಿಂದ ಬೆಳ್ತಂಗಡಿಗೆ ಮರಳುವ ವೇಳೆ ಮಂಗಳೂರು ಸರ್ಕ್ಯೂಟ್ಗೆ ಹೋಗಿ ಅಲ್ಲಿ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು. ರಾತ್ರಿ 10:75ರ ವೇಳೆಗೆ ಶಾಸಕರು ಸಂಬಂಧಿಕರ ಕಾರಿನಲ್ಲಿ, ನಾನು ಶಾಸಕರ ಕಾರಿನಲ್ಲಿ ತೆರಳುತ್ತಿದ್ದೆವು. ಪಡೀಲ್ ಮಾರ್ಗವಾಗಿ ಬರುತ್ತಾ ನಾಗುರಿ ರೈಲ್ವೇ ಬ್ರಿಡ್ಜ್ ತಳಭಾಗದಲ್ಲಿ ಸ್ಕಾರ್ಪಿಯೋ ಕಾರೊಂದು ಮೊದಲು ನಾನು ಚಲಾಯಿಸುತ್ತಿದ್ದ ಶಾಸಕರ ಕಾರನ್ನು ಹಿಂಬಾಲಿಸುತ್ತಿತ್ತು, ಇದನ್ನು ಗಮನಿಸಿ ನಾನು ಶಾಸಕರಿಗೆ ಕರೆ ಮಾಡಿದೆ. ಅವರು ತಾವಿದ್ದ ಕಾರನ್ನು ಹಿಂಬಾಲಿಸುವಂತೆ ತಿಳಿಸಿದರು.
ನಾನು ಕಾರಿನ ಗ್ಲಾಸನ್ನು ಇಳಿಸಿದ ನಂತರ ನನ್ನನ್ನು ಬಿಟ್ಟು ಶಾಸಕರಿದ್ದ ಕಾರಿನತ್ತಾ ಹೋದ ದುಷ್ಕರ್ಮಿಗಳ ಕಾರು ಶಾಸಕರ ಕಾರನ್ನು ಹಿಂಬಾಲಿಸಲು ಶುರುಮಾಡಿದರು. 11:45ರ ಸಮಯದಲ್ಲಿ ಶಾಸಕರ ಕಾರಿಗೆ ಅಡ್ಡ ಬಂದ ದುಷ್ಕರ್ಮಿಗಳು ಕಾರಿನ ಚಾಲಕ ಕುಶಿತ್ರನ್ನು ಅವಾಚ್ಯ ಪದಗಳಿಂದ ನಿಂದಿಸಿ ಆಯುಧಗಳನ್ನು ತೋರಿಸಿ ಬೆದರಿಸಿದರು. ನಾನು ಫರಂಗಿಪೇಟೆ ಹೊರ ಠಾಣೆಯ ಬಳಿ ಕಾರನ್ನು ನಿಲ್ಲಿಸುತ್ತಿದ್ದಂತೆ ದುಷ್ಕರ್ಮಿಗಳು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಪರಾರಿಯಾದರು ಎಂದು ದೂರಿನಲ್ಲಿ ನವೀನ್ ಉಲ್ಲೇಖಿಸಿ ಸ್ಕಾರ್ಪಿಯೋ ಕಾರಿನಲ್ಲಿ ಬಂದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications