ಸರ್ಕಾರಿ ಆದೇಶವನ್ನೇ ತಿರುಚಿ ವೈರಲ್ ಮಾಡಿದ ಕಿಡಿಗೇಡಿಗಳು
ಮಂಗಳೂರು, ಆಗಸ್ಟ್ 12 : ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗುವ ಸುಳ್ಳು ಸುದ್ದಿಗಳು ಸಮಾಜದ ಸ್ವಾಸ್ಥ್ಯ ಕೆಡಿಸಿದ ಹಲವಾರು ನಿದರ್ಶನಗಳು ನಮ್ಮ ಮುಂದಿವೆ . ಸುಳ್ಳು ಸುದ್ದಿಗಳು ವೈರಲ್ ಆಗಿ ಅಲ್ಲೋಲ ಕಲ್ಲೂಲ ಸೃಷ್ಟಿಯಾದ ಉದಾಹಣೆಗಳಿವೆ.
ಇದಕ್ಕೆ ಸಾಕ್ಷಿ ಎಂಬಂತೆ, ಜಿಲ್ಲಾಡಳಿತದ ಆದೇಶದ ಪ್ರತಿಯನ್ನೇ ತಿರುಚಿ ಕಿಡಿಗೇಡಿಗಳು ವೈರಲ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಶುಕ್ರವಾರ ಆಗಸ್ಟ್ 10 ರಂದು ಕರಾವಳಿಯಲ್ಲಿ ಭಾರೀ ಮಳೆಯಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಹವಾಮಾನ ಇಲಾಖೆಯ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರು.

ಶುಕ್ರವಾರ ಸಂಜೆಯೇ ಈ ಕುರಿತು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು .
ಆದರೆ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯನ್ನೇ ತಿರುಚಿರುವ ಕಿಡಿಗೇಡಿಗಳು, ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಎಂಬುದನ್ನು ರಜೆಯಿಲ್ಲ, ರಜೆ ರದ್ದುಗೊಳಿಸಿದ್ದಾರೆ ಎಂದು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ಒಂದೆಡೆ ಶಾಲಾ-ಕಾಲೇಜುಗಳಿಗೆ ರಜೆ ಎಂಬ ಸುದ್ದಿ ಮಾಧ್ಯಮ ಗಳಲ್ಲಿ ಪ್ರಸಾರವಾಗುತ್ತಿದ್ದರೆ , ಅದರ ಬೆನ್ನಲ್ಲೇ ರಜೆಯಿಲ್ಲ ಎಂಬ ಪತ್ರಿಕಾ ಪ್ರಕಟನೆ ಕೂಡ ಹರಿದಾಡಿತ್ತು. ಇದರಿಂದ ವಿದ್ಯಾರ್ಥಿಗಳು, ಪೋಷಕರು, ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಗೊಂದಲಕ್ಕೆ ಒಳಗಾದರು.

ಈ ಗೊಂದಲಕ್ಕೆ ಗುರಿಯಾದ ಹಲವಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಿ ಹಿಂದಿರುಗಿದರು. ಅಧಿಕೃತ ಆದೇಶದ ಪ್ರತಿಯನ್ನು ಕಿಡಿಗೇಡಿಗಳು ತಿರುಚಿದ ವಿಚಾರ ಈಗ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು ಈ ಘಟನೆಯನ್ನು ಗಂಭೀರವಾಗಿ ಪರಿಗಣಸಿದೆ. ಈ ಕುರಿತು ಸೈಬರ್ ಪೊಲೀಸರಿಗೆ ದೂರು ದಾಖಲಿಸಲು ಜಿಲ್ಲಾಡಳಿತ ಮುಂದಾಗಿದೆ.












Click it and Unblock the Notifications