ಮಂಗಳೂರಿನ ಪಿಲಿಕುಳದಲ್ಲಿ ನೂತನ ಮತ್ಸ್ಯಾಲಯ ಆರಂಭ
ಮಂಗಳೂರು, ಸೆಪ್ಟೆಂಬರ್, 14 : ವಿನಾಶದ ಅಂಚಿನಲ್ಲಿರುವ ಸಸ್ಯ, ಪ್ರಾಣಿ, ಪಕ್ಷಿ, ಮೀನಿನ ಸಂತತಿಯ ತಳಿಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಹೇಳಿದರು.
ನಗರದ ಪಿಳಿಕುಳ ನಿಸರ್ಗಧಾಮದಲ್ಲಿ ನೂತನ ಮತ್ಸ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಇಕೋ ಅರ್ಬನ್ ಪಾರ್ಕ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಬಿಡುಗಡೆಯಾಗಿರುವ 2 ಕೋಟಿ ಅನುದಾನವನ್ನು ಜಿಲ್ಲಾಡಳಿತಕ್ಕೆ ನೀಡಿದರು.[ನೇತ್ರಾವತಿ ಉಳಿಸಲು ಸೆ.15ರಂದು ದಿನಪೂರ್ತಿ ಹೆದ್ದಾರಿ ಬಂದ್]

ಸ್ಥಳೀಯವಾಗಿರುವ ಮೀನುಗಳಲ್ಲಿ ಇಂದು ಅನೇಕ ತಳಿಗಳು ಮರೆಯಾಗಿವೆ. ಈ ನಿಟ್ಟಿನಲ್ಲಿ ಪಿಲಿಕುಳ ನಿಸರ್ಗಧಾಮ ಹಮ್ಮಿಕೊಂಡಿರುವ ಯೋಜನೆ ಮಹತ್ತರವಾದುದು. ಇದಕ್ಕಾಗಿ ನಿಸರ್ಗಧಾಮ ಹಾಗೂ ಅನುದಾನ ಬಿಡುಗಡೆ ಮಾಡಿರುವ ಮೀನುಗಾರಿಕಾ ಇಲಾಖೆ ಸಚಿವ ಅಭಯ ಚಂದ್ರ ಅವರನ್ನು ಶ್ಲಾಘಿಸಿದರು.
ಇಕೋ ಅರ್ಬನ್ ಪಾರ್ಕ್ ಒಟ್ಟು 10 ಎಕರೆ ಜಾಗದಲ್ಲಿ ಸ್ಥಾಪನೆಯಾಗಲಿದ್ದು, ಇಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ, ತ್ಯಾಜ್ಯ ವಿಲೇವಾರಿ ಮಾದರಿ, ಕೈಗಾರಿಕೆಗಳ ತ್ಯಾಜ್ಯ ಸಂಸ್ಕರಣೆ, ಇಂಧನ ಉಳಿತಾಯ, ಮಳೆ ನೀರು ಕೊಯ್ಲು ಸೇರಿದಂತೆ ವಿವಿಧ ಅಂಶಗಳ ಮಾಹಿತಿ ನೀಡುವ ಮಾದರಿಗಳು, ಪ್ರಾತ್ಯಕ್ಷಿಕೆಗಳನ್ನು ಒಳಗೊಂಡಿದೆ ಎಂದು ಪಾರ್ಕಿನ ರೂಪುರೇಷೆ ಕುರಿತಾಗಿ ಮಾಹಿತಿ ನೀಡಿದರು.
ರಾಜ್ಯ ಮೀನುಗಾರಿಕೆ ಮತ್ತು ಯುವಸಬಲೀಕರಣ ಖಾತೆ ಸಚಿವ ಅಭಯ ಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜೆ. ಆರ್ ಲೋಬೋ, ಮೊದೀನ್ ಬಾವಾ, ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಮುಖ್ಯ ಅತಿಥಿಯಾಗಿದ್ದರು. ಪಿಲಿಕುಳ ವನ್ಯಜೀವಿ ಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ವಿಜ್ಞಾನ ಕೇಂದ್ರದ ನಿರ್ದೇಶಕ ಡಾ|| ಕೆ.ವಿ ರಾವ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications