ನಿಡ್ಡೋಡಿಯ ರೈತನ ಮಗಳು ಮಿಶಲ್ ಯುಪಿಎಸ್ಸಿ ಸಾಧಕಿ!
ಯುಪಿಎಸ್ಸಿ ಪರೀಕ್ಷೆಯಲ್ಲಿ 387ನೇ ಶ್ರೇಯಾಂಕ ಪಡೆದ ನಿಡ್ಡೋಡಿಯ ಮಿಶಲ್ ಕ್ಟೀನಿ ಡಿ'ಕೋಸ್ಟರಿಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡುವಾಸೆ.
2015ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಮಂಗಳೂರು ತಾಲೂಕಿನ ಗ್ರಾಮೀಣ ಪ್ರದೇಶ ನಿಡ್ಡೋಡಿ ಗ್ರಾಮದ ನೀರುಡೆಯ ಮಿಶಾಲ್ ಕ್ವೀನಿ ಡಿ'ಕೋಸ್ಟ 387ನೇ rank ಪಡೆದಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಹೆತ್ತವರಿಗೆ, ಊರಿಗೆ ಕೀರ್ತಿ ತಂದಿರುವ ಮಿಶಲ್ ಕ್ಟೀನಿ ಡಿ'ಕೋಸ್ಟ ದಕ್ಷ ಐಎಎಸ್ ಅಧಿಕಾರಿಯಾಗಿ ಗ್ರಾಮೀಣ ಪ್ರದೇಶದಲ್ಲಿಯೇ ಸೇವೆ ಮಾಡಬೇಕೆನ್ನುವ ಆಸೆಯನ್ನು ಹೊಂದಿದ್ದಾರೆ.[ಯುಪಿಎಸ್ಸಿ: ಕರ್ನಾಟಕದ ಸಾಧಕರಿಗೊಂದು ಅಭಿನಂದನೆ]
ಮಿಶಲ್ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ನೀರುಡೆಯ ಸೈಂಟ್ ಫ್ರಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಕಿನ್ನಿಗೋಳಿಯ ಲಿಟ್ಲ್ ಪ್ಲವರ್ ಪ್ರೌಢಶಾಲೆಯಲ್ಲಿ ಮಾಡಿದ್ದರು. ಮೂಡುಬಿದಿರೆ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ 92.6 ಶೇ. ಅಂಕಗಳೊಂದಿಗೆ ದ್ವಿತೀಯ ಪಿ.ಯು. ತೇರ್ಗಡೆಯಾಗಿ ಬೆಂಗಳೂರಿನ ಆರ್ವಿಸಿಇ ಕಾಲೇಜಿಗೆ ಸೇರಿ ಇನ್ಫರ್ಮೇಶನ್ ಅಂಡ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದ್ದಾರೆ. [ಯುಪಿಎಸ್ಸಿಯಲ್ಲಿ 56ನೇ ಶ್ರೇಯಾಂಕ ಪಡೆದ ಮೈಸೂರಿನ ಹುಡುಗ]
ಬಿ.ಇ. ಮುಗಿಸಿ ಸುಮಾರು ಒಂದೂವರೆ ವರ್ಷ ಸಿವಿಲ್ ಸರ್ವಿಸ್ ಕೋಚಿಂಗ್ ಪಡೆದುಕೊಳುತ್ತಿರುವಂತೆಯೇ ಕೆಪಿಎಸ್ಸಿ ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಬಳಿಕ 2015ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು 387 rank ಪಡೆದು ಕೊಂಡಿದ್ದಾರೆ.[ಯುಪಿಎಸ್ಸಿ ಫಲಿತಾಂಶ : ಕರ್ನಾಟಕದ ಗೌಡಗೆ 105ನೇ ಸ್ಥಾನ]

ಚಿಕ್ಕಂದಿನಿಂದಲೇ ವಿದ್ಯಾಭ್ಯಾಸದಲ್ಲಿ ಮುಂದಿದ್ದ ಈಕೆ ಪ್ರೈಮರಿ, ಹೈಸ್ಕೂಲ್ ಮತ್ತು ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ಪಾಸಾಗಿದ್ದರು. ಕ್ರೀಡೆಯಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದ ಈಕೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ಗಳಿಸಿದ್ದರು. ಅಲ್ಲದೆ, ಹಲವು ಬಾರಿ ರಾಜ್ಯಮಟ್ಟದ ಅಥ್ಲೆಟಿಕ್ಸ್ಗಳಲ್ಲಿ ಭಾಗವಹಿಸಿ ಚಾಂಪಿಯನ್ ಆಗಿ ಮಿಂಚಿದ್ದರು.[ಯುಪಿಎಸ್ಸಿ ಪರೀಕ್ಷೆಗೆ ಕಾಗದದ ಅಡ್ಮಿಟ್ ಕಾರ್ಡ್ ಇರಲ್ಲ!]
ಲಾಜರಸ್ ಡಿಕೋಸ್ತಾ ದಂಪತಿಯದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿರುವ ಕೃಷಿ ಕುಟುಂಬ. ಮೂವರು ಮಕ್ಕಳಲ್ಲಿ ಹಿರಿಯವಳು ನಿಶಾಲ್ ರಾಣಿ ಡಿಕೋಸ್ತಾ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ಸೋನಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಗ ಕ್ವೀನ್ಸನ್ ಹನಿ ಡಿಕೋಸ್ತಾ ಮೆಕಾನಿಕಲ್ ಇಂಜಿನಿಯರಿಂಗ್ ಮಗಿಸಿ ಕೆಲವು ತಿಂಗಳಿಂದ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಹುದ್ದೆ ನಿರ್ವಹಿಸುತ್ತಿದ್ದಾರೆ.
ತನ್ನ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಸುಮಾರು 4 ಎಕ್ರೆ ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ಕರಿ ಮೆಣಸು ಬೆಳೆಯನ್ನು ಮೂಲ ಕಸುಬಾಗಿ ನಿರ್ವಹಿಸುತ್ತಿರುವ ಲಾಜರಸ್ ಡಿಕೋಸ್ತಾ, ಎಲ್ಐಸಿ ಯ ಏಜೆಂಟರಾಗಿದ್ದುಕೊಂಡು ತನ್ನ ಮಕ್ಕಳ ವಿಧ್ಯಾಭ್ಯಾಸಕ್ಕೆ ಯಾವುದೆ ರೀತಿಯ ತೊಂದರೆ ಬರದಂತೆ ನೋಡಿಕೊಂಡು ಅವರವರ ಅಭಿರುಚಿಗೆ ತಕ್ಕಂತೆ ವಿದ್ಯಾಭ್ಯಾಸವನ್ನು ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೃಷಿಯ ಬಗ್ಗೆ ಬೇಸಿಕ್ ನಾಲೇಜ್ ಇದೆ. ಧಾರ್ಮಿಕ ಕ್ಷೇತ್ರದಲ್ಲಿಯೂ ಒಲವಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳಲ್ಲಿಯೂ ಶಾಲಾ ದಿನಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದೆ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ಕಾರ್ಯಕ್ರಮಗಳಲ್ಲಿ ತಾನು ಆಸಕ್ತಿಯನ್ನು ಹೊಂದಿದ್ದೇನೆ. ಯಕ್ಷಗಾನದ ಬಗ್ಗೆಯೂ ಆಸಕ್ತಿ ಇದೆ ಎನ್ನುತ್ತಾರೆ ಮಿಶೆಲ್. ಯುಪಿಎಸ್ಸಿ ಪರೀಕ್ಷೆಗಾಗಿ ಹೊಸದಿಲ್ಲಿಯ ವಾಜಿರಾಂ ಅಂಡ್ ರವಿ, ಅನಘ್ರ್ಯ ಐಎಎಸ್ ಅಕಾಡೆಮಿಯಲ್ಲಿ ಕನ್ನಡದಲ್ಲಿ ತರಬೇತಿ ಪಡೆದಿದ್ದರು. ಈ ಮೂಲಕ ತಮ್ಮ ಗುರಿಯನ್ನು ತಲುಪಿದ್ದಾರೆ.
ಗ್ರಾಮೀಣ ಪ್ರದೇಶದಿಂದ ನಾನು ಬಂದಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿಯೇ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಬೇಕೆನ್ನುವದು ನನ್ನ ಕನಸು ಎನ್ನುತ್ತಿರುವ ಮಿಶೆಲ್ ಮುಂದಿನ ವೃತ್ತಿ ಬದುಕಿಗೆ ನಮ್ಮ ಕಡೆಯಿಂದ ಗುಡ್ಲಕ್.












Click it and Unblock the Notifications