ದಕ್ಷಿಣ ಕನ್ನಡದಲ್ಲಿ ಕಾವೇರಿದ ಎತ್ತಿನಹೊಳೆ ವಿರೋಧಿ ಹೋರಾಟ
ಮಂಗಳೂರು, ಮೇ 17 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ತೀವ್ರಗೊಂಡಿದೆ. ಯೋಜನೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಮೇ 19ರಂದು ದಕ್ಷಿಣ ಕನ್ನಡ ಬಂದ್ಗೆ ಕರೆ ನೀಡಲಾಗಿದೆ. ಬಂದ್ಗೆ ಪೂರಕವಾಗಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಸೋಮವಾರ ಸಂಜೆ ಅಂಬೇಡ್ಕರ್ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ತನಕ ನಡೆದ ಜಾಥಾದಲ್ಲಿ ವಿವಿಧ ಧರ್ಮ ಗುರುಗಳು, ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಪಾಲ್ಗೊಂಡಿದ್ದರು. [ಎತ್ತಿನಹೊಳೆ ಯೋಜನೆ ಬಗ್ಗೆ ಆತಂಕ ಬೇಡ : ಸಿದ್ದರಾಮಯ್ಯ]

ಯಾವುದೇ ಕಾರಣಕ್ಕೂ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಬಾರದು. ನಮ್ಮ ರಕ್ತದ ಕೊನೆಯ ಹನಿ ಇರುವರೆಗೂ ಹೋರಾಟ ಮಾಡುತ್ತೇವೆ. ನೀರು ಕೊಡಲು ನಮ್ಮ ವಿರೋಧವಿಲ್ಲ. ಆದರೆ, ಜಿಲ್ಲೆಯನ್ನು ಬರಿದು ಮಾಡಿ ಇನ್ನೊಂದು ಜಿಲ್ಲೆಗೆ ನೀರು ನೀಡುವುದು ಬೇಡ. ಎಲ್ಲಾ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು, ಯೋಜನೆಯ ಸಾಧಕ-ಬಾಧಕದ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು. ['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]
ನೀರಿಗಾಗಿ ಒಗ್ಗೂಡೋಣ : 'ಸರ್ವಧರ್ಮದವರು ಸೇರಿ ಈ ಪ್ರತಿಭಟನೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ತಕ್ಷಣ ಸಭೆ ಕರೆಯಲಿ ಇಲ್ಲದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಅನಿವಾರ್ಯವಾದೀತು' ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವನಂದ ಸ್ವಾಮೀಜಿ ಹೇಳಿದರು. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]
ಸರಕಾರಕ್ಕೆ ಬಿಸಿ ಮುಟ್ಟಿಸೋಣ : 'ನೀರಿಗೆ ಜಾತಿ ಮತ ಭೇದವಿಲ್ಲ. ಎಲ್ಲರೂ ಹೋರಾಟದಲ್ಲಿ ಕೈ ಜೋಡಿಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಸಂಘಟಿತ ಹೋರಾಟ ಮೂಲಕ ಮಾಡೋಣ. ಸಿದ್ದರಾಮಯ್ಯ ಈ ಹೋರಾಟಕ್ಕೆ ಪ್ರತಿಸ್ಪಂದನೆ ನೀಡದಿದ್ದರೆ ರಸ್ತೆಯಲ್ಲಿ ಮಲಗಲು ಸಿದ್ಧ' ಎಂದು ಸೈಯ್ಯದ್ ಇಬ್ರಾಹಿಂ ಹೇಳಿದರು.

ಹನಿ ನೀರನ್ನು ಹೊರಗೆ ಬಿಡುವುದಿಲ್ಲ : 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಬರವಿದೆ. ನೇತ್ರಾವತಿ ಉಳಿವಿಗಾಗಿ ಹೋರಾಟ ಮುಂದುವರಿಯಲಿದೆ. ನೇತ್ರಾವತಿ ಹಕ್ಕನ್ನು ಕಸಿಯಬೇಡಿ, ಹನಿ ನೀರನ್ನು ಹೊರಗೆ ಕೊಂಡೊಯ್ಯಲು ಬಿಡುವುದಿಲ್ಲ' ಎಂದು ಬಿಷಪ್ ಕಚೇರಿ ಪಿಆರ್ ಓ ಫಾದರ್ ವಿಲಿಯಂ ಮಿನೇಜಸ್ ಹೇಳಿದರು.
ಎಲ್ಲಾ ಪಕ್ಷಗಳು ಕಾರಣ : 'ಎತ್ತಿನಹೊಳೆ ಯೋಜನೆ ಜಾರಿಯಾಗಲು ಎಲ್ಲ ಪಕ್ಷಗಳು ಕಾರಣವಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಈ ರೀತಿ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ನಿಜಕ್ಕೂ ಜಿಲ್ಲೆಯ ಹಿತದೃಷ್ಠಿಯಿಂದ ಈ ಹೋರಾಟ ಅತೀ ಅಗತ್ಯ' ಎಂದು ಶಾಸಕ ಜೆ. ಆರ್. ಲೋಬೊ ಹೇಳಿದರು.













Click it and Unblock the Notifications