ವೈದ್ಯನಿಂದ ಅತ್ಯಾಚಾರ, ಮಂಗಳೂರು ಮಹಿಳೆ ದೂರು
ಮಂಗಳೂರು, ಮಾ. 31 : ಸರಕಾರಿ ವೈದ್ಯರೊಬ್ಬರು ಮದುವೆಯಾಗುವುದಾಗಿ ನಂಬಿಸಿ ಮನೆಗೆ ಕರೆಸಿ ಅತ್ಯಾಚಾರ ನಡೆಸಿದ್ದಾರೆ, ಮದುವೆ ನಿರಾಕರಿಸಿ ಮೋಸ ಎಸಗಿದ್ದಾರೆ ಎಂದು ಆರೋಪಿಸಿ, ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.
9 ತಿಂಗಳ ಹಿಂದೆ ಮದುವೆಗೆ ಗಂಡು ಹುಡುಕುತ್ತಿರುವ ಸಂದರ್ಭ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಡಾ.ಸುರೇಶ್ ಕುಮಾರ್ ಎಂಬ ಸರಕಾರಿ ವೈದ್ಯ ಯುವತಿಗೆ ಪರಿಚಯವಾಗಿದ್ದ. ಆತನ ಮೊದಲ ಪತ್ನಿಗೆ ವಿಚ್ಛೇದನ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದು, ಅದನ್ನು ಯುವತಿ ಒಪ್ಪಿ ಮದುವೆ ಬಗ್ಗೆ ಪ್ರಸ್ತಾಪ ಕಳುಹಿಸಿದ್ದಳು. ನಂತರ ಇಬ್ಬರೂ ಮೊಬೈಲ್ ಫೋನ್ ಮೂಲಕ ಮಾತಾಡುತ್ತ ಸುರೇಶನು ಬೆಂಗಳೂರಿಗೆ ಬಂದಾಗ ಇಬ್ಬರೂ ನೋಡಿ ಪರಸ್ಪರ ಮಾತಾಡಿ ಮದುವೆಗೆ ಒಪ್ಪಿಕೊಂಡಿದ್ದರು.

2014ರ ಆ.8ರಂದು ಸುರೇಶ ಕುಮಾರನು ಯುವತಿಯನ್ನು ಮಂಗಳೂರಿನ ಕಂಕನಾಡಿಯ ಆತನ ಮನೆಗೆ ಕರೆಸಿಕೊಂಡು, ಯಾವುದೋ ಮಾತ್ರೆಯನ್ನು ಸೇವಿಸಲು ಕೊಟ್ಟು, ಮತ್ತು ಬರಿಸಿ ಅತ್ಯಾಚಾರವೆಸಗಿದ್ದ ಎಂದು ಆಕೆ ದೂರಿದ್ದಾಳೆ. ಅಲ್ಲದೆ ಆತನ ಮೊದಲ ಪತ್ನಿಯೊಂದಿಗೆ ವಿಚ್ಛೇದನವಾದರೂ ಇಬ್ಬರೂ ಜತೆಯಲ್ಲೇ ವಾಸಿಸುತ್ತಿದ್ದುದನ್ನು ಯುವತಿ ಗಮನಿಸಿದ್ದಳು. [ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]
ಇದನ್ನು ನೋಡಿದ ಯುವತಿ ಸುರೇಶನಲ್ಲಿ ಜಗಳವಾಡಿದ್ದಳು. ಬಳಿಕ ಸುರೇಶ ಕುಮಾರ ನಾನು ನಿನ್ನನ್ನು ಮದುವೆಯಾಗುವುದಿಲ್ಲವೆಂದು ತಿಪ್ಪೆ ಸಾರಿದ್ದ. ಅಲ್ಲದೆ, ನಾನು ಇದೇ ರೀತಿ ಬೇಕಾದಷ್ಟು ಹುಡುಗಿಯರಿಗೆ ಮೋಸ ಮಾಡಿದ್ದೇನೆಂದು ಆಕೆಯೆದುರೇ ಹೇಳಿದ್ದ. ಒಂದು ಲಕ್ಷ ರೂ. ಹಣ ಕೊಡುತ್ತೇನೆ. ಅದನ್ನು ತೆಗೆದುಕೊಂಡು ಹೋಗು. ದೂರು ನೀಡಿದರೆ ರೌಡಿಗಳ ಮೂಲಕ ಕೊಲ್ಲಿಸುವುದಾಗಿ ಬೆದರಿಸಿದ್ದ ಎಂದು ಆಕೆ ಆರೋಪಿಸಿದ್ದಾಳೆ.
ಈ ಬಗ್ಗೆ ಯುವತಿ ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಘಟನೆ ನಡೆದ ಸ್ಥಳ ಮಂಗಳೂರು ಆಗಿರುವುದರಿಂದ ಅಲ್ಲಿಂದ ಪ್ರಕರಣವನ್ನು ಮಂಗಳೂರು ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ.












Click it and Unblock the Notifications