ಹಂತಕರನ್ನು ಬಂಧಿಸದಿದ್ದರೆ ದಕ ಜಿಲ್ಲೆ ಬಂದ್: ಬಜರಂಗ ದಳ
ಮಂಗಳೂರು, ಅಕ್ಟೋಬರ್. 14: ಮೂಡಬಿದ್ರೆಯಲ್ಲಿ ಬಜರಂಗ ದಳದ ಕಾರ್ಯಕರ್ತರೊಬ್ಬರ ಹತ್ಯೆ ನಡೆದು ಹಲವು ದಿನಗಳೇ ಕಳೆದಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಮತ್ತು ಸರ್ಕಾರ ವಿಫಲವಾಗಿದೆ. ಹಂತಕರನ್ನು ಅಕ್ಟೋಬರ್ 15ರೊಳಗೆ ಬಂಧಿಸದಿದ್ದರೆ ಜಿಲ್ಲೆಯನ್ನು ಬಂದ್ ಮಾಡಲಾಗುವುದು ಎಂದು ಬಜರಂಗದಳ ಎಚ್ಚರಿಸಿದೆ.
ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ವಿಟ್ಲ ಶಾಖೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಬಜರಂಗ ದಳದ ಮಂಗಳೂರು ವಿಭಾಗದ ಸಂಯೋಜಕ ಮುರಲಿಕೃಷ್ಣ ಹಸಂತಡ್ಕ, ಪ್ರಶಾಂತ್ ಕೊಲೆ ಪ್ರಜಾಪ್ರಭುತ್ವ ವ್ಯವಸ್ಥೆಯ ಕೊಲೆ ಎಂದು ಆರೋಪಿಸಿದರು.[ಮೂಡಬಿದಿರೆಯಲ್ಲಿ ಬೆಳ್ಳಂಬೆಳಗ್ಗೆ ಹೂವಿನ ವ್ಯಾಪಾರಿ ಹತ್ಯೆ]
ಈ ಕೃತ್ಯದ ಹಿಂದೆ ಹಣ ಮತ್ತು ಕಾಣದ ಕೈಗಳ ಕೈವಾಡವಿದ ಎಂಬ ಶಂಕೆ ವ್ಯಕ್ತವಾಗುತ್ತಿದೆ . ಗೋ ಹತ್ಯೆ ಮಾಡಿದವರಿಗೆ ಸ್ಪಂದಿಸಿ ಹತ್ತು ಲಕ್ಷ ಪರಿಹಾರ ನೀಡುವ ಸರ್ಕಾರ ಅಮಾಯಕ ಹಿಂದೂ ಕಾರ್ಯಕರ್ತನ ಹತ್ಯೆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹೂವಿನ ವ್ಯಾಪಾರಿ ಹೊಸಬೆಟ್ಟು ಗ್ರಾಮದ ನಿವಾಸಿ ಪ್ರಶಾಂತ್ (29) ಎಂಬುವವರನ್ನು ಅಕ್ಟೋಬರ್ 9 ರಂದು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದಾದ ಮೇಲೆ ಜಿಲ್ಲೆಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.