ಪ್ರಕೃತಿಯನ್ನು ನಾವು ಉಳಿಸಿದರೆ, ಅದು ನಮ್ಮನ್ನು ಉಳಿಸುತ್ತದೆ
ಮಂಗಳೂರು, ಆ 17: ಆಟಿ (ಆಷಾಢ) ತಿಂಗಳಿನ ಅಂಗವಾಗಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ತುಳುಸಂಘವು "ಆಟಿದ ಕೂಟ" ಕಾರ್ಯಕ್ರಮವನ್ನು ರವೀಂದ್ರ ಕಲಾಭವನದಲ್ಲಿ ಶುಕ್ರವಾರ (ಆ 16) ಹಮ್ಮಿಕೊಂಡಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಸಚಿವ ಪ್ರಭಾಕರ ನೀರುಮಾರ್ಗ, ತೆಂಗಿನ ಹೊಂಬಾಳೆಯನ್ನು ಅರಳಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು "ತುಳುನಾಡು ಆಚಾರ-ವಿಚಾರವನ್ನು ತುಂಬಿದ ನಾಡು . ಕೃಷಿ ಕುಟುಂಬಗಳಿಂದ ಇವು ಬೆಳೆದು ಬಂದಿದೆ. ಆದರೆ ಈಗ ಕೃಷಿಯ ಜೊತೆಗೆ ನಮ್ಮ ಹಬ್ಬ, ಆಚಾರ-ವಿಚಾರಗಳೂ ನಾಶವಾಗುತ್ತಿದೆ. ಹಿಂದೆ ಆಟಿ ತಿಂಗಳಲ್ಲಿ ತೀವ್ರ ಬಡತನ ಕಾಡುತ್ತಿದ್ದರೂ, ಸಂಸ್ಕೃತಿಗೆ ಬಡತನವಿರಲಿಲ್ಲ. ನಾವದನ್ನು ಮುಂದಿನ ಪೀಳಿಗೆಗಳಿಗೂ ಮುಂದುವರಿಸೋಣ" ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಉದಯ ಕುಮಾರ್ ಎಂ.ಎ, "ಕರಾವಳಿಯಲ್ಲಿ ಹಲವು ರೀತಿಯ ತುಳು ಭಾಷೆಗಳಿವೆ. ಅವುಗಳ ವೈಶಿಷ್ಟ್ಯತೆಯನ್ನು ಉಳಿಸಿಕೊಳ್ಳೋಣ. ತುಳುನಾಡಿನ ಆಚರಣೆಗಳನ್ನು ತಿಳಿದುಕೊಂಡು, ಉಳಿಸಿ- ಬೆಳೆಸೋಣ," ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಟಿ ತಿಂಗಳ ವಿಶೇಷವಾದ "ಆಟಿಕಳೆಂಜ"ನ ನೃತ್ಯವಿತ್ತು. ಆಟಿ ತಿಂಗಳ ತಿನಸುಗಳಾದ ಪತ್ರೋಡೆ, ಸಾರ್ನೋಡ್ಡೆ, ಹಲಸಿನಗಟ್ಟಿ, ಮೂಡೆ, ಅಕ್ಕಿ ಉಂಡೆ ಮುಂತಾದವುಗಳ ಸವಿಯಿತ್ತು.

ಕಾರ್ಯಕ್ರಮದಲ್ಲಿ ತುಳುಸಂಘದ ಸಹ ನಿರ್ದೇಶಕಿ ಡಾ| ಅನುಸೂಯ ರೈ, ಕಾರ್ಯದರ್ಶಿ ಪ್ರಜ್ಞಾ, ಹಾಗೂ ಜತೆ ಕಾರ್ಯದರ್ಶಿ ಮೌಶಿತ ಉಪಸ್ಥಿತರಿದ್ದರು. ಲಿಖಿತ ಕಾರ್ಯಕ್ರಮ ನಿರೂಪಿಸಿದರು.












Click it and Unblock the Notifications