ಜಕಾರ್ತಾದಲ್ಲಿ ಮಿಂಚಿದ ಮಂಗಳೂರಿನ ಯುವಕ ರಘುವೀರ್
ಇಂಡೋನೇಷ್ಯಾದಲ್ಲಿ ಅಂತಾರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿ ಮಂಗಳೂರಿನ ರಘುವೀರ್ ಸೂಟರ್ಪೇಟೆಯವರು ಕರ್ನಾಟಕದಿಂದ ಏಕೈಕ ಯುವನಾಯಕರಾಗಿ ಆಯ್ಕೆಯಾಗಿದ್ದರು.
ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಆಶ್ರಯದಲ್ಲಿ ಆಯೋಜಿಸಲ್ಪಡುವ ಅಂತಾರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮ ಇಂಡೋನೇಷ್ಯಾದ ಜಕಾರ್ತದಲ್ಲಿ 17ನೇ ನವೆಂಬರ್ 2017ರಿಂದ 18ನೇ ಡಿಸೆಂಬರ್ 2017ರ ಒಂದು ತಿಂಗಳವರೆಗೆ ನಡೆಯಿತು.
ಯುವ ಸಬಲೀಕರಣ ಹಾಗು ಸ್ವಯಂ ಸೇವಕತ್ವದ ಬಗ್ಗೆ ವಿಚಾರ ವಿನಿಮಯದ ಬಗ್ಗೆ ಪ್ರೋತ್ಸಾಹಿಸಲು ಈ ಸಮ್ಮೇಳನವನ್ನು ಜಕಾರ್ತಾದಲ್ಲಿ ಹಮ್ಮಿಕೊಳ್ಳಲಾಗಿತ್ತು. ಯುವ ಸಂಘಟನೆಗಳನ್ನು ಬಲಪಡಿಸಲು ಭಾರತದ ಪ್ರತಿನಿಧಿಯಾಗಿ ಯುವನಾಯಕ, ಸಾಮಾಜಿಕ ಕಾರ್ಯಕರ್ತರಾಗಿರುವ ರಘುವೀರ್ ಸೂಟರ್ಪೇಟೆ ಇವರು ಭಾಗವಹಿಸಿದ್ದರು.
ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ನೆಹರೂ ಯುವ ಕೇಂದ್ರವು ಭಾರತದಿಂದ 5 ಮಂದಿ ಯುವಕರನ್ನು ಆಯ್ಕೆ ಮಾಡಿತ್ತು.
ಉತ್ತಮ ಸಂಘಟಕ, ವಾಗ್ಮಿ, ಸಾಮಾಜಿಕ ಕಾರ್ಯಕರ್ತರೂ, ತುಳಿತಕ್ಕೊಳಗಾದ ಜನರ ಧ್ವನಿಯಾಗಿ ಸೇವೆ ನಿರ್ವಹಿಸುತ್ತಾ, ಯುವ ನಾಯಕರಾಗಿ ಗುರುತಿಸಿಕೊಂಡಿರುವ ರಘುವೀರ್ ಸೂಟರ್ಪೇಟೆಯವರು ಕಳೆದ 9 ವರ್ಷಗಳಿಂದ ಯುವ ಸಬಲೀಕರಣದ ಕುರಿತು ಅನೇಕ ಕಾರ್ಯಕ್ರಮಗಳನ್ನು ಯಶ್ವಸಿಯಾಗಿ ಸಂಘಟಿಸಿದ್ದಾರೆ.
ಇವರ ಸೇವೆಯನ್ನು ಗಮನಿಸಿ ಭಾರತ ಸರಕಾರ ಇವರನ್ನು ಆಯ್ಕೆಗೊಳಿಸಿರುವುದು ಯುವ ಸಮುದಾಯಕ್ಕೆ, ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಸಂದಿರುವ ಗೌರವ. ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಉತ್ತಮ ಎನ್.ಸಿ.ಸಿ. ಕೆಡೆಟ್ ಪ್ರಶಸ್ತಿ, ಮಂಗಳೂರಿನ ಎನ್.ವೈ.ಸಿ. (ನ್ಯಾಷನಲ್ ಯೂತ್ ಕಾರ್ಡ್) ಆಗಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರದೊಂದಿಗೆ ಸೇವೆಯನ್ನು ನಿರ್ವಹಿಸುತ್ತಿದ್ದಾರೆ.