ಮಂಗಳೂರಿನ 783 ಮಂದಿಗೆ ರೌಡಿಶೀಟರ್ ಪಟ್ಟದಿಂದ ಮುಕ್ತಿ
ಈವರೆಗೂ ರೌಡಿಶೀಟರ್ ಪಟ್ಟ ಹೊತ್ತುಕೊಂಡು ಸಮಾಜದಲ್ಲಿ ಬದುಕಲು ಕಷ್ಟ ಪಡುತ್ತಿದ್ದ, ಬರೋಬ್ಬರಿ 783 ಮಂದಿಗೆ ಮಂಗಳೂರು ಪೊಲೀಸರು ಮರುಜನ್ಮ ನೀಡಿದ್ದು, ಅವರ ಹೆಸರಿನೊಂದಿಗೆ ಅಂಟಿಕೊಂಡಿದ್ದ ರೌಡಿಶೀಟರ್ ಎಂಬ ಪದವನ್ನು ತೆಗೆದುಹಾಕಿದ್ದಾರೆ
ಮಂಗಳೂರು, ಜನವರಿ 24: ಸನ್ನಡತೆಯ ಆಧಾರದಲ್ಲಿ ಮಂಗಳೂರಿನ 783 ರೌಡಿಗಳಿಗೆ ರೌಡಿಶೀಟರ್ ಪಟ್ಟದಿಂದ ಮುಕ್ತಿ ನೀಡಲಾಗಿದೆ. ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು ರೌಡಿಶೀಟರ್ಗಳಾಗಿ ಗುರುತಿಸಿಕೊಂಡಿದ್ದ 783 ರೌಡಿಗಳು ರೌಡಿಶೀಟರ್ ಪಟ್ಟದಿಂದ ಮುಕ್ತರಾಗಿದ್ದಾರೆ.
ಮಂಗಳೂರು ನಗರದ ರೋಶನಿ ನಿಲಯದ ಸಭಾಂಗಣದಲ್ಲಿ ನಡೆದ ಮಂಗಳೂರು ನಗರ ಪೊಲೀಸರ ಪರಿವರ್ತನಾ ಸಭೆಯಲ್ಲಿ ಸನ್ನಡತೆಯ ಆಧಾರದಲ್ಲಿ 783 ರೌಡಿಗಳ ರೌಡಿಶೀಟರ್ ಫೈಲ್ಅನ್ನು ಪೊಲೀಸರು ಮುಕ್ತಾಯಗೊಳಿಸಿದ್ದಾರೆ. ಈ ಮೂಲಕ ಇಷ್ಟು ಮಂದಿ ರೌಡಿಗಳು ತಮ್ಮ ರೌಡಿಶೀಟರ್ ಹಣೆಪಟ್ಟಿಯನ್ನು ಕಳಚಿಕೊಂಡು ಸಂತಸದಿಂದ ಮನೆಗೆ ತೆರಳಿದ್ದಾರೆ.
ಮಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಖದೀಮರ ಬಂಧನ; ಖದೀಮರ ಪ್ಲಾನ್ ಏನಾಗಿತ್ತು?
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2305 ರೌಡಶೀಟರ್ಗಳಿದ್ದಾರೆ. ಇವರಲ್ಲಿ 1205 ಮಂದಿಯ ರೌಡಿಶೀಟರ್ ಪಟ್ಟಿ ಮುಕ್ತಾಯಕ್ಕೆ ಪ್ರಸ್ತಾವನೆ ಹೋಗಿತ್ತು. ಇದೀಗ ಅವರಲ್ಲಿ ಸನ್ನಡತೆಯ ಆಧಾರದಲ್ಲಿ 783 ಮಂದಿಯ ರೌಡಿಗಳ ಮೇಲಿದ್ದ ರೌಡಿಶೀಟರ್ ಪಟ್ಟವನ್ನು ತೆಗೆದುಹಾಕಲಾಗಿದೆ. ಇವರಿಗೆ ಹಲವು ವರ್ಷಗಳಿಂದ ರೌಡಿಶೀಟರ್ ಹಣೆಪಟ್ಟಿಯಿತ್ತು. ಸುಮಾರು 25 ರಿಂದ 60 ವರ್ಷಗಳವರೆಗಿನ ರೌಡಿಶೀಟರ್ಗಳು ತಮ್ಮ ಮೇಲಿದ್ದ ಕಳಂಕವನ್ನು ಕಳಚಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ರೌಡಿ ಶೀಟರ್ ಹಣೆಪಟ್ಟಿ ಕಳಚಿ ಕೊಂಡವರಿಗೆ ಮನ ಪರಿವರ್ತನೆಯ ಪಾಠ ಮಾಡಿ, ಮುಂದಕ್ಕೆ ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ಬದುಕಬೇಕು. ಯಾರು ಉತ್ತಮ ಗುಣನಡತೆಯೊಂದಿಗೆ ಬದುಕಲು ಪ್ರಯತ್ನಿಸುತ್ತಾರೊ ಅವರಿಗೆ ಇದು ಸಮಾಜದ ಮುಖ್ಯವಾಹಿನಿಗೆ ಬರಲು ಒಳ್ಳೆಯ ಅವಕಾಶ ಎಂದು ಕರೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್,"ವಿವಿಧ ಕಾರಣಗಳಿಗಾಗಿ ರೌಡಿಶೀಟರ್ ಪಟ್ಟವನ್ನು ಮೈ ಮೇಲೆ ಎಳೆದುಕೊಂಡಿದ್ದ 783 ಮಂದಿಯ ರೌಡಿಶೀಟರ್ಗಳನ್ನು ಸನ್ನಡತೆಯ ಆಧಾರದಲ್ಲಿ ಕೈ ಬಿಡಲಾಗಿದೆ. ಎಲ್ಲರನ್ನೂ ತಿಂಗಳುಗಳ ಕಾಲ ಪರಿಶೀಲಿಸಿ, ಪೂರ್ವಾಪರ ಅವರ ಸಂಪರ್ಕದ ವಿವರವನ್ನು ಪರಿಶೀಲಿಸಿದ ಬಳಿಕವಷ್ಟೇ ಈ ನಿರ್ಧಾರ ಮಾಡಲಾಗಿದೆ. ರೌಡಿಶೀಟ್ ತೆಗೆದ ಬಳಿಕವೂ ಅವರನ್ನು ಪೊಲೀಸರು ಗಮನಿಸಿರುತ್ತಾರೆ. ಗುಣನಡತೆಯಲ್ಲಿ ಮತ್ತೆ ಲೋಪ ಕಂಡುಬಂದರೆ ಮತ್ತೆ ರೌಡಿಶೀಟ್ ಹಾಕುವ ಅವಕಾಶಗಳೂ ಇದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ರೌಡಿಶೀಟರ್ ಹಣೆಪಟ್ಟಿ ಕಳಚಿಕೊಂಡ ರವಿ ರೈ ಪಜೀರ್ ಮಾಧ್ಯಮಗಳ ಜೊತೆ ಮಾತನಾಡಿ, "ದುಡುಕಿನ ಸ್ವಭಾವದಿಂದ ರೌಡಿಶೀಟರ್ ಪಟ್ಟವನ್ನು ಎಳೆದುಕೊಂಡಿದ್ದೆ. ಆಮೇಲೆ ತಪ್ಪಿನ ಅರಿವಾಗಿ ಎಲ್ಲರ ರೀತಿಯೇ ಸಹಜ ಜೀವನ ಮಾಡುತ್ತಿದೆ. ಆದರೆ ರೌಡಿಶೀಟರ್ ಪಟ್ಟ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿತ್ತು. ಸದ್ಯ ರೌಡಿಶೀಟರ್ ಪಟ್ಟದಿಂದ ಮುಕ್ತನಾಗಿದ್ದೇನೆ. ಮುಂದೆ ಒಳ್ಳೆಯ ಜೀವನವನ್ನು ಎದುರು ನೋಡುತ್ತಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದರು.