ಮಂಗ್ಳೂರು ಕೊಲೆ ಸಂಚುಕೋರ 'ಜಪಾನ್ ಮಂಗ’ ಅರೆಸ್ಟ್
ಮಂಗಳೂರು, ಸೆಪ್ಟೆಂಬರ್, 22 : ಬಿಲ್ಡರ್ ಕೊಲೆಗೆ ಸಂಚು ರೂಪಿಸಿದ್ದ ಮೂವರಲ್ಲಿ 'ಜಪಾನ್ ಮಂಗ' ಅಲಿಯಾಸ್ ರಾಜು (24)ನನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಕಮಿಷನರ್ ಮುರುಗನ್ ತಿಳಿಸಿದರು.
ಆರೋಪಿ ರಾಜು ಕಾವೂರು ನಿವಾಸಿಯಾಗಿದ್ದು, ಈತನ ಮೇಲೆ 2013ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಸನ್ನ ಕೊಲೆ ಪ್ರಕರಣ, ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಹಾಗೂ ಕಾಸರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ ಸಹಿತ ಒಟ್ಟು 4 ಪ್ರಕರಣಗಳಲ್ಲಿ ಕೇಸು ದಾಖಲಾಗಿದೆ.[ಮಂಗಳೂರಿನಲ್ಲಿ ಹಾಡು ಹಗಲೇ 27 ಸಾವಿರ ದರೋಡೆ]
ಉಳ್ಳಾಲ ವ್ಯಾಪ್ತಿಯ ಚೆಂಬುಗುಡ್ಡೆಯಲ್ಲಿ ಯತೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಲಾನ್ಸಿ ಡಿಸೋಜಾ ಎಂಬಾತನ ಮೇಲೆ ಮೂವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇವರಲ್ಲಿ ಉಳ್ಳಾಲದ ರೈಲ್ವೆ ನಿಲ್ದಾಣದ ರಕ್ತೇಶ್ವರಿ ದೇವಸ್ಥಾನ ಸಮೀಪದ ನಿವಾಸಿ ಚೋನಿ ಅಲಿಯಾಸ್ ಕೇಶವ ಪೂಜಾರಿ (25), ಶಿವಾಜಿ ನಗರದ ಪ್ರಸಾದ್ ಯಾನೆಪಚ್ಚು (24), ಯಶೋಧಾ ನಿಲಯದ ರಕ್ಷಿತ್ ಯಾನ್ ಡಿಕೆ (22) ಇವರನ್ನು ಬಂಧಿಸಿರುವುದಾಗಿ ತಿಳಿಸಿದರು.
ಸೆಪ್ಟೆಂಬರ್ ತಿಂಗಳಿನಲ್ಲಿ ಕಮಿಷನರೇಟ್ ವ್ಯಾಪ್ತಿಯ ಮನೆಯಲ್ಲಿ ಕಳವು, ಸುಲಿಗೆ ಮತ್ತಿತರ ಪ್ರಕರಣಗಳಲ್ಲಿ ಇದುವರೆಗೆ ೧೯ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 22 ಮಂದಿಯನ್ನು ಬಂಧಿಸಿ ಅವರಿಂದ 6,91,500 ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿರುವುದಾಗಿ ಮುರುಗನ್ ಹೇಳಿದರು.