Vande Bharat: ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು
ಮಂಗಳೂರು, ಮಾರ್ಚ್ 17: ಕರ್ನಾಟಕದ ಕರಾವಳಿ ನಗರ ಮಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಬಹಳ ಹಿಂದಿನಿದು. ಸದ್ಯ ಉಭಯ ನಗರಗಳ ನಡುವೆ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ನಡೆಸುತ್ತಿದೆ. ಈ ರೈಲಿನ ಬೋಗಿಗಳನ್ನು ಬದಲಾವಣೆ ಮಾಡಿ ಈಗ ಹೈಟೆಕ್ ಸ್ಪರ್ಶ ನೀಡಲಾಗಿದೆ. ವಂದೇ ಭಾರತ್ ರೈಲುಗಳ ಸಂಚಾರ ಸಹ ಕೆಲವೇ ದಿನಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ.
ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯ ಮಂಗಳೂರು ನಗರದಿಂದ ಎರಡು ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸುತ್ತಿದೆ. ಈಗ ಮಂಗಳೂರು-ಮುಂಬೈ ನಡುವೆ ಈ ಮಾದರಿ ರೈಲು ಸಂಚಾರ ಆರಂಭದ ಸೂಚನೆ ಸಿಕ್ಕಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ. ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ್ದ ಅವರು ಮುಂಬೈಗೆ ಕರಾವಳಿಯಿಂದ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸಚಿವರು ಸಹ ಒಪ್ಪಿಗೆ ನೀಡಿದ್ದಾರೆ.
ಸಂಸದರ ಪೋಸ್ಟ್: ಸಂಸದ ಕೋಟ ಶ್ರೀನಿವಾಸ ಪೂಜಾರಿ, 'ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ರದ್ದಾಗಬಹುದೆಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ರೈಲನ್ನು ರದ್ದು ಮಾಡದೇ ಮುಂಬಯಿವರೆಗೆ ಪ್ರತ್ಯೇಕ ಹೊಸ ರೈಲಾಗಿ ಓಡಿಸುವಂತೆ ಸಚಿವರನ್ನು ಕೋರಿದ್ದು, ಸಚಿವರು ತಕ್ಷಣವೇ ಮಂಗಳೂರು-ಮಡಗಾಂವ್ ವಂದೇಭಾರತ್ ರೈಲನ್ನು ರದ್ದು ಮಾಡದಂತೆಯೂ ಮತ್ತು ಅದನ್ನು ಮುಂಬಯಿ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು' ಎಂದು ಹೇಳಿದ್ದಾರೆ.
'ಮಂಗಳೂರು-ಉಡುಪಿ ನಗರಗಳ ಆರ್ಥಿಕ ಆಯಾಮಗಳ ವರದಿಯನ್ನು ಸಚಿವರಿಗೆ ನೀಡಿದ್ದು , ಮುಂಬಯಿ ವಿಸ್ತರಣೆಯ ಅಗತ್ಯ ಹಾಗೂ ಮುಂದೆ ಸ್ಲೀಪರ್ ವಂದೇ ಭಾರತ್ ರೈಲು ಬಿಡುಗಡೆಯಾದಾಗ ಆದ್ಯತೆಯ ಮೇರೆಗೆ ಮಂಗಳೂರು-ಮುಂಬಯಿ ಮಧ್ಯೆ ಅದನ್ನು ಓಡಿಸುವಂತೆಯೂ ಕೋರಲಾಯಿತು. ನಮ್ಮೆಲ್ಲಾ ಕೋರಿಕೆಯನ್ನು ಅತ್ಯಂತ ಪ್ರೀತಿಯಿಂದ ಆಲಿಸಿ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ ಗೌರವಾನ್ವಿತ ಸಚಿವರಿಗೆ ವಂದನೆಗಳು' ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮಂಗಳೂರು ಮತ್ತು ಗೋವಾ ರಾಜ್ಯದ ಮಡಗಾಂವ್ ನಡುವೆ 2023ರ ಡಿಸೆಂಬರ್ನಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಈ ರೈಲು ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದೆ. ಆದ್ದರಿಂದ ಪಕ್ಕದ ರಾಜ್ಯವಾದ ಕೇರಳ ಮಂಗಳೂರು-ಮಡಗಾಂವ್ ರೈಲನ್ನು ಕೋಝಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ ಎಂಬ ಬೇಡಿಕೆಯನ್ನು ಇಲಾಖೆ ಮುಂದಿಟ್ಟಿದೆ.
ಮಂಗಳೂರು-ಮಡಗಾಂವ್ ರೈಲು ಸದ್ಯ ಮಡಗಾಂವ್, ಉಡುಪಿ, ಕಾರವಾರ, ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ನಿಲುಗಡೆಯನ್ನು ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ರೈಲನ್ನು ಭಟ್ಕಳದಲ್ಲಿ ನಿಲುಗಡೆ ನೀಡಬೇಕು ಎಂಬ ಬೇಡಿಕೆಯೂ ಇದೆ. ಆದರೆ ಇದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಈ ರೈಲನ್ನು ರದ್ದುಗೊಳಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದ್ದರಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ರೈಲನ್ನು ಮಂಗಳೂರು-ಮುಂಬೈ ನಡುವೆ ವಿಸ್ತರಣೆ ಮಾಡಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದು, ಇದಕ್ಕೆ ಸಚಿವರು ಒಪ್ಪಿಗೆಯನ್ನು ನೀಡಿದ್ದಾರೆ.
ಮಂಗಳೂರು-ಮಂಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕರ್ನಾಟಕ, ಗೋವಾವನ್ನು ಸಂಪರ್ಕಿಸುತ್ತದೆ. ಈ ರೈಲನ್ನು ಮುಂಬೈ ತನಕ ವಿಸ್ತರಣೆ ಮಾಡಿದರೆ ಕರ್ನಾಟಕ-ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ರೈಲು ಸಂಚಾರ ನಡೆಸಲಿದ್ದು, ಸಾವಿರಾರು ಜನರಿಗೆ ಅನುಕೂಲವಾಗಲಿದೆ.
ಸದ್ಯ ರೈಲು ನಂಬರ್ 20646 ಬೆಳಗ್ಗೆ 8:30ಕ್ಕೆ ಮಂಗಳೂರು ಸಂಟ್ರಲ್ ನಿಲ್ದಾಣದಿಂದ ಹೊರಟು, 9.48 ಉಡುಪಿ, 12.08 ಕಾರವಾರ ಮತ್ತು 1.15ಕ್ಕೆ ಮಡಗಾಂವ್ ತಲುಪುತ್ತದೆ. ರೈಲು ಸಂಖ್ಯೆ 20645 ಸಂಜೆ 6.10ಕ್ಕೆ ಮಡಗಾಂವ್ನಿಂದ ಹೊರಟು, 6.55 ಕಾರವಾರ, 9.12 ಉಡುಪಿ ಮೂಲಕ 10.45ಕ್ಕೆ ಮಂಗಳೂರು ನಗರಕ್ಕೆ ಆಗಮಿಸುತ್ತದೆ. ಮುಂಬೈ ತನಕ ರೈಲು ಸೇವೆ ವಿಸ್ತರಣೆಯಾದರೆ ವೇಳಾಪಟ್ಟಿಯೂ ಬದಲಾವಣೆಯಾಗಲಿದೆ.
ಭಾರತೀಯ ರೈಲ್ವೆ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳ ಸಂಚಾರಕ್ಕೆ ತಯಾರಿ ನಡೆಸಿದೆ. ಮಂಗಳೂರು-ಮುಂಬೈ ನಡುವೆ ಕರ್ನಾಟಕದಲ್ಲಿ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಸಂಚಾರ ನಡೆಸಲಿದೆ ಎಂಬ ಸುದ್ದಿಗಳು ಹಿಂದೆ ಹಬ್ಬಿದ್ದವು. ಆದರೆ ಇನ್ನೂ ಸಹ ಇದಕ್ಕೆ ಇಲಾಖೆ ಅಂತಿಮ ಒಪ್ಪಿಗೆ ಸಿಕ್ಕಿಲ್ಲ.












Click it and Unblock the Notifications