ಮಂಗಳೂರು : ಕೇಶವ ಶೆಟ್ಟಿ ಕೊಲೆಗೆ ಹಣವೇ ಕಾರಣ
ಮಂಗಳೂರು, ಜ. 12 : ಸೂರಿಂಜೆಯಲ್ಲಿ ನಡೆದ ಬಿಜೆಪಿ ಮುಖಂಡ ಹಾಗೂ ವ್ಯಾಪಾರಿ ಕೇಶವ ಶೆಟ್ಟಿ ಕೊಲೆ ಪ್ರಕರಣ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕೇಶವ ಶೆಟ್ಟಿ ಬಳಿ ಹಣಕ್ಕಾಗಿ ಪದೇ ಪದೇ ಬೇಡಿಕೆ ಇಟ್ಟಿದ್ದ ಆರೋಪಿಗಳು, ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದರು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.
ಬಂಧಿತರನ್ನು ಸೂರಿಂಜೆ ನಿವಾಸಿ ಲತೀಶ್ (25), ಶೋಭರಾಜ್ (23), ಅಪ್ಪು ಅಲಿಯಾಸ್ ಯುವರಾಜ್ (23), ಕೃಷ್ಣ (19), ಭರತ್ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಸತೀಶ್ಗಾಗಿ ಸುರತ್ಕಲ್ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಹಣಕ್ಕಾಗಿ ಕೊಲೆ : ಸೂರತ್ಕಲ್ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಗಾಂಜಾ ಮಾರಾಟದ ಬಗ್ಗೆ ಕೇಶವ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದರು. ಆದ್ದರಿಂದ ಅವರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಆರೋಪಿಗಳ ಬಂಧನದಿಂದ ಇದು ಹಣಕ್ಕಾಗಿ ನಡೆದ ಕೊಲೆ ಎಂದು ಸಾಬೀತಾಗಿದೆ. [ಮಂಗಳೂರು : ಸೂರಿಂಜೆ ಬಳಿ ಬಿಜೆಪಿ ಮುಖಂಡನ ಹತ್ಯೆ]
ವ್ಯಾಪಾರಿಯಾಗಿದ್ದ ಕೇಶವ ಶೆಟ್ಟಿ ಅವರು ಹೊಸಬೆಟ್ಟುವಿನಲ್ಲಿ ಗ್ಯಾರೇಜ್ ತೆರೆದಿದ್ದರು. ಕೊಲೆ ಪ್ರಕರಣದ ಪ್ರಮುಖ ಆರೋಪಿ ಸತೀಶ್ ಕೇಶವ ಶೆಟ್ಟಿ ಅವರ ಬಳಿ ಹಣ ಕೇಳಿದ್ದರು. ಹಣ ನೀಡಲು ಕೇಶವ ನಿರಾಕರಿಸಿದ್ದರು. ಆದ್ದರಿಂದ ಸತೀಶ್ ಕೊಲೆ ಬೆದರಿಕೆ ಹಾಕಿದ್ದರು. ಈ ಕುರಿತು ಕೇಶವ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದರು.
ಇನ್ನೊಬ್ಬ ಆರೋಪಿ ಲತೀಶ್ ಸಹ ಕೇಶವ ಶೆಟ್ಟಿ ಅವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಕೇಶವ ಶೆಟ್ಟಿ ಕೊಡಲು ನಿರಾಕರಿಸಿದ್ದರಿಂದ ಸತೀಶ್ ಮತ್ತು ಲತೀಶ್ ಸೇರಿ ಕೇಶವ ಶೆಟ್ಟಿ ಅವರ ಕೊಲೆಗೆ ಸಂಚು ರೂಪಿಸಿದ್ದರು. ಭರತ್ ಈ ಕೊಲೆಯ ರೂಪುರೇಷೆಯನ್ನು ಸಿದ್ಧಪಡಿಸಿದ್ದ.
ಎರಡು ಬಾರಿ ಕೊಲೆ ಯತ್ನ : ಕೇಶವ ಶೆಟ್ಟಿ ಅವರ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು ಜನವರಿ 4 ಮತ್ತು 5ರಂದು ಕೊಲೆ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಜನವರಿ 6ರಂದು ಮುಂಜಾನೆ ಕೇಶವ ಶೆಟ್ಟಿ ಅವರು ಬ್ಯಾಡ್ಮಿಂಟನ್ ಆಡಲು ಮೈದಾನಕ್ಕೆ ಆಗಮಿಸುವಾಗ ಎಲ್ಲರೂ ಸೇರಿ ಲಾಂಗು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು.












Click it and Unblock the Notifications