ಮಂಗಳೂರು ಆಟೋ ಸ್ಫೋಟ ಪ್ರಕರಣ: ಆರೋಪಿ ಶಾರಿಕ್ ಕುರಿತ ಮಾಹಿತಿ
ಮಂಗಳೂರು, ನ.21: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಪ್ರಕರಣದ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶಾರಿಕ್ ಮಂಗಳೂರಿನ ಹಲವು ಭಾಗಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ಬಯಲಿಗೆಳೆದಿದ್ದಾರೆ.
ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ್ ಪೂಜಾರಿಯವರಿಗೆ ಸುಟ್ಟ ಗಾಯಗಳಾಗಿವೆ. ಶಂಕಿತ ಆರೋಪಿ ಶಾರಿಕ್ಗೆ 45% ದಷ್ಟು ಸುಟ್ಟ ಗಾಯಗಳಾಗಿವೆ. ಶಾರಿಕ್ ಜೇಬುನಲ್ಲಿದ್ದ ಆಧಾರ್ ಕಾರ್ಡ್ ನಲ್ಲಿ ಹೆಸರು ವಿಳಾಸ ನಕಲಿಯಾಗಿದೆ. ಪ್ರೇಮ್ ರಾಜ್ ಹೆಸರಿನ ವ್ಯಕ್ತಿಯ ಆಧಾರ್ ಕಾರ್ಡ್ ಬಳಸಿ ಹುಬ್ಬಳ್ಳಿ-ಧಾರಾವಾಡದ ವಿಳಾಸದಲ್ಲಿ ಇರಲಾಗಿತ್ತು. ಆದೆ ಪ್ರೇಮ್ ರಾಜ್ ಹುಬ್ಬಳ್ಳಿ ಬಿಟ್ಟು ಮೂರು ವರ್ಷಗಳಾಗಿವೆ ಎಂದು ಮಾಹಿತಿ ನೀಡಿದರು.
ನಿಜವಾದ ಪ್ರೇಮ್ ರಾಜ್ರನ್ನು ನಾನೇ ಸಂಪರ್ಕ ಮಾಡಿದ್ದೇನೆ. ಆತ ತುಮಕೂರು ರೈಲ್ವೇಯಲ್ಲಿ ಗ್ಯಾಂಗ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನ ಆಧಾರ್ ಕಾರ್ಡ್ ಆರು ತಿಂಗಳ ಹಿಂದೆ ಮಿಸ್ ಆಗಿದ್ದು, ಈತನ ಆಧಾರ್ ಕಾರ್ಡ್ ಅನ್ನು ಶಾರಿಕ್ ತೆಗೆದುಕೊಂಡಿದ್ದಾನೆ ಎಂದರು.

ಶಿವಮೊಗ್ಗ ಗಲಾಟೆ ಸಂದರ್ಭದಲ್ಲಿ ಶಾರಿಕ್ ಹೆಸರು
"ಶಾರಿಕ್ ಗುರುತು ಪತ್ತೆಯಾಗುವ ಮುನ್ನ ಶಾರೀಕ್ ಯಾರೂ ಎಂಬುವುದಕ್ಕೆ ಭಾರೀ ತಲೆಕೆಡೆಸಿಕೊಂಡಿದ್ದೇವೆ. ಶಾರೀಕ್ ಸೆ.20 ರಿಂದ ಮೈಸೂರಿನಲ್ಲಿ ಮೋಹನ್ ಕುಮಾರ್ ಎಂಬುವವರ ಬಾಡಿಗೆ ಮನೆ ಪಡೆದುಕೊಂಡಿದ್ದ. ಅಲ್ಲಿ ಇದೇ ಫೇಕ್ ಆಧಾರ್ ಕಾರ್ಡ್ ಅನ್ನು ಕೊಟ್ಟಿದ್ದ. ಮೈಸೂರಿನಲ್ಲಿ ಮೊಬೈಲ್ ರಿಪೇರಿ ಟ್ರೈನಿಂಗ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ" ಅಂತಾ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
2022ರ ಆಗಸ್ಟ್ 15 ರಂದು ನಡೆದ ಶಿವಮೊಗ್ಗ ಗಲಾಟೆ ಸಂದರ್ಭದಲ್ಲಿ ಜಬೀವುಲ್ಲಾ ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು. ಈ ಸಂಧರ್ಭದಲ್ಲಿ ಶಾರಿಕ್ ಅಲರ್ಟ್ ಆಗಿ ಊರು ಬಿಟ್ಟು ಹೋಗಿದ್ದ. ಆ ವೇಳೆ ಕೊಯಂಬತ್ತೂರು, ಕೇರಳ, ಮೈಸೂರಿಗೆ ಹೋಗಿದ್ದಾನೆ ಎಂದು ತಿಳಿಸಿದರು.

ಗುರುತು ಪತ್ತೆಗೆ ಕುಟುಂಬಸ್ಥರ ಸಹಾಯ ಪಡೆದ ಖಾಕಿಪಡೆ
ಶಾರಿಕ್ ಕುಕ್ಕರ್ ಬಾಂಬ್ ಸ್ಫೋಟ ಮಾಡಿದ ಬಳಿಕ ಆತನ ದೇಹಕ್ಕೆ ಸುಟ್ಟ ಗಾಯಗಳಾಗಿವೆ. ಮುಖ ಸುಟ್ಟು ಹೋಗಿದೆ. ಈಗಿನ ಮುಖ ಮತ್ತು ಹಳೇಯ ಫೋಟೋ ಹೊಲಿಕೆ ಮಾಡಿ ನೋಡಿದಾದ ಸ್ಪಷ್ಟವಾದ ಗುರುತು ಲಭ್ಯ ಆಗಿರಲಿಲ್ಲ. ಹೀಗಾಗಿ ಆತನ ಸಂಬಂಧಿಕರಿಗೆ ಮನವಿ ಮಾಡಿ ಗುರುತಿಸಿದ್ದೇವೆ. ಶಾರಿಕ್ನ ಮಲತಾಯಿ ಸಬನಾ, ಅಕ್ಕ ಆಫೀಯಾ, ಚಿಕ್ಕಮ್ಮ ಯಾಸ್ಮೀನ್ ಆತನ ಗುರುತು ಪತ್ತೆ ಮಾಡಿದ್ದಾರೆ. ಅವರ ಜೊತೆಯೂ ನಾವು ಮಾತನಾಡಿದ್ದೇವೆ. ಅವರು ಬುದ್ದಿ ಮಾತು ಹೇಳಿದ್ದರೂ ಶಾರಿಕ್ ಸರಿಯಾಗಿಲ್ಲ ಎಂದು ಹೇಳಿದ್ದಾರ ಎಂದು ಅಲೋಕ್ ಕುಮಾರ್ ತಿಳಿಸಿದರು.
ಶಾರಿಕ್ ವಿರುದ್ದ 2020 ರಲ್ಲಿ ಮಂಗಳೂರಿನ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಗ್ರ ಸಂಬಂಧ ಗೋಡೆ ಬರಹ ಬರೆದು ಸಿಕ್ಕಿಬಿದ್ದಿದ್ದ. ಈ ಪ್ರಕರಣದ ಎ1 ಆರೋಪಿಯಾಗಿ ಶಾರಿಕ್, ಎ2 ಆರೋಪಿ ಮಾಝ್, ಎ3 ಆರೋಪಿ ಅರಾಫತ್ ಅಲಿ, ಎ4 ಆರೋಪಿಯಾಗಿ ಸಾದತ್ ಅಲಿಯ ಬಂಧನವಾಗಿತ್ತು.ಈ ಪ್ರಕರಣದ ಆರೋಪಿ ಅರಾಫತ್ ಅಲಿ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಅಂತಾ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.

ಕುಕ್ಕರ್ ಹಿಡಿದುಕೊಂಡು ಮೈಸೂರು, ಮಡಿಕೇರಿ ಮಾರ್ಗವಾಗಿ ಪ್ರಯಾಣ
ಶಿವಮೊಗ್ಗ ಪ್ರಕರಣ ಸಂಬಂಧ ಸೆ.19ರಂದು ಜಬೀವುಲ್ಲಾ ವಿಚಾರಣೆ ಮಾಡುವ ಸಂಧರ್ಭದಲ್ಲಿ ಶಾರಿಕ್ ಹೆಸರು ಬಾಯಿಬಿಟ್ಟಿದ್ದಾನೆ. ತುಂಗಾ ತೀರ ಬ್ಲಾಸ್ಟ್ ಮಾಡಿದವರಲ್ಲಿ ಶಾರಿಕ್ ಪಾತ್ರ ದೊಡ್ಡದಿದೆ. ಶಾರಿಕ್ನ ಮೈಸೂರು ಬಾಡಿಗೆ ಮನೆಯಲ್ಲಿ 151 ಮ್ಯಾಚ್ ಬಾಕ್ಸ್, ಬ್ಯಾಟರಿ, ನೆಟ್, ಬೋಲ್ಟ್ ಸರ್ಪೇಸ್ ವಸ್ತುಗಳು ಸಿಕ್ಕಿವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ನವೆಂಬರ್ 19 ರಂದು ಶಾರೀಕ್ ಕುಕ್ಕರ್ ಬಾಂಬ್ ನ್ನು ಹಿಡಿದುಕೊಂಡು ಮೈಸೂರು, ಮಡಿಕೇರಿ ಮಾರ್ಗವಾಗಿ ಬಸ್ನಲ್ಲಿ ಬಂದು ಮಂಗಳೂರಿನ ನಾಗುರಿಯಲ್ಲಿ ಇಳಿದಿದ್ದಾನೆ. ಸೆಪ್ಟೆಂಬರ್ 8 ರಂದೇ ಮಂಗಳೂರಿಗೆ ಬಂದು ನಗರದ ಕೆಲವು ಏರಿಯಾಗಳ ಪರಿಶೀಲನೆ ಮಾಡಿದ್ದಾನೆ. ಈ ಬಗ್ಗೆಯೂ ತನಿಖೆ ಮಾಡೋದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಕುಕ್ಕರ್ ಸ್ಫೋಟ ಸಂಬಂಧ ಈವರೆಗೆ ಮೂವರ ಬಂಧನ
ಈ ಪ್ರಕರಣದ ಸಂಬಂಧ ಮೈಸೂರುನಲ್ಲಿ ಇಬ್ಬರು, ಮಂಗಳೂರಿನಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಕಡೆ ಅಂದರೆ ಶಿವಮೊಗ್ಗ, ಮಂಗಳೂರಿನಲ್ಲಿ ಒಂದು ಕಡೆ, ಮೈಸೂರಿನಲ್ಲಿ ಎರಡು ಕಡೆಗಳಲ್ಲಿ ದಾಳಿ ಮಾಡಿರೋದಾಗಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.
ಶಾರಿಕ್ ಬ್ಯಾಂಕ್ ಅಕೌಂಟ್ ಪರಿಶೀಲನೆ ಮಾಡುತ್ತೇವೆ. ಆರೋಪಿ ಶಾರಿಕ್ ಉಗ್ರ ಸಂಘಟನೆಗಳಿಂದ ಪ್ರಭಾವಿತನಾಗಿದ್ದಾನೆ. ಇವರ ಹಣದ ಮೂಲದ ಬಗ್ಗೆ ತನಿಖೆ ಮಾಡುತ್ತೇವೆ. ಅಲ್ಲದೇ ಶಾರಿಕ್ ಮೈಸೂರು ಬಿಟ್ಟು ಬೇರೆ ಕಡೆ ಶೆಲ್ಟರ್ ಪಡೆದ ಬಗ್ಗೆಯೂ ತನಿಖೆ ಮಾಡುತ್ತೇವೆ. ಎಫ್ಎಸ್ಎಲ್ ಸೇರಿದಂತೆ ಬೇರೆ ಬೇರೆ ತನಿಖಾ ತಂಡಗಳನ್ನು ರಚಿಸಿದ್ದೇವೆ ಎಂದು ತಿಳಿಸಿದರು.
ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಬೇರೆ ಕಡೆ ಸ್ಫೋಟವಾಗಿದ್ದರೇ ದೊಡ್ಡ ಮಟ್ಟದ ಡ್ಯಾಮೇಜ್ ಆಗಬಹುದಿತ್ತು. ಕರಾವಳಿಯಲ್ಲಿ ಮೂರು ತಿಂಗಳಿನಿಂದ ಶಾಂತಿ ಇದೆ. ಸಣ್ಣ ವಿಷಯ ಆದರೂ ಇಲ್ಲಿ ಕಮ್ಯುನಲ್ ವಿಚಾರವನ್ನು ಪಡೆದುಕೊಳ್ಳುತ್ತದೆ. ಉದ್ವಿಗ್ನ ವಾತಾವರಣ ನಿರ್ಮಾಣ ಆಗೋದನ್ನು ತಪ್ಪಿದೆ. ಬಹಳ ಜನರ ಜೀವ ರಕ್ಷಣೆ ಆಗಿದೆ. ದೇವರಿಗೆ ಧನ್ಯವಾದ ಹೇಳುತ್ತೇವೆ ಎಂದರು.
ಶಾರೀಕ್ ಆರೋಗ್ಯ ಸ್ಥಿರವಾಗುತ್ತಿದೆ. ಆತನನ್ನು ವಿಚಾರಣೆಗೆ ಒಳಪಡಿಸಲು ಕೆಲವು ದಿನ ಬೇಕಾಗುತ್ತದೆ. ಆತ ಜೀವಂತವಾಗಿರುವುದು ಬಹಳ ಪ್ರಮುಖವಾಗಿದೆ. ಸಣ್ಣ ಸೋಂಕು ಹರಡಿದರೂ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹೆಚ್ಚಿನ ನಿಗಾ ವಹಿಸಿದ್ದೇವೆ ಎಂದು ತಿಳಿಸಿದರು.
*ಕೊಯಂಬತ್ತೂರುನಲ್ಲಿ ಆರೋಪಿ ಶಾರಿಕ್*
ಕೊಯಂಬತ್ತೂರುನಲ್ಲಿ ಅರುಣ್ ಕುಮಾರ್ ಗೌಲಿ ಎಂಬುವವರ ನಕಲಿ ಆಧಾರ್ ಕಾಡ್ ಮಾಡಿಸಿದ್ದಾರೆ. ಅರುಣ್ ಕುಮಾರ್ ಕೊಯಂಬತ್ತೂರು ನಿವಾಸಿಯಾಗಿದ್ದು ಸುಮಾರು ವರ್ಷಗಳ ಹಿಂದೆಯೇ ಕೊಯಂಬತ್ತೂರು ತೊರೆದಿದ್ದರು. ಆಧಾರ್ ಕಾರ್ಡ್ ಫೇಕ್ ಮಾಡಿದರ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸೋದಾಗಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.












Click it and Unblock the Notifications