ಮಂಗಳೂರು; ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ
ಮಂಗಳೂರು, ನವೆಂಬರ್ 24; ಮಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ನವೆಂಬರ್21ರಂದು ಮಂಗಳೂರು ನಗರದ ಹೊರವಲಯದ ತಿರುವೈಲ್ ಗ್ರಾಮದ ಪರಾರಿ ಎಂಬಲ್ಲಿ ಟೈಲ್ಸ್ ಫ್ಯಾಕ್ಟರಿಯಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕ ದಂಪತಿಯ 8 ವರ್ಷದ ಮಗು ಕೊಲೆಯಾಗಿತ್ತು. ಈ ಪ್ರಕರಣ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು.
ಜಾರ್ಖಂಡ್ ರಾಜ್ಯದ ಸಿಂಡೇಗಾ ಜಿಲ್ಲೆಯ ಕುಟುಂಬದ 8 ವರ್ಷ ವಯಸ್ಸಿನ ಮಗು ನವೆಂಬರ್ 21ರ ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆ ತನ್ನ ಸಹೋದರಿಯೊಂದಿಗೆ ಆಟವಾಡುತ್ತಿತ್ತು. ಬಳಿಕ ಧಿಡೀರ್ ನಾಪತ್ತೆಯಾಗಿತ್ತು. ಮಕ್ಕಳು ಜೂಟಾಟ ಆಡುತ್ತಿದ್ದರಿಂದ ಎಲ್ಲಾದರೂ ಬಚ್ಚಿಟ್ಟುಕೊಂಡಿರಬೇಕು ಅಂತಾ ಭಾವಿಸಲಾಗಿತ್ತು.

ಆ ಬಳಿಕ ಹೆತ್ತವರು ಬಾಲಕಿಗಾಗಿ ಹುಡುಕಾಟ ಮಾಡಿದ್ದರು. ಸಂಜೆ 6 ಗಂಟೆಯ ವೇಳೆಗೆ ಬಾಲಕಿಯ ಶವ ಡ್ರೈನೇಜ್ನಲ್ಲಿ ಪತ್ತೆಯಾಗಿತ್ತು. ಮೊದಲು ಬಾಲಕಿ ಕಾಲು ಜಾರಿ ಬಿದ್ದಿರಬೇಕೆಂದು ಎಲ್ಲರೂ ಭಾವಿಸಿದ್ದರು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂಬುದು ತಿಳಿದು ಬಂದಿತ್ತು.
ಮಂಗಳೂರು ಹೊರವಲಯದ ಪರಾರಿ ಎಂಬಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ ಹೆಸರಿನ ಟೈಲ್ಸ್ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿತ್ತು. ಹೆಂಚು, ಇಟ್ಟಿಗೆಗಳನ್ನು ರೆಡಿ ಮಾಡುತ್ತಿದ್ದ ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ಹೆಚ್ಚಿನ ಕಾರ್ಮಿಕರು ಮಧ್ಯಪ್ರದೇಶ, ಬಿಹಾರ್, ಉತ್ತರಪ್ರದೇಶ, ಜಾರ್ಖಂಡ್ ರಾಜ್ಯದವರು.
ಫ್ಯಾಕ್ಟರಿ ಇರುವ ಪ್ರದೇಶದಲ್ಲೇ ಬಿಡಾರಗಳಲ್ಲಿ ವಾಸಿಸುತ್ತಿದ್ದ ಈ ಕಾರ್ಮಿಕರಲ್ಲಿ ನಾಲ್ವರು ಕಾಮುಕರು ಕ್ಯಾಂಪ್ನಲ್ಲಿದ್ದ ಜಾರ್ಖಂಡ್ ಮೂಲದ ಕಾರ್ಮಿಕ ದಂಪತಿಯ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದಾರೆ. ಬಾಲಕಿಯನ್ನು ಕೊಲೆ ಮಾಡಿ ಟೈಲ್ಸ್ ಫ್ಯಾಕ್ಟರಿಯ ಡ್ರೈನೇಜ್ನಲ್ಲಿ ಹಾಕಿದ್ದ ಈ ನಾಲ್ವರು ಹಂತಕರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಬಂಧಿತರನ್ನು ಜಯ್ ಸಿಂಗ್, ಮುಖೇಶ್ ಸಿಂಗ್, ಮನೀಶ್ ತಿರ್ಕಿ, ಮುನೀಮ್ ಸಿಂಗ್ ಎಂದು ಗುರುತಿಸಲಾಗಿದೆ.
ತನಿಖೆ ಕೈಗೊಂಡ ಪೊಲೀಸರು; ಈ ಪ್ರಕರಣವನ್ನು ಮಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಘಟನೆ ನಡೆದ ದಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ 20 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಸಂದರ್ಭ ಈ ನಾಲ್ವರು ಕೃತ್ಯ ನಡೆಸಿರುವುದು ಗೊತ್ತಾಗಿದೆ.
ಮಧ್ಯಾಹ್ನದವರೆಗೆ ತನ್ನ ಸಹೋದರ, ಸಹೋದರಿಯರ ಜೊತೆ ಆಟ ಆಡುತ್ತಿದ್ದ ಈ 8 ವರ್ಷದ ಬಾಲಕಿಯನ್ನು ಕಾಮುಕರು ಬಾಯಿಯನ್ನು ಕೈಯಿಂದ ಮುಚ್ಚಿ ಎತ್ತಿಕೊಂಡು ರೂಮಿನೊಳಗೆ ಕರೆದೊಯ್ದಿದ್ದರು. ಬಳಿಕ ಸಾಮೂಹಿಕ ಅತ್ಯಚಾರ ನಡೆಸಿದ್ದರು. ಆರೋಪಿಗಳು ರಕ್ತ ಸ್ರಾವದಿಂದ ಮತ್ತು ನೋವಿನಿಂದ ಬಳಲಿ ಕಿರುಚುತ್ತಿದ್ದ ಬಾಲಕಿಯನ್ನು ಕತ್ತುಹಿಸುಕಿ ಸಾಯಿಸಿದ್ದರು. ಸುತ್ತಮುತ್ತ ಯಾರು ಇಲ್ಲದಿರುವುದನ್ನು ಖಚಿತಪಡಿಸಿ ಮೃತ ಬಾಲಕಿಯನ್ನು ಫ್ಯಾಕ್ಟರಿ ಒಳಗಿರುವ ಚರಂಡಿಯೊಳಗೆ ಹಾಕಿದ್ದರು. ಮಗು ನಾಪತ್ತೆಯಾಗಿದೆ ಎಂದು ಗೊತ್ತಾದಾಗ ಇತರರ ಜೊತೆ ಸೇರಿ ಹುಡುಕುವ ನಾಟಕವನ್ನು ನಡೆಸಿದ್ದರು.
ಈ ಹಿಂದೆಯೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಆಗ ಚಾಕಲೇಟ್, ಶೇಂಗಾ ನೀಡಿ ಬಾಲಕಿಯ ಬಳಿ ಯಾರಿಗೂ ಹೇಳದಂತೆ ಪುಸಲಾಯಿಸಿದ್ದರು. ನಾಲ್ವರು ಆರೋಪಿಗಳಲ್ಲಿ ಇಬ್ಬರು ಈ ಹಿಂದೆ ಕೂಡಾ ದೌರ್ಜನ್ಯ ಎಸಗಿದ್ದು, ಈ ಬಾರಿ ನಾಲ್ವರು ದೌರ್ಜನ್ಯ ಎಸಗಿದ್ದಾರೆ. ಮೂವರು ಆರೋಪಿಗಳು ಅತ್ಯಾಚಾರ ನಡೆಸುವಾಗ ನಾಲ್ಕನೇ ಆರೋಪಿ ಯಾರೂ ಬಾರದ ಹಾಗೆ ನೋಡಿಕೊಳ್ಳುತ್ತಿದ್ದ ಎಂದು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ಮಂಗಳೂರು ನಗರ ಮತ್ತು ಜಿಲ್ಲೆಯ ಫ್ಯಾಕ್ಟರಿಗಳಿಗೆ ಪೊಲೀಸ್ ಇಲಾಖೆ ಸೂಚನೆ ನೀಡಲು ತಿರ್ಮಾನಿಸಿದೆ. ಕಾರ್ಮಿಕರ ಒಟ್ಟು ಮಾಹಿತಿ, ಹೊರ ರಾಜ್ಯದವರ ಸಂಖ್ಯೆ ಮತ್ತು ಫ್ಯಾಕ್ಟರಿ ಯಲ್ಲಿರುವ ಮಕ್ಕಳು, ಹೆಣ್ಣು ಮಕ್ಕಳ ಸಂಖ್ಯೆಯನ್ನು ನೀಡುವಂತೆ ಸೂಚನೆ ನೀಡಲಾಗಿದೆ ಮತ್ತು ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸೂಚನೆ ನೀಡಲಾಗಿದೆ.












Click it and Unblock the Notifications