ಕುಕ್ಕೆಯಲ್ಲಿ ಮಡೆಸ್ನಾನ, ಮಂಗಳೂರಲ್ಲಿ ಪ್ರತಿಭಟನೆ
ಮಂಗಳೂರು, ನ.25 : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆಯಾದ ಚಂಪಾಷಷ್ಠಿ ಪ್ರಯುಕ್ತ ನಡೆಯುವ ಮಡೆಸ್ನಾನ ಹರಕೆ ಸೇವೆಯು ನ.25ರಿಂದ 27ರವರೆಗೆ ನಡೆಯಲಿದೆ. ಮಡೆಸ್ನಾನ ವಿರುದ್ಧ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಜನಜಾಗೃತಿ ಹಾಗೂ ಧರಣಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುಬ್ರಮಣ್ಯದಲ್ಲಿ ನಡೆಯುವ ನಿರ್ದಿಷ್ಟ ಸಮುದಾಯದ ಜನ ಉಂಡುಬಿಟ್ಟ ಎಂಜಲೆಲೆಯ ಮೇಲೆ ಭಕ್ತಾದಿಗಳು ನಡೆಸುವ ಉರುಳು ಸೇವೆ (ಮಡೆ-ಮಡೆಸ್ನಾನ) ಪದ್ಧತಿಯನ್ನು ನಿಲ್ಲಿಸಬೇಕೆಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಹೈಕೋರ್ಟ್ ವಿಭಾಗೀಯ ಪೀಠ ಮಡೆ-ಮಡೆಸ್ನಾನಕ್ಕೆ ಇರುವ ತಡೆಯನ್ನು ಕಳೆದವಾರ ತೆರವುಗೊಳಿಸಿತ್ತು.

ಆದ್ದರಿಂದ ನ.25ರ ಮಂಗಳವಾರದಿಂದ ನ.27ರವರೆಗೆ ಮಡೆಸ್ನಾನ ನಡೆಯಲಿದೆ. ಈ ನಡುವೆ ಕುಮಾರಧಾರಾ ತಟದಿಂದ ದೇವಳವರೆಗೂ ನಡೆಯುವ ಬೀದಿ ಮಡೆಸ್ನಾನ ಶನಿವಾರದಿಂದ ಆರಂಭವಾಗಿದ್ದು, ಗುರುವಾರ ಬೆಳಗಿನವರೆಗೆ ನಡೆಯಲಿದೆ.[ಮಡೆಸ್ನಾನಕ್ಕೆ ಹೈಕೋರ್ಟಿನಿಂದ ಗ್ರೀನ್ ಸಿಗ್ನಲ್]
ಇಂದು ಧರಣಿ : ಮಡೆಸ್ನಾನವನ್ನು ಮುಂದುವರಿಸುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಖಂಡಿಸಿ, ಮಂಗಳವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಜಾಗೃತಿ ವೇದಿಕೆ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯ ಬಗ್ಗೆ ವೇದಿಕೆಯ ಅಧ್ಯಕ್ಷ ಕೆ.ಎಸ್ .ಶಿವರಾಮು ಅವರು ಮಾಹಿತಿ ನೀಡಿದ್ದು, ಈ ಅಮಾನವೀಯ ಮತ್ತು ವಿಚಾರಹೀನ ಪದ್ಧತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮಡೆಸ್ನಾನ ಪದ್ಧತಿ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಮಡೆಸ್ನಾನದ ಆಚರಣೆ ವಿಚಾರವಾಗಿ ಹಲವಾರು ಗೊಂದಲಗಳು ಏರ್ಪಟ್ಟಿತ್ತು. ಸದ್ಯ, ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿರುವುದರಿಂದ ಮಡೆಸ್ನಾನಕ್ಕೆ ಇದ್ದ ಅಡ್ಡಿ ನಿವಾರಣೆ ಆದಂತಾಗಿದೆ. [ಮಡೆಸ್ನಾನದಲ್ಲಿ ಬ್ರಾಹ್ಮಣರು ಕೂಡಾ ಇದ್ರು ಕಣ್ರೀ]











Click it and Unblock the Notifications