ಬಂಟ್ವಾಳ ಸಿಪಿಐಎಂ ಕಚೇರಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು
ಮಂಗಳೂರು, ಜನವರಿ 03: ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಕಮ್ಯುನಿಸ್ಟ್ ಹಾಗೂ ಬಿಜೆಪಿ ನಡುವೆ ಸಂಘರ್ಷ ಮುಂದುವರೆದಿದೆ. ಈ ರಾಜಕೀಯ ಘರ್ಷಣೆ ದಕ್ಷಿಣ ಕನ್ನಡ ಜಿಲ್ಲೆಗೂ ನುಸುಳಿರುವ ಸಂಶಯ ಮೂಡಲಾರಂಭಿಸಿದೆ.
ಹೌದು, ಕಮ್ಯುನಿಸ್ಟ್ ಪಾರ್ಟಿ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬೈಪಾಸ್ ನ ನಾಲ್ಕು ಮಾರ್ಗದ ಬಳಿ ಕಾರ್ಯಾಚರಿಸುತ್ತಿರುವ ಕಮ್ಯುನಿಸ್ಟ್ ಬಂಟ್ವಾಳ ಸಮಿತಿಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ.

ಸಿಪಿಐಎಂ ಕಚೇರಿಯ ಸಿಬ್ಬಂದಿ ಇಂದು ಬೆಳಗ್ಗೆ ಕಚೇರಿಗೆ ತೆರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಕಚೇರಿಯೊಳಗಿದ್ದ ಸಂಘಕ್ಕೆ ಸಂಬಂಧ ಪಟ್ಟ ಕಡತಗಳು ಹಾಗೂ ಮುಖ್ಯವಾದ ಅರ್ಜಿಗಳು, ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ದಾಖಲೆಗಳು ಸುಟ್ಟು ಕರಕಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications