ಜಾಗ ವಿವಾದ; ಪುತ್ತೂರಿನಲ್ಲಿ ಮಹಿಳೆಯ ಮೇಲೆ ಹುಲ್ಲು ಕಟಾವು ಯಂತ್ರದಿಂದ ದಾಳಿ!
ಮಂಗಳೂರು, ಮಾರ್ಚ್ 14: ದೇವರ ಭಜನೆ ಮಾಡುವ ಭಜನಾ ಮಂದಿರದ ಜಾಗದ ಹಕ್ಕಿಗೆ ಸಂಬಂಧಿಸಿದಂತೆ ಎರಡು ಗುಂಪುಗಳು ಅಮಾನುಷವಾಗಿ ಹೊಡೆದಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ನಡೆದಿದೆ.
ಧಾರ್ಮಿಕವಾಗಿ ಒಗ್ಗೂಡಬೇಕಾದ ಜಾಗದಲ್ಲೇ ತಂಡಗಳು ಹಲ್ಲೆ ನಡೆಸಿದ್ದು, ಇದೀಗ ಇತ್ತಂಡಗಳು ಆಸ್ಪತ್ರೆಗೆ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡೂ ಗುಂಪುಗಳು ಪರಸ್ಪರ ದೂರು ದಾಖಲಿಸಿವೆ.
ಮಂಗಳೂರು ಸುದ್ದಿ: ಗೂಗಲ್ ನೋಡಿ ಕಸ್ಟಮರ್ ಕೇರ್ ನಂಬರ್ಗೆ ಕರೆ ಮಾಡಿದ್ದಕ್ಕೆ 2 ಲಕ್ಷ ಟೋಪಿ
ಆರ್ಯಾಪು ಗ್ರಾಮದ ದೊಡ್ಡಡ್ಕದಲ್ಲಿರುವ ಮಹಾಲಕ್ಷ್ಮೀ ಭಜನಾ ಮಂಡಳಿ ಜಾಗದ ವಿಷಯವಾಗಿ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ಮಾಡಿಕೊಂಡಿವೆ. ಒಂದು ತಂಡ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದರೆ, ಮತ್ತೊಂದು ತಂಡ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಪೂವಪ್ಪ ನಾಯ್ಕ್ರವರು ಮಹಾಲಕ್ಷ್ಮಿ ಭಜನಾ ಮಂದಿರದ ಸದಸ್ಯರಾಗಿದ್ದು, ಭಜನಾ ಮಂದಿರದ ಸುತ್ತ ಹುಲ್ಲು ತೆಗೆದು ಸ್ವಚ್ಛಗೊಳಿಸಲು ತೆರಳಿದ ವೇಳೆ ಹತ್ತಿರದ ಮನೆಯ ನಾಗರಾಜ ಆಚಾರ್ಯ, ನಾರಾಯಣ ಆಚಾರ್ಯ, ಸರೋಜಿನಿ, ನಾಗರಾಜ ಆಚಾರ್ಯ ಅವರ ಪತ್ನಿ ಮತ್ತು ಅತ್ತಿಗೆ ಮಾರಕಾಯುಧಗಳನ್ನು ತಂದು ಪೂವಪ್ಪ ನಾಯ್ಕ್ ಮತ್ತು ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅಷ್ಟೇ ಅಲ್ಲದೇ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ನಾಗರಾಜ ಆಚಾರ್ಯ, ನಾರಾಯಣ ಆಚಾರ್ಯ, ಅವರ ತಾಯಿ ಸರೋಜಿನಿ, ನಾಗರಾಜ ಆಚಾರ್ಯ ಹೆಂಡತಿ ಮತ್ತು ಅತ್ತಿಗೆ ವಿರುದ್ಧ ಪೂವಪ್ಪ ನಾಯ್ಕ್ರವರು ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸರೋಜಿನಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ್, ವೆಂಕಟಕೃಷ್ಣ ಭಟ್, ಸೇಸಪ್ಪ ನಾಯ್ಕ್ ಹಾಗೂ ಅವರ ಸಂಗಡಿಗರ ವಿರುದ್ಧ ದೂರು ನೀಡಿದ್ದಾರೆ.
ಆರ್ಯಾಪು ದೊಡ್ಡಡ್ಕದಲ್ಲಿರುವ ಜಾಗವು ಸರೋಜಿನಿರವರ ಪೂರ್ವಜರ ಹೆಸರಿನಲ್ಲಿದ್ದು, ಇದೇ ಜಾಗದಲ್ಲಿ ಹಲವು ವರ್ಷಗಳ ಹಿಂದಿನಿಂದ ಭಜನಾ ಮಂದಿರವೊಂದು ಕಾರ್ಯಾಚರಿಸುತ್ತಿದೆ. ಸರೋಜಿನಿ ಆಚಾರ್ಯರ ಪತಿ ಈ ಮಂದಿರ ನಿರ್ಮಾಣಕ್ಕಾಗಿ ತಮ್ಮ ಪಟ್ಟಾ ಜಾಗವನ್ನು ನೀಡಿದ್ದು, ಮಂದಿರದ ನಿರ್ವಹಣೆಯನ್ನು ಹಲವು ವರ್ಷಗಳವರೆಗೆ ನಡೆಸಿಕೊಂಡು ಬರುತ್ತಿದ್ದರು. ಆದರೆ ಏಕಾಏಕಿ ಸರೋಜಿನಿ ಅವರ ಪತಿಯನ್ನು ಮಂದಿರದ ಕಮಿಟಿಯಿಂದ ಹೊರ ಹಾಕಿದ ಬಳಿಕ ಸರೋಜಿನಿ ಕುಟುಂಬಕ್ಕೆ ಜಮೀನಿನ ವಿಚಾರದಲ್ಲಿ ಮಂದಿರದ ಸಮಿತಿಯೊಂದಿಗೆ ವಿವಾದ ಆರಂಭಗೊಂಡಿತ್ತು.
ಕ್ರಮೇಣ ಸ್ಥಳೀಯರು ಸಾರ್ವಜನಿಕ ಮಂದಿರ ಎಂದು ಮಂದಿರವನ್ನು ಪ್ರಚಾರ ಮಾಡಿದ ಕಾರಣ, ಸರೋಜಿನಿ ಕುಟುಂಬ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ ಜಮೀನು ವಿಚಾರದಲ್ಲಿ ಪ್ರಕರಣವನ್ನೂ ದಾಖಲಿಸಿತ್ತು.
ಕೇಸು ದಾಖಲಿಸಿ 10 ವರ್ಷ ಕಳೆದಿದ್ದು, ಕೋರ್ಟ್ನಿಂದ ಪ್ರಸ್ತುತ ಮಂದಿರ ಇರುವ ಜಾಗ ಹಾಗೂ ಆಸುಪಾಸಿನ ಜಾಗದಲ್ಲಿ ಯಾವುದೇ ರೀತಿಯ ಕೆಲಸ- ಕಾರ್ಯ ನಿರ್ವಹಿಸದಂತೆ ತಡೆಯಾಜ್ಞೆಯನ್ನೂ ನೀಡಿತ್ತು. ತಡೆಯಾಜ್ಞೆಯ ನಡುವೆಯೇ ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ್, ವೆಂಕಟಕೃಷ್ಣ ಭಟ್, ಸೇಸಪ್ಪ ನಾಯ್ಕ್ ಹಾಗೂ ಅವರ ಸಂಗಡಿಗರು ಆ ಜಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅವರಲ್ಲಿ ಪ್ರಶ್ನಿಸಲು ತೆರಳಿದ ಸರೋಜಿನಿ, ಮತ್ತು ಅವರ ಸೊಸೆ ಹಾಗೂ ಮತ್ತೋರ್ವರ ಮೇಲೆ ಹಲ್ಲೆ ನಡೆಸಿದ್ದು, ಹುಲ್ಲು ತೆಗಿಯುವ ಮೆಷಿನ್ ಅನ್ನು ಸರೋಜಿನಿಯವರ ಕೈ ಮೇಲೆ ಹಿಡಿದು ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಹುಲ್ಲು ತೆಗೆಯುವ ಯಂತ್ರದಿಂದ ಹಲ್ಲೆಗೈದ ಹಿನ್ನಲೆಯಲ್ಲಿ ಸರೋಜಿನಿ ಅವರ ಕೈಗೆ ಗಂಭೀರ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಿಚಾರಣೆ ನಡೆಸುತ್ತಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ದೇವರ ಹೆಸರಿನಲ್ಲಿ ಒಟ್ಟಾಗಬೇಕಾಗಿದ್ದ ಸಮುದಾಯಗಳು ಪುತ್ತೂರಿನ ಅರ್ಯಾಪಿನಲ್ಲಿ ಮಾತ್ರ ಬೇರ್ಪಟ್ಟಿದ್ದು, ಜಾಗಕ್ಕಾಗಿ ಹಲ್ಲೆಯಂತಹ ಅಮಾನುಷ ಕೃತ್ಯಕ್ಕೂ ಕೈ ಹಾಕಿರುವುದು ದುರಂತವಾಗಿದೆ.