ನ.29ರಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ
ಮಂಗಳೂರು, ನವೆಂಬರ್ 18: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಆರು ದಿನಗಳ ಕಾಲ ನಡೆಯವ ವೈಭವದ ಲಕ್ಷ ದೀಪೋತ್ಸವ ಸಂಭ್ರಮಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಜ್ಜಾಗಿದೆ.
ಇದೇ ನವೆಂಬರ್ 29ರಿಂದ ಡಿಸೆಂಬರ್ 4ರವರೆಗೆ ಮಂಜುನಾಥನ ಸನ್ನಿಧಿ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ ನಡೆಯಲಿದ್ದು, ನಿರಂತರ ಅನ್ನದಾನ, ಸಾಹಿತ್ಯ, ಸರ್ವಧರ್ಮ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮ, ಲಕ್ಷ ಲಕ್ಷ ದೀಪಗಳಿಂದ ಧರ್ಮಸ್ಥಳದ ವೈಭವ ಹೆಚ್ಚಲಿದೆ.
ನವೆಂಬರ್ 29ನೇ ತಾರೀಖಿನಿಂದ ಪ್ರತಿದಿನ ರಾತ್ರಿ 9 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ನವೆಂಬರ್ 29ರ ಸೋಮವಾರ ಹೊಸಕಟ್ಟೆ ಉತ್ಸವ, ನವೆಂಬರ್ 30ರ ಮಂಗಳವಾರ ಕೆರೆಕಟ್ಟೆ ಉತ್ಸವ, ಡಿಸೆಂಬರ್ 1ರ ಬುಧವಾರ ಲಲಿತೋದ್ಯಾನ ಉತ್ಸವ, ಡಿಸೆಂಬರ್ 2ರ ಗುರುವಾರ ಕಂಚಿ ಮಾರುಕಟ್ಟೆ ಉತ್ಸವ, ಡಿಸೆಂಬರ್ 3ರ ಶುಕ್ರವಾರ ಗೌರಿ ಮಾರುಕಟ್ಟೆ ಉತ್ಸವ ಮತ್ತು ಡಿಸೆಂಬರ್ 4ರ ಶನಿವಾರ ಕೊನೆಯದ ದಿನ ಅಂಗವಾಗಿ ಶ್ರೀಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿದೆ.
ಈ ಬಾರಿಯೂ ಲಕ್ಷ ದೀಪೋತ್ಸವದ ಅಂಗವಾಗಿ ಸಾಹಿತ್ಯ ಸಮ್ಮೇಳನ, ಸರ್ವಧರ್ಮ ಸಮ್ಮೇಳನ, ನಡೆಯಲಿದೆ. ಡಿಸೆಂಬರ್ 2ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ 89ನೇ ವರ್ಷದ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಸಮ್ಮೇಳನವನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಉದ್ಘಾಟನೆ ಮಾಡಲಿದ್ದಾರೆ. ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ಬೆಂಗಳೂರು ಎಸ್. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ರಾಮಚಂದ್ರ. ಜಿ. ಭಟ್ಟ ವಹಿಸಲಿದ್ದಾರೆ.
ಲಕ್ಷ ದೀಪೋತ್ಸವದ ಮತ್ತೊಂದು ಆಕರ್ಷಣೆ ಸಾಹಿತ್ಯ ಸಮ್ಮೇಳನ. ಡಿಸೆಂಬರ್ 3ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಉದ್ಘಾಟನೆ ಮಾಡಿದರೆ, ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ. ಮಲ್ಲೇಪುರಂ. ಜಿ. ವೆಂಕಟೇಶ್ ವಹಿಸಲಿದ್ದಾರೆ.
ಲಕ್ಷದೀಪೋತ್ಸವದ ಆರು ದಿನಗಳ ಕಾಲವೂ ವಸ್ತುಪ್ರದರ್ಶನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಿರಂತರ ಅನ್ನದಾನ ನಡೆಯಲಿದೆ. ಕಳೆದ ಬಾರಿ ಕೋವಿಡ್ ಕಾರಣದಿಂದ ಭಕ್ತರ ಸಂಖ್ಯೆ ಕಡಿಮೆಯಿದ್ದು, ಈ ಬಾರಿ ಲಕ್ಷಾಂತರ ಮಂದಿ ಭಕ್ತರು ಸೇರುವ ಸಾಧ್ಯತೆಗಳಿವೆ. ರಾಜ್ಯದ ವಿವಿಧ ಭಾಗಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೆಚ್ಚುವರಿ ಬಸ್ಗಳ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ.
ಲಕ್ಷ ದೀಪೋತ್ಸವದ ಹಿನ್ನಲೆಯಲ್ಲಿ ಈ ಬಾರಿಯೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಲಿದ್ದಾರೆ. ಪಾದಯಾತ್ರೆ ಮಾಡಿ ಬರುವ ಭಕ್ತರಿಗೆ ಕ್ಷೇತ್ರದಲ್ಲಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಾದಯಾತ್ರೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಅಲ್ಲಲ್ಲಿ ಕಸ ಎಸೆಯಬೇಡಿ. ಘಾಟ್ ರಸ್ತೆಗಳಲ್ಲಿ, ಪಾದಯಾತ್ರೆ ಮಾಡುವ ರಸ್ತೆಗಳಲ್ಲಿ ಮಲಗಬೇಡಿ, ಪ್ಲಾಸ್ಟಿಕ್ ಎಸೆಯಬೇಡಿ ಎಂದು ಶ್ರೀಕ್ಷೇತ್ರದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.
Recommended Video
ಲಕ್ಷದೀಪೋತ್ಸವದ ಹಿನ್ನಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷ ಲಕ್ಷ ದೀಪಗಳಿಂದ ಕಂಗೊಳಿಸಲಿದೆ. ಚತುರ್ವಿಧ ದಾನಗಳಿಂದ ಹೆಸರು ಗಳಿಸಿರುವ ಧರ್ಮಸ್ಥಳದ ಲಕ್ಷದೀಪೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂದು ಲಕ್ಷಾಂತರ ಭಕ್ತರು ಆಸೆಗಣ್ಣುಗಳಿಂದ ಕಾಯುತ್ತಿದ್ದಾರೆ.