ಮಂಗಳೂರಲ್ಲಿ ಹಸಿವಿನಿಂದ ನಿತ್ರಾಣಗೊಂಡ ಹಿರಿಯ ಜೀವಕ್ಕೆ ಆರೈಕೆ ಮಾಡಿದ ಮಹಿಳಾ ಪೇದೆ
ಮಂಗಳೂರು, ಡಿಸೆಂಬರ್ 07: ರಸ್ತೆ ಬದಿ ನಿತ್ರಾಣದಿಂದ ಪ್ರತಿಕ್ರಿಯಿಸಲು ಅಸಾಧ್ಯವಾದ ಸ್ಥಿತಿಯಲ್ಲಿದ್ದ ಹಿರಿಯ ಜೀವಕ್ಕೆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ನೆರವಾಗಿ ಮಾನವೀಯತೆ ಮೆರೆದ ಅಪರೂಪದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಹಸಿವು ಹಾಗೂ ಬಿಸಿಲಿನ ಬೇಗೆಗೆ ಬಸವಳಿದು ರಸ್ತೆಬದಿ ಬಿದ್ದಿದ್ದ ವೃದ್ಧರೊಬ್ಬರಿಗೆ ಸಂಚಾರಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ವಿಚಾರಿಸಿ ನೀರು, ಬ್ರೆಡ್ ನೀಡಿ ಉಪಚರಿಸಿದ್ದಾರೆ. ನಿತ್ರಾಣ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೂ ಸಾಗಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ನೇತ್ರಾವತಿ ಸೇತುವೆಯ ರಸ್ತೆ ಬದಿಯಲ್ಲಿ ಹಸಿವು ಹಾಗೂ ಬಿಸಿಲಿನಿಂದ ನಿತ್ರಾಣಗೊಂಡು ಸುಮಾರು 65 ವರ್ಷದ ವೃದ್ಧರೊಬ್ಬರು ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿದ ದಾರಿಹೋಕರೊಬ್ಬರು ಸಮೀಪದ ಮಹಾಕಾಳಿ ಪಡ್ಪುವಿನಲ್ಲಿ ಕರ್ತವ್ಯದಲ್ಲಿದ್ದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಭಾಗ್ಯಶ್ರೀ ಗಮನಕ್ಕೆ ತಂದಿದ್ದಾರೆ.

ಕೂಡಲೇ ಸ್ಪಂದಿಸಿದ ಭಾಗ್ಯಶ್ರೀ ಸ್ಥಳಕ್ಕೆ ತೆರಳಿ ಆ ಹಿರಿಯ ಜೀವಕ್ಕೆ ಆಸರೆಯಾದರು. ಸೇತುವೆ ಮೇಲೆ ಬಿದ್ದಿದ್ದ ಆ ಹಿರಿಯ ಜೀವವನ್ನು ಕರೆದಾಗ ನಿತ್ರಾಣದಿಂದ ಪ್ರತಿಕ್ರಿಯಿಸಲು ಅಸಾಧ್ಯವಾದ ಸ್ಥಿತಿಯಾಗಿತ್ತು. ಕಾನ್ ಸ್ಟೇಬಲ್ ಭಾಗ್ಯಶ್ರೀ ಆ ಹಿರಿಯ ಜೀವಕ್ಕೆ ಕುಡಿಯುಲು ನೀರು ನೀಡಿ , ತಿನ್ನಲು ಬ್ರೆಡ್ ನೀಡಿ ಉಪಚರಿಸಿದ್ದಾರೆ.

ಅಷ್ಟರಲ್ಲಿ ಅಲ್ಲಿಗಾಗಮಿಸಿದ ಆಟೋ ಚಾಲಕರೊಬ್ಬರು ಹಣ್ಣು ನೀಡಿದ್ದಾರೆ. ಅದನ್ನು ತಿಂದ ಬಳಿಕ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾಗ್ಯಶ್ರೀ ಅವರ ಈ ಮಾನವೀಯ ಕಳಕಳಿ ಮೆಚ್ಚುಗೆಗೆ ಪಾತ್ರವಾಗಿದೆ.












Click it and Unblock the Notifications