ಕುಕ್ಕೆ ಸುಬ್ರಹ್ಮಣ್ಯದ ಬಸ್ ನಿಲ್ದಾಣವನ್ನು ಆ ದೇವರೇ ಕಾಪಾಡಬೇಕು!
ಮಂಗಳೂರು, ಮೇ 29: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯ ಮತ್ತು ಹೊರರಾಜ್ಯಗಳಲ್ಲೂ ಹೆಸರುವಾಸಿಯಾದುದರಿಂದ ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮಾತ್ರ ಸಂಪೂರ್ಣ ಅವ್ಯವಸ್ಥೆಗಳ ಆಗರವಾಗಿದೆ.
ಹೊಂಡ ಗುಂಡಿಗಳ ರಸ್ತೆ
ಸುಬ್ರಹ್ಮಣ್ಯ ಬಸ್ ನಿಲ್ದಾಣಕ್ಕೆ ಸಂಧಿಸುವ ರಸ್ತೆಗಳಲ್ಲಿ ಬೃಹತಾಕಾರದ ಗುಂಡಿಗಳು ಸೃಷ್ಟಿಯಾಗಿದೆ. ಇದರಿಂದ ಬಸ್ ಚಾಲಕರು, ಅತ್ಯಂತ ತ್ರಾಸದಾಯಕವಾಗಿ ಇಲ್ಲಿ ವಾಹನಗಳನ್ನು ಚಾಲನೆ ಮಾಡುತ್ತಾರೆ. ಈ ಹಿಂದೆ ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಉದಾಹರಣೆಗಳು ಇವೆ ಎನ್ನುತ್ತಾರೆ ಸ್ಥಳೀಯರು.
ಗಬ್ಬು ನಾರುತ್ತಿವೆ ಶೌಚಾಲಯಗಳು
ರಾಜ್ಯದ ಪ್ರತಿಷ್ಠಿತ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಈ ಬಸ್ ನಿಲ್ದಾಣಕ್ಕೆ ಬಂದೇ ಬರಬೇಕು. ಇಲ್ಲಿಯ ಸಾರ್ವಜನಿಕ ಶೌಚಾಲಯಗಳು ಗಬ್ಬು ನಾರುತ್ತಿರುವುದರಿಂದ ಸುತ್ತಮುತ್ತಲೂ ಯಾರೂ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮೂತ್ರ ವಿಸರ್ಜನೆಗಾಗಿ ಪ್ರಯಾಣಿಕರು ಸುತ್ತಮುತ್ತಲಿರುವ ಗುಡ್ಡ-ಕಾಡುಗಳನ್ನು ಅರಸಿರುವುದರಿಂದ ಸುತ್ತಮುತ್ತಲಿನ ಪರಿಸರವು ಗಲೀಜಾಗಿದೆ.

ಹತ್ತಿರದ ವಸತಿ ಗೃಹಗಳೇ ಗತಿ
ಇಲ್ಲಿಗೆ ದೂರದೂರುಗಳಿಂದ ಭೇಟಿ ನೀಡುವ ಪ್ರಯಾಣಿಕರಿಗೆ ಸ್ನಾನಗೃಹ ಮತ್ತು ಶೌಚ ವ್ಯವಸ್ಥೆ ಇಲ್ಲದಿರುವುದರಿಂದ ಹತ್ತಿರದ ವಸತಿಗೃಹಗಳನ್ನು ಅವಲಂಬಿಸುತ್ತಿದ್ದಾರೆ. ಇನ್ನು ಈ ಪರಿಸರದಲ್ಲಿ ಪ್ರಯಾಣಿಕರು ಓಡಾಡುವಾಗ ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ.

ದೂರು ಕೊಟ್ಟರೂ ಕೇಳೋರಿಲ್ಲ
"ಇಲ್ಲಿಗೆ ದಿನಂಪ್ರತಿ ಸಾವಿರಾರು ಜನರು ಬರುತ್ತಾರೆ. ಆದರೆ ಇಲ್ಲಿನ ಮೂಲಭೂತ ಸೌಕರ್ಯಗಳಾದ ರಸ್ತೆ, ಶೌಚ, ಕುಡಿಯುವ ನೀರು ಹೀಗೆ ಎಲ್ಲವೂ ಅಯೋಮಯವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ಸಲ್ಲಿಸಿದರೆ ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ." ಎನ್ನುತ್ತಾರೆ ಸ್ಥಳೀಯರಾದ ಗಣೇಶ್ ಕುಮಾರ್.

ಕೆಸರುಮಯವಾದ ರಸ್ತೆಗಳು
ಸುಬ್ರಹ್ಮಣ್ಯ ನಿಲ್ದಾಣವು ಘಟ್ಟ ಪ್ರದೇಶಕ್ಕೆ ಹತ್ತಿರವಾಗುವುದರಿಂದ ಇಲ್ಲಿ ಆಗಾಗ ಮಳೆ ಬರುತ್ತಿರುತ್ತದೆ. ಈಗ ಈ ಪ್ರದೇಶದಲ್ಲಿ ಮಳೆಗಾಲ ಪ್ರಾರಂಭವಾಗಿರುವುದರಿಂದ ಇಲ್ಲಿನ ಹೊಂಡ-ಗುಂಡಿ ರಸ್ತೆಗಳು ಸಂಪೂರ್ಣ ನೀರಿನಿಂದ ಆವೃತವಾಗಿ ಕೆಸರುಮಯವಾಗಿದೆ. ಇಲ್ಲಿ ನಡೆದಾಡುವ ಪ್ರಯಾಣಿಕರ ಮೇಲೆ ಇಲ್ಲಿನ ವಾಹನಗಳು ಕೆಸರು ಎರಚುತ್ತಿವೆ. ಆದ್ದರಿಂದ ಒಂದು ಕಡೆಯಿಂದ ಚಾಲಕರೂ ಇನ್ನೊಂದು ಕಡೆಯಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕ್ಯಾರೇ ಅನ್ನುತ್ತಿಲ್ಲ ಜನನಾಯಕರು
ಈ ಅವ್ಯವಸ್ಥೆಗಳ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಜನನಾಯಕರಲ್ಲಿ ಹಲವು ದೂರು ನೀಡಿದ್ದಾರೆ. ಆಗ ಈ ಸರಿಮಾಡುತ್ತೇವೆಂಬ ಆಶ್ವಾಸನೆ ನೀಡಿದ್ದಾರೆ ಬಿಟ್ಟರೆ ಈ ಕಡೆ ತಲೆ ಹಾಕುತ್ತಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.

ಮೇಲಿನ ಅಧಿಕಾರಿಗೆ ದೂರು ನೀಡಿ
ಇನ್ನು ಇಲ್ಲಿನ ಶೌಚಾಲಯಗಳನ್ನು ಶುಚಿತ್ವದಲ್ಲಿ ಇಟ್ಟುಕೊಳ್ಳಲು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಯಾರನ್ನೂ ನೇಮಿಸಿಲ್ಲ. ಆದ್ದರಿಂದ ಇದು ಗಬ್ಬು ನಾರುತ್ತಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ಕೇಳಿದರೆ ಮೇಲಿನ ಅಧಿಕಾರಿಗಳಿಗೆ ದೂರು ನೀಡುವಂತೆ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇದು ಚುನಾವಣಾ ವರ್ಷವಾದುದರಿಂದ ಇಲ್ಲಿನ ಜನನಾಯಕರು ಕ್ರಮ ಕೈಗೊಳ್ಳದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎನ್ನುತ್ತಾರೆ ಸ್ಥಳೀಯರು.












Click it and Unblock the Notifications