ಮಾರ್ಚ್ 7 ರಂದು ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಬಂದ್ ಗೆ ಕರೆ
ಮಂಗಳೂರು, ಫೆಬ್ರವರಿ 27:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ನಡುವಿನ ವಿವಾದ ಮತ್ತೆ ತಾರಕಕ್ಕೇರಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಸಂಪುಟ ನರಸಿಂಹ ನರಸಿಂಹ ಸ್ವಾಮಿ ಮಠಕ್ಕೆ ಹಸ್ತಾಂತರಿಸಬೇಕು ಎಂದು ಮುಜರಾಯಿ ಇಲಾಖೆಗೆ ಲಾಯರ್ ಇತ್ತೀಚೆಗೆ ನೋಟಿಸ್ ನೀಡಿರುವುದರಿಂದ ವಿವಾದ ಮತ್ತೆ ಭುಗಿಲೆದ್ದಿದೆ.
ಸಂಪುಟ ನರಸಿಂಹ ಮಠದಿಂದ ನೀಡಲಾಗಿರುವ ಈ ನೋಟಿಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಂಪುಟ ನರಸಿಂಹ ಮಠದ ವಿರುದ್ಧ ದೇವಳದ ಭಕ್ತರ ಹಿತರಕ್ಷಣಾ ವೇದಿಕೆ ವತಿಯಿಂದ ಇದೇ ಬರುವ ಮಾರ್ಚ್ 7ರಂದು ಸುಬ್ರಹ್ಮಣ್ಯ ಬಂದ್ ಗೆ ಕರೆ ನೀಡಲಾಗಿದೆ.

ಮಾರ್ಚ್ 7ರಂದು ಶಾಂತಿಯುತ ಪ್ರತಿಭಟನಾ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಯಲಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕೆ.ಎಸ್. ಮಾಹಿತಿ ನೀಡಿದ್ದಾರೆ.
ದೇವಸ್ಥಾನವನ್ನು ಸಂಪುಟ ನರಸಿಂಹ ಮಠಕ್ಕೆ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟ ವಿಚಾರದಲ್ಲಿ ಯಾವ ರಾಜಕೀಯ ಪಕ್ಷದವರೂ, ರಾಜಕಾರಣಿಯೂ ಧ್ವನಿ ಎತ್ತುತ್ತಿಲ್ಲ. ರಾಜಕಾರಣಿಗಳು ಮೌನವಹಿಸಿರುವುದು ಅಪಾಯದ ಸಂಕೇತ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ್ ರಾವ್ ಪೂರ್ವಭಾವಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈಗಾಗಲೇ ಭಕ್ತರ ಪೂರ್ವಭಾವಿ ಸಭೆಯಲ್ಲಿ ಶಾಂತಿಯುತ ಬಂದ್ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭಕ್ತರ ಆರಾಧನಾ ಕೇಂದ್ರ . ಇದನ್ನು ಖಾಸಗಿ ಮಠಕ್ಕೆ ನೀಡಬೇಕೆನ್ನುವ ವಿಚಾರ ಸಮರ್ಪಕವಲ್ಲ. ಸರ್ವ ಭಕ್ತರೂ ಜಾಗೃತರಾಗಿ ದೇವಾಲಯ ರಕ್ಷಿಸಬೇಕು ಎಂದು ಸಭೆಯಲ್ಲಿ ಕರೆ ನೀಡಲಾಗಿದೆ.












Click it and Unblock the Notifications