ಕೊನೆಗೂ ಸುಳ್ಯ ಕೋರ್ಟ್ ಮೆಟ್ಟಿಲು ಹತ್ತಲಿದ್ದಾರೆ ಡಿಕೆಶಿ!
ಮಂಗಳೂರು, ಅಕ್ಟೋಬರ್ 03: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕೊನೆಗೂ ಸುಳ್ಯ ಕೋರ್ಟ್ ಮೆಟ್ಟಿಲು ಹತ್ತಲಿದ್ದಾರೆ. ಇಂಧನ ಸಚಿವರಾಗಿದ್ದಾಗ ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ ವ್ಯಕ್ತಿಯನ್ನು ಬಂಧನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಳ್ಯ ಕೋರ್ಟ್ ಪದೇ ಪದೇ ನೊಟೀಸ್ ನೀಡಿದರೂ ಆಗಮಿಸದಿದ್ದ ಡಿ. ಕೆ. ಶಿವಕುಮಾರ್ ಈ ಬಾರಿ ತಪ್ಪಿಸಿಕೊಳ್ಳಲಾಗದೇ ಅಕ್ಟೋಬರ್ 5ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಈ ಹಿಂದೆ ಸೆಪ್ಟೆಂಬರ್ 9ರಂದು ಕೋರ್ಟ್ಗೆ ಹಾಜರಾಗಲು ಸುಳ್ಯ ಕೋರ್ಟ್ ನೋಟಿಸ್ ನೀಡಿತ್ತು. ಸೆಪ್ಟೆಂಬರ್ 9ರಂದು ಡಿ. ಕೆ. ಶಿವಕುಮಾರ್ ಗೈರಾಗಿದ್ದರು. ಆ ಬಳಿಕ ಕೋರ್ಟ್ ಸೆಪ್ಟೆಂಬರ್ 29ರಂದು ಕಡ್ಡಾಯವಾಗಿ ಹಾಜರಾಗುವಂತೆ ಆದೇಶ ಮಾಡಿತ್ತು. ಆದರೆ ಆ ಆದೇಶಕ್ಕೂ ಡಿ. ಕೆ. ಶಿವಕುಮಾರ್ ಕ್ಯಾರೇ ಅಂದಿರಲಿಲ್ಲ.
ಹೀಗಾಗಿ ನ್ಯಾಯಾಲಯ ಡಿ. ಕೆ. ಶಿವಕುಮಾರ್ ಫ್ರೋಕ್ಲಮೇಷನ್ ಆದೇಶ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 5ರಂದು ಸುಳ್ಯ ನ್ಯಾಯಾಲದಲ್ಲಿ ನಡೆಯುವ ವಿಚಾರಣೆಗೆ ಡಿ. ಕೆ. ಶಿವಕುಮಾರ್ ಹಾಜರಾಗಲೇಬೇಕಿದೆ. ಈ ವಿಚಾರಣೆಗೆ ತಪ್ಪಿದರೆ ಬಂಧನ ಮಾಡುವ ಆದೇಶವನ್ನು ಕೋರ್ಟ್ ಹೊರಡಿಸಬಹುದು. ಈ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಈ ಹಿನ್ನಲೆಯಲ್ಲಿ ಡಿ. ಕೆ. ಶಿವಕುಮಾರ್ ಅಕ್ಟೋಬರ್ 5ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಬೆಳಗ್ಗೆ11.30ರ ವೇಳೆಗೆ ಕೋರ್ಟ್ ಕಲಾಪಕ್ಕೆ ಡಿ. ಕೆ. ಶಿವಕುಮಾರ್ ಹಾಜರಾಗಲಿದ್ದಾರೆ. ಕೋರ್ಟ್ ಕಲಾಪ ಮುಗಿದ ಬಳಿಕ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಏನಿದು ಪ್ರಕರಣ; 2016ರ ಫೆಬ್ರವರಿ 28ರಂದು ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ, ಬೆಳ್ಳಾರೆಯ ವರ್ತಕ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ್ ರೈ ತನ್ನೂರಿನಲ್ಲಿ ನಿರಂತರವಾಗಿ ಕಾಡುತ್ತಿದ್ದ ವಿದ್ಯುತ್ ಸಮಸ್ಯೆ ಬಗ್ಗೆ ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ಗೆ ದೂರವಾಣಿ ಕರೆ ಮಾಡಿ ವಿದ್ಯುತ್ ಸಮಸ್ಯೆ ಬಗ್ಗೆ ಸಚಿವರ ಬಳಿ ಹೇಳಿದ್ದರು.
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಪರಸ್ಪರ ಅವ್ಯಾಚ್ಯ ಶಬ್ಧಗಳ ಬಳಕೆ ಕೂಡಾ ಮಾಡಿದ್ದರು. ಬಳಿಕ ಡಿ. ಕೆ. ಶಿವಕುಮಾರ್ ಮೆಸ್ಕಾಂ ಎಂಡಿ ಮೂಲಕ ಅಂದಿನ ಸುಳ್ಯ ಪ್ರಭಾರ ಎಇಇ ಹರೀಶ್ ನಾಯಕ್ ಎಂಬುವವರು ಸಾಯಿ ಗಿರಿಧರ್ ರೈ ವಿರುದ್ಧ ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದು ರಾತ್ರಿ ವೇಳೆ ಸಾಯಿ ಗಿರಿಧರ್ ಮನೆಗೆ ನುಗ್ಗಿದ ಸುಳ್ಯ ಪೊಲೀಸರು, ಸಾಯಿ ಗಿರಧರ್ ರೈ ಅವರ ಮನೆಯ ಹಂಚು ತೆಗೆದು ಮನೆಯ ಒಳಗೆ ಪ್ರವೇಶಿಸಿ, ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದರು.
ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇಂಧನ ಸಚಿವರು ತಮ್ಮ ಪ್ರಭಾವ ಬಳಸಿ ವಿದ್ಯುತ್ ಕೇಳಿದ ಜನಸಾಮಾನ್ಯನ ಮೇಲೆ ಪೊಲೀಸ್ ದೌರ್ಜನ್ಯ ಎಸಗಿದರ ಬಗ್ಗೆ ಪ್ರತಿಪಕ್ಷ ಬಿಜೆಪಿ ಸೇರಿದಂತೆ ಜನಸಾಮಾನ್ಯರೂ ಅಕ್ರೋಶ ವ್ಯಕ್ತಪಡಿಸಿದ್ದರು.
ಆ ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಪ್ರಕರಣದ ಕೂಲಂಕುಷ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಡಿ. ಕೆ. ಶಿವಕುಮಾರ್ ನ್ಯಾಯಾಲಯ ಪ್ರಮಖ ಸಾಕ್ಷಿಯನ್ನಾಗಿ ಪರಿಗಣಿಸಿತ್ತು. ಕಳೆದ ಸಪ್ಟೆಂಬರ್ 9ನೇ ತಾರೀಖಿನಂದು ಈ ಪ್ರಕರಣದ ಕುರಿತು ಸುಳ್ಯ ನ್ಯಾಯಾಲಯದಲ್ಲಿ ವಿಚಾರೇ ನಡೆದಿದ್ದು, ವಿಚಾರಣೆಗೆ ಹಾಜರಾಗುವಂತೆ ಸುಳ್ಯ ನ್ಯಾಯಾಲಯ ಡಿ.ಕೆ. ಶಿವಕುಮಾರ್ಗೆ ಸಮನ್ಸ್ ನೀಡಿತ್ತು.
ಆದರೆ ಆ ದಿನ ಅನ್ಯ ಕಾರಣ ನೀಡಿ ಡಿ. ಕೆ. ಶಿವಕುಮಾರ್ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಸುಳ್ಯ ನ್ಯಾಯಾಲಯ ಡಿ. ಕೆ. ಶಿವಕುಮಾರ್ ವಿರುದ್ಧ ವಾರೆಂಟ್ ಹೊರಡಿಸಿದ್ದು ಸೆಪ್ಟೆಂಬರ್ 29ನೇ ತಾರೀಖಿನಂದು ನಡೆಯುವ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಲೇಬೇಕೆಂದು ಸೂಚನೆ ನೀಡಿತ್ತು. ಆದರೆ ಅದಕ್ಕೂ ಗೈರಾದ ಡಿಕೆಶಿ ವಿರುದ್ಧ ಕೋರ್ಟ್ ಪ್ರೋಕ್ಲಮೇಶನ್ ಆದೇಶ ಜಾರಿ ಮಾಡಿದೆ. ಅಕ್ಟೋಬರ್ 5 ರಂದು ನಡೆಯುವ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಈ ಮೂಲಕ ಕೊನೆಯ ಅವಕಾಶ ನೀಡಿದೆ.
ಈ ಮೂಲಕ ಕಾನೂನಿನ ಎದುರು ಯಾರು ಎಷ್ಟೇ ಪ್ರಭಾವಶಾಲಿಯಾದರೂ ಎಲ್ಲರೂ ಒಂದೇ ಅಂತಾ ನ್ಯಾಯಾಲಯ ನಿರೂಪಿಸಿದೆ. ಡಿ. ಕೆ. ಶಿವಕುಮಾರ್ ಅವರನ್ನು ನ್ಯಾಯಾಲಕ್ಕೆ ವಿಚಾರಣೆಗೆ ಕರೆತರುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇಷ್ಟೆಲ್ಲಾ ಆದರೂ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ಆಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ದಿನದ ಬಹುತೇಕ ಗಂಟೆಗಳಲ್ಲಿ ವಿದ್ಯುತ್ ಸ್ಥಗಿತವಾಗಿರೋದ್ರಿಂದ ಜನರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ಮಳೆ ಸುರಿದರೂ ಎರಡ್ಮೂರು ದಿನ ವಿದ್ಯುತ್ ಇಲ್ಲದೇ ಜನ ಹೈರಾಣಾಗಿದ್ದಾರೆ. ಸುಳ್ಯದ ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಗೆ ಈ ಪ್ರಕರಣವಾದ ಬಳಿಕ ಹಲವು ಸರ್ಕಾರಗಳು ಬಂದು ಹೋದರೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ ಅನ್ನೋದೇ ದುರಂತವಾಗಿದೆ.












Click it and Unblock the Notifications