ಅನಂತ್ ಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ ಖಾದರ್, ಶಕುಂತಲಾ ಶೆಟ್ಟಿ
ಮಂಗಳೂರು, ನವೆಂಬರ್.12: ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆ ಹಿನ್ನೆಲೆಯಲ್ಲಿ ಮಂಗಳೂರಿನ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
"ಅನಂತ್ ಕುಮಾರ್ ಅವರು ನನಗೆ ಹಲವಾರು ವಿಚಾರದಲ್ಲಿ ಸಲಹೆ ನೀಡಿದ್ದರು. ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಸಲಹೆ ನೀಡಿದ್ದರು. ರಾಜ್ಯದ ಧೀಮಂತ ನಾಯಕರಲ್ಲಿ ಅನಂತ್ ಕುಮಾರ್ ಕೂಡ ಒಬ್ಬರು.
ಅನಂತ್ ಕುಮಾರ್ ಅಕಾಲಿಕ ಅಗಲಿಕೆ ತೀವ್ರ ದುಃಖ ತಂದಿದೆ. ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ರಾಜ್ಯಕ್ಕೆ ಭರಿಸಲಾರದ ನಷ್ಟ ಎಂದರು.

ಅನಂತಕುಮಾರ್ ನಿಧನಕ್ಕೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕೂಡ ಕಂಬನಿ ಮಿಡಿದಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅನಂತ್ ಕುಮಾರ್ ಅವರ ನಿಧನ ಸುದ್ದಿ ಕೇಳಿ ಅಘಾತವಾಗಿದೆ. ನಾನು ಬಿಜೆಪಿ ಪಕ್ಷದಲ್ಲಿದ್ದ ಸಂದರ್ಭದಲ್ಲಿ ನನಗೆ ಮಾರ್ಗದರ್ಶನ ಮಾಡಿದವರು ಅನಂತ್ ಕುಮಾರ್. ಅನಂತ್ ಕುಮಾರ್ ಹಾಗೂ ಅವರ ತಾಯಿಯವರ ಪ್ರಭಾವ ನನ್ನ ರಾಜಕೀಯ ಜೀವನದ ಮೇಲಿದೆ.
ಅನಂತ ಕುಮಾರ್ ಅವರ ಅಗಲಿಕೆ ಊಹಿಸಲೂ ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆಯಿಂದ ಕರ್ನಾಟಕದ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು.












Click it and Unblock the Notifications