ಮಂಗಳೂರು : ಕೇಶವ ಶೆಟ್ಟಿ ಕೊಂದಿದ್ದ ಸತೀಶ್ ಬಂಧನ
ಮಂಗಳೂರು, ಫೆ.5 : ಸೂರಿಂಜೆಯಲ್ಲಿ ನಡೆದ ಬಿಜೆಪಿ ಮುಖಂಡ ಹಾಗೂ ವ್ಯಾಪಾರಿ ಕೇಶವ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಸತೀಶ್ ಸೂರಿಂಜೆ ಬಂಧಿತ ಆರೋಪಿ.
ಬ್ಯಾಡ್ಮಿಂಟನ್ ಆಡಲು ಹೋಗುತ್ತಿದ್ದ ಕೇಶವ ಶೆಟ್ಟಿ ಅವರನ್ನು ಜನವರಿ 6ರಂದು ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲತೀಶ್ (25), ಶೋಭರಾಜ್ (23), ಅಪ್ಪು, ಕೃಷ್ಣ (19), ಭರತ್ ಎಂಬುವವರನ್ನು ಬಂಧಿಸಲಾಗಿತ್ತು, ಸತೀಶ್ ಮಾತ್ರ ಪರಾರಿಯಾಗಿದ್ದ. [ಕೇಶವ ಶೆಟ್ಟಿ ಕೊಲೆಗೆ ಹಣವೇ ಕಾರಣ]

ಸದ್ಯ ಸತೀಶ್ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೇಲ್ ತಲಪಾಡಿ ಬಸ್ ನಿಲ್ದಾಣದ ಬಳಿ ಸತೀಶ್ ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. [ಸೂರಿಂಜೆ ಬಳಿ ಬಿಜೆಪಿ ಮುಖಂಡನ ಹತ್ಯೆ]
8 ಪ್ರಕರಣಗಳಿವೆ : ಸತೀಶ್ ಸೂರಿಂಜೆಯ ಮೇಲೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, 2010ರಲ್ಲಿ ಶಿಬರೂರಿನಲ್ಲಿ ನಡೆದ ಕೊಲೆಯತ್ನ ಪ್ರಕರಣ, 2012 ರಲ್ಲಿ ಸುರತ್ಕಲ್ನಲ್ಲಿ ನಡೆದ ಮಣಿಕಂಠ ಎಂಬವನ ಕೊಲೆ ಪ್ರಕರಣ, 2013ರಲ್ಲಿ ಮಡಿಕೇರಿ ಜೈಲಿನಲ್ಲಿ ಬೆದರಿಕೆ ಹಾಕಿದ ಪ್ರಕರಣ ಸೇರಿದಂತೆ ವಿವಿಧ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ.
ಹಣಕ್ಕಾಗಿ ಕೊಲೆ : ವ್ಯಾಪಾರಿಯಾಗಿದ್ದ ಕೇಶವ ಶೆಟ್ಟಿ ಅವರು ಹೊಸಬೆಟ್ಟುವಿನಲ್ಲಿ ಗ್ಯಾರೇಜ್ ತೆರೆದಿದ್ದರು. ಸತೀಶ್ ಅವರ ಬಳಿ ಹಣ ಕೇಳಿದ್ದರು. ಹಣ ನೀಡಲು ಕೇಶವ ಶೆಟ್ಟಿ ನಿರಾಕರಿಸಿದ್ದರು. ಆದ್ದರಿಂದ ಸತೀಶ್ ಕೊಲೆ ಬೆದರಿಕೆ ಹಾಕಿದ್ದರು. ಈ ಕುರಿತು ಕೇಶವ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದರು.
ಈಗಾಗಲೇ ಬಂಧಿತನಾಗಿರುವ ಲತೀಶ್ ಮತ್ತು ಸತೀಶ್ ಇಬ್ಬರು ಸೇರಿ ಕೇಶವ ಶೆಟ್ಟಿ ಅವರ ಕೊಲೆಗೆ ಸಂಚು ರೂಪಿಸಿದ್ದರು. ಸದ್ಯ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಸಿಕ್ಕಿಬಿದ್ದಂತಾಗಿದೆ.











Click it and Unblock the Notifications