ಮಂಗಳೂರಲ್ಲಿ ಝಾಕೀರ್ ನಾಯ್ಕ್ ಕಾರ್ಯಕ್ರಮಕ್ಕೆ ಅವಕಾಶವಿಲ್ಲ
ಮಂಗಳೂರು, ಏಪ್ರಿಲ್ 11 : ಮಂಗಳೂರು ನಗರದಲ್ಲಿ ಇಸ್ಲಾಂ ಧರ್ಮ ಪ್ರಚಾರಕ ಡಾ.ಝಾಕೀರ್ ನಾಯ್ಕ್ ಕಾರ್ಯಕ್ರಮ ನಡೆಸದಂತೆ ಸೂಚನೆ ನೀಡಲಾಗಿದೆ. ಡಿಸೆಂಬರ್ ಮತ್ತು ಜನವರಿಯಲ್ಲಿಯೂ ಝಾಕೀರ್ ನಾಯ್ಕ್ ಕಾರ್ಯಕ್ರಮಕ್ಕೆ ನಿಷೇಧ ಹೇರಲಾಗಿತ್ತು.
2015ರ ಡಿಸೆಂಬರ್ನಲ್ಲಿ ನಡೆಯಬೇಕಿದ್ದ ವಿದ್ವಾಂಸ ಡಾ.ಝಾಕೀರ್ ನಾಯ್ಕ್ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಮತ್ತು ಮಂಗಳೂರು ಪೊಲೀಸರು ಅನುಮತಿ ನೀಡಿರಲಿಲ್ಲ. ಡಿ. 27ರಂದು ನೆಹರು ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ಅನುಮತಿ ಸಿಗದ ಕಾರಣ ಕಾರ್ಯಕ್ರಮ ರದ್ದಾಗಿತ್ತು. [ಝಾಕೀರ್ ನಾಯ್ಕ್ ಮಂಗಳೂರು ಪ್ರವೇಶಕ್ಕೆ ನಿಷೇಧ]

ಡಿಸೆಂಬರ್ನಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕ್ರಮ ಮುಂದೂಡುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದರು. 2016ರ ಜನವರಿ 2ರಂದು ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದರೆ, ಆಗ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಡಾ.ಝಾಕೀರ್ ನಾಯ್ಕ್ ನಗರ ಪ್ರವೇಶಿಸದಂತೆ ಪೊಲೀಸರು ನಿಷೇಧ ಹೇರಿದ್ದರು. [ಝಾಕೀರ್ ನಾಯ್ಕ್ ಯಾರು?]
ಫೆಬ್ರವರಿಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತಿ ಚುನಾವಣೆ ಇರುವುದರಿಂದ ಮಾರ್ಚ್ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡುವುದಾಗಿ ಕಾರ್ಯಕ್ರಮದ ಸಂಘಟಕರಾದ ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ನಿಯೋಗಕ್ಕೆ ಗೃಹ ಸಚಿವರು ಭರವಸೆ ನೀಡಿದ್ದರು. [ಭಾರತದ ಮೇಲೆ ಹಿಂದೂಗಳಿಗಿರುವಷ್ಟೇ ಹಕ್ಕು ಕ್ರೈಸ್ತರಿಗಿದೆ: ಸೂಲಿಬೆಲೆ]
ಏಪ್ರಿಲ್ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿತ್ತು. ಕಾಂಗ್ರೆಸ್ಸಿನ ಕೆಲವು ಮುಸ್ಲಿಂ ಮುಖಂಡರ ವಿರೋಧ, ಗುಪ್ತಚರ ಇಲಾಖೆ ಮಾಹಿತಿ, ಸಿಎಂ ಸಲಹೆಗಾರರ ಸಲಹೆ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು, ಕಾರ್ಯಕ್ರಮ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಸಂಘಟಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಇದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದು ದೇಶದ ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ' ಎಂದು ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ನ ಕೇಂದ್ರೀಯ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಹೇಳಿದ್ದಾರೆ.












Click it and Unblock the Notifications