ಕರಾವಳಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ; ಕದ್ರಿಯಲ್ಲಿ ಕೃಷ್ಣ ಲೋಕ ಸೃಷ್ಠಿ
ಮಂಗಳೂರು, ಆಗಸ್ಟ್ 19: ಇಲ್ಲಿನ ಕದ್ರಿ ಶ್ರೀಮಂಜುನಾಥೇಶ್ವರ ದೇವಸ್ಥಾನದ ವಠಾರ ಅಕ್ಷರಶಃ ನಂದಗೋಕುಲವಾಗಿದೆ. ಕಂದ ಕೃಷ್ಣನಿಂದ ಹಿಡಿದು ಯಶೋಧ, ವಸುದೇವ ಕೃಷ್ಣನವರೆಗೂ ಸಾವಿರಾರು ಕೃಷ್ಣಂದಿರ ಸಮಾಗಮವಾಗಿದೆ.
ದ್ವಾಪರಯುಗದ ಕೃಷ್ಣನನ್ನು ನೋಡಲು ಸಾಧ್ಯವಾಗದಿದ್ದರೂ ಇದೀಗ ಕಲಿಯುಗದಲ್ಲಿ ಸಾವಿರಾರು ಕೃಷ್ಣನನ್ನು ನೋಡುವ ಭಾಗ್ಯ ಮಂಗಳೂರಿಗರಿಗೆ ಸಿಕ್ಕಿದೆ. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಕೃಷ್ಣಲೋಕ ಸೃಷ್ಠಿಯಾಗಿದೆ.
ಕೃಷ್ಣ ಜನ್ಮಾಷ್ಟಮಿ: ಮುಂಬೈನಲ್ಲಿ ವಿಶ್ವ ದಾಖಲೆ ಬರೆದ ಅತಿ ಎತ್ತರದ ಮಾನವ ಪಿರಮಿಡ್
ಸಾವಿರಾರು ಕೃಷ್ಣಂದಿರು ಒಮ್ಮೆಲೇ ಕಾಣ ಸಿಕ್ಕಿದ್ದು ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಕೃಷ್ಣವೇಷ ಸ್ಫರ್ಧೆ ಎಲ್ಲರ ಗಮನ ಸೆಳೆದಿದೆ. ಕೃಷ್ಣನ ಬಾಲ್ಯವನ್ನು ನೆನಪಿಸುವ ಕಂದಕೃಷ್ಣ, ಬಾಲಕೃಷ್ಣ, ತುಂಟಕೃಷ್ಣ, ಮುದ್ದುಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ ಸೇರಿದಂತೆ ಗೀತಾಕೃಷ್ಣ, ದೇವಕಿಕೃಷ್ಣ, ಯಶೋದ ಕೃಷ್ಣ, ವಸುದೇವ ಕೃಷ್ಣ ಹೀಗೆ ವಿವಿಧ ರೀತಿಯ ಕೃಷ್ಣಂದಿರು ಅಲ್ಲಿ ಕಾಣ ಸಿಕ್ಕಿದರು.
ಇಂದಿನ ಮಕ್ಕಳಿಗೆ ಕೃಷ್ಣನ ಬಗ್ಗೆ ತಿಳಿಸಲು ಸ್ಪರ್ಧೆ
ಶ್ರೀ ಕೃಷ್ಣ ಪರಮಾತ್ಮನ ಚರಿತ್ರೆಯನ್ನು ನೆನಪಿಸುವ ಹಾಗೂ ಇಂದಿನ ಮಕ್ಕಳಿಗೆ ಕೃಷ್ಣನ ಬಗ್ಗೆ ತಿಳಿಯಲಿ ಅನ್ನುವ ನಿಟ್ಟಿನಲ್ಲಿ ಸಂಘಟಕರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಒಂದು ತಿಂಗಳ ಕಂದಮ್ಮಗಳಿಂದ ಹಿಡಿದು ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದು ಈ ಕಾರ್ಯಕ್ರಮದ ಆಯೋಜನೆಗೆ ಪ್ರತಿಫಲ ಸಿಕ್ಕಿದಂತಾಯಿತು.
ಹರಕೆಯ ರೂಪದಲ್ಲಿ ಮಕ್ಕಳಿಗೆ ಕೃಷ್ಣ ವೇಷ
ಜಿಲ್ಲೆ, ರಾಜ್ಯ ಮಾತ್ರವಲ್ಲದೆ ದೇಶದೆಲ್ಲೆಡೆ ಇರುವ ಮಂಗಳೂರಿಗರು ಈ ಸಮಯದಲ್ಲಿ ಆಗಮಿಸಿ ಈ ಕೃಷ್ಣ ವೇಷ ಸ್ಫರ್ಧೆಯಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿಕೊಳ್ಳುತ್ತಾರೆ. ಕೆಲವರು ಸ್ಫರ್ಧೆಗಾಗಿ ಭಾಗವಹಿಸಿದರೆ, ಕೆಲವು ಮಕ್ಕಳ ಹೆತ್ತವರು ಹರಕೆಯ ರೂಪದಲ್ಲಿ ಇಲ್ಲಿ ಮಕ್ಕಳಿಗೆ ಕೃಷ್ಣ ವೇಷವನ್ನು ಹಾಕಿಸುತ್ತಾರೆ. ಮಕ್ಕಳಾಗದವರು ತಮಗೆ ಮಕ್ಕಳಾದರೆ ಇಲ್ಲಿ ಕೃಷ್ಣವೇಷ ಹಾಕಿಸುತ್ತೇವೆ ಎಂದು ಹರಕೆ ಹೊತ್ತು ವೇಷ ಹಾಕಿಸಿದ್ದಾರೆ. ತಾನು ಮಕ್ಕಳಾಗಿದ್ದಾಗ ಮುದ್ದು ಕೃಷ್ಣ ಹಾಕಿದ್ದವರೂ ಇದೀಗ ತಮ್ಮ ಮಕ್ಕಳಿಗೆ ಮುದ್ದು ಕೃಷ್ಣ ವೇಷ ಹಾಕಿಸಿ ತಾನು ಯಶೋಧೆಯಾಗಿ ಕಾಣಿಸಿಕೊಂಡು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.
ಎಲ್ಲಾ ಮಕ್ಕಳಿಗೂ ಬಹುಮಾನ
ಈ ಕೃಷ್ಣ ವೇಷ ಸ್ಫರ್ಧೆಯು ದೇವಸ್ಥಾನದ ವಠಾರದ 9 ವೇದಿಕೆಯಲ್ಲಿ 33 ವಿಭಾಗಗಳಲ್ಲಿ ನಡೆಯಿತು. ಎಲ್ಲಾ ವಿಭಾಗದಲ್ಲೂ ಮಕ್ಕಳಿಗೆ ಬಹುಮಾನವನ್ನು ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಈ ಕಾರ್ಯಕ್ರಮವನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು, ದೇವಸ್ಥಾನವೆಲ್ಲಾ ಜಾತ್ರೆಯಂತೆ ಜನ ಸಾಗರದಿಂದ ತುಂಬಿತ್ತು. ಈಗಿನ ಕಾಲದಲ್ಲೂ ಇಂತಹ ಕಾರ್ಯಕ್ರಮಗಳಿಗೆ ಜನ ಬರೋದನ್ನು ನೋಡಿದರೆ ನಮ್ಮ ಸಂಸ್ಕೃತಿ ಇನ್ನೂ ಉಳಿದಿದೆ ಜನ ಮಾತನಾಡಿಕೊಳ್ಳುತ್ತಿದ್ದದ್ದು ಕಂಡುಬಂದಿತು.
ಎರಡು ವರ್ಷಗಳ ನಂತರ ಸ್ಪರ್ಧೆ
ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ ಕೃಷ್ಣ ವೇಷ ಸ್ಪರ್ಧೆ ಈ ಭಾರಿ ಅದ್ಧೂರಿಯಿಂದ ನಡೆದಿದ್ದು ಸಾವಿರಾರು ಜನ ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೋವಿಡ್ ಕಾರಣದಿಂದ ಎರಡು ವರ್ಷ ಮುದ್ದು ಕೃಷ್ಣ ಸ್ಪರ್ಧೆಯನ್ನು ಆನ್ ಲೈನ್ ಮೂಲಕ ಮಾಡಲಾಗಿತ್ತು. ಆದರೆ ಈ ಬಾರಿ ಮಕ್ಕಳು, ತಾಯಂದಿರ ಸ್ಪಂದನೆ ನೋಡುವಾಗ ಮನತುಂಬಿ ಬರುತ್ತಿದೆ. ಜಾತಿ, ಧರ್ಮ, ಭಾಷೆ, ರಾಜ್ಯ ಮೀರಿ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದ್ದಾರೆ ಮತ್ತೊಂದು ವಿಶೇಷವಾಗಿತ್ತು.
Recommended Video