ಜೆಸಿಬಿ, ಹಿಟಾಚಿ ಯಂತ್ರಗಳನ್ನು ಕದ್ದು ಸಿಕ್ಕಿಬಿದ್ದ ಆಸಾಮಿ
ಮಂಗಳೂರು ಜುಲೈ 10: ಕಾರು, ಬೈಕ್ ಗಳನ್ನು ಕದಿಯುವ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಜೆಸಿಬಿ, ಹಿಟಾಚಿಯಂತಹ ಭಾರೀ ಯಂತ್ರಗಳನ್ನು ಕಳುವು ಮಾಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರು ಹೊರವಲಯದ ಕುಪ್ಪೆಪದವು ಕಲ್ಲಿನಕೋರೆಯಲ್ಲಿ ನಿಲ್ಲಿಸಿದ್ದ ಜೆಸಿಬಿ, ಹಿಟಾಚಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುತ್ತೂರು ನಿವಾಸಿ ಅಬ್ದುಲ್ ರಹಿಮಾನ್ (35) ಎಂದು ಗುರುತಿಸಲಾಗಿದೆ.
ಮಂಗಳೂರಿನ ದಂಬೇಲ್ ನಿವಾಸಿ ಶರತ್ ಕೆ. ಚಂದ್ರ ನಗರ ಹೊರವಲಯದ ಕೆಲೆಂಜಾರು ಗ್ರಾಮದ ಕುಪ್ಪೆಪದವು ಕಲ್ಲಿನಕೋರೆಯಲ್ಲಿ ಜೆಸಿಬಿ ಮತ್ತು ಟಾಟಾ ಹಿಟಾಚಿ ಮಷಿನ್ ಗಳನ್ನು ಇರಿಸಿದ್ದರು. ಈ ಮಷಿನ್ ಗಳು ತಾಂತ್ರಿಕ ದೋಷದ ಕಾರಣ ಚಾಲನಾ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಕೋರೆಯಲ್ಲಿಯೇ ಅವುಗಳನ್ನು ಇರಿಸಿದ್ದರು.
ಕಳೆದ ಮೇ 19ರಂದು ಯಂತ್ರಗಳನ್ನು ನೋಡಿದ್ದ ಶರತ್ ಜುಲೈ 8ರಂದು ಬೆಳಿಗ್ಗೆ 9 ಗಂಟೆಗೆ ಬಂದು ನೋಡಿದಾಗ ಅಲ್ಲಿಟ್ಟಿದ್ದ ಜೆಸಿಬಿ ಮತ್ತು ಹಿಟಾಚಿ ಮಷಿನ್ ಗಳು ಕಾಣೆಯಾಗಿದ್ದವು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿ ಅಬ್ದುಲ್ ರಹಿಮಾನ್ ನನ್ನು ಬಂಧಿಸಿದ್ದಾರೆ.

ಆರೋಪಿ ಅಬ್ದುಲ್ ರಹಿಮಾನ್ ನನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಜೆಸಿಬಿ ಮತ್ತು ಟಾಟಾ ಹಿಟಾಚಿ ಮಷಿನ್ ಗಳನ್ನು ಕಳವು ಮಾಡಿ ತುಂಡರಿಸಿ ಗುಜರಿಗೆ ಮಾರಾಟ ಮಾಡಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾನೆ. ಜೆಸಿಬಿ ಮತ್ತು ಹಿಟಾಚಿ ಯಂತ್ರದ ತುಂಡರಿಸಿದ ಭಾಗಗಳು, ಎರಡು ಲಕ್ಷ ಮೌಲ್ಯದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications