Breaking: ಮಂಗಳೂರು ಸ್ಪೋಟದ ಹೊಣೆ ಹೊತ್ತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್
ಮಂಗಳೂರು, ನವೆಂಬರ್, 24: ಮಂಗಳೂರಿನ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೊತ್ತುಕೊಂಡಿರುವ ಬಗ್ಗೆ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಹೆಸರಿನ ಗುಂಪಿನ ಪೋಸ್ಟ್ ನಲ್ಲಿ ಉಲ್ಲೇಖಿಸಿದ ಅಂಶದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರು ಅದನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದಾರೆ.
Mangaluru Blast Case: ಶಂಕಿತ ಉಗ್ರ ಶಾರಿಕ್ ಗುಣಮುಖನಾಗಲು ಬೇಕು 25 ದಿನ
ಮೂಲವಾಗಿ ಕದ್ರಿ ದೇವಸ್ಥಾನದ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇದರ ಹೊರತಾಗಿ ಪೋಸ್ಟ್ ಅನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲೇ ತುಂಡರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇಡೀ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ ಬೆನ್ನಲ್ಲೇ ಇಂಥದೊಂದು ಬೆಳವಣಿಗೆ ನಡೆದಿದೆ.
ಬುಧವಾರ ಎನ್ಐಎಗೆ ಕೇಸ್ ಹಸ್ತಾಂತರ:
ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಬುಧವಾರ ಅಧಿಕೃತವಾಗಿ ರಾಷ್ಟ್ರೀಯ ತನಿಖಾ ತಂಡ(ಎನ್ಐಎ)ಕ್ಕೆ ಹಸ್ತಾಂತರಿಸಲಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದರು. "ಯುಎಪಿಎಗೆ ಸಂಬಂಧಿಸಿದ ಯಾವುದೇ ಪ್ರಕರಣವಾಗಿದ್ದರೂ ಅದನ್ನು ಎನ್ಐಎ ತಂಡಕ್ಕೆ ಹಸ್ತಾಂತರ ಮಾಡಲಾಗುತ್ತದೆ. ನಿನ್ನೆ ಸಂಜೆಯೇ ನಾವು ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಎನ್ಐಎ ತಂಡಕ್ಕೆ ರವಾನಿಸಿದ್ದೇವೆ. ಅದನ್ನು ಇಂದು ಕೇಂದ್ರ ಗೃಹ ಸಚಿವಾಲಯಕ್ಕೆ ತಲುಪಿಸಲಾಗುತ್ತದೆ," ಎಂದು ತಿಳಿಸಿದರು.
ಮಂಗಳೂರಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವೂ ಸೇರಿದಂತೆ ಇಂಥ ಪ್ರಕರಣಗಳಲ್ಲಿ ಆರಂಬದಿಂದಲೂ ಕೇಂದ್ರೀಯ ತನಿಖಾ ತಂಡಗಳು ವಿಚಾರಣೆಯಲ್ಲಿ ಪೊಲೀಸರ ಜೊತೆಗೆ ಕೈ ಜೋಡಿಸಿರುತ್ತವೆ. ಸೂಕ್ಷ್ಮ ಅಂಶಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ತನಿಖೆಯನ್ನು ನಡೆಸುತ್ತವೆ. ಆದರೆ ಈಗ ಅಧಿಕೃತವಾಗಿ ಎನ್ಐಎ ತಂಡಕ್ಕೆ ಈ ಪ್ರಕರಣವನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದರು.
ಮಂಗಳೂರಿನಲ್ಲಿ ಸ್ಫೋಟ ಸಂಭವಿಸಿದ್ದ ಸ್ಥಳಕ್ಕೆ ಭೇಟಿ:
ಮಂಗಳೂರಿನ ಆಟೋ ಸ್ಪೋಟಗೊಂಡ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಪೋಟಗೊಂಡ ಆಟೋವನ್ನು ಘಟನಾ ಸ್ಥಳದಲ್ಲೇ ಇರಿಸಲಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಆಟೋ ವೀಕ್ಷಿಸಿ ಪೊಲೀಸರಿಂದ ಮಾಹಿತಿ ಪಡೆದಿದ್ದರು.
ಕಳೆದ ನವೆಂಬರ್ 19ರಂದು ಸಂಜೆ ಶಂಕಿತ ಭಯೋತ್ಪಾದಕ ಶಾರೀಕ್ ಪಂಪ್ ವೆಲ್ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆತನ ಬಳಿಯಿದ್ದ ಕುಕ್ಕರ್ ಬಾಂಬ್ ಗರೋಡಿ ಬಳಿಯಲ್ಲಿ ಸ್ಪೋಟಗೊಂಡಿತ್ತು. ಆ ಬಳಿಕ ಆಟೋದಲ್ಲಿ ಸ್ಫೋಟ ನಡೆದಿರುವ ಸ್ಥಳವನ್ನು ಬ್ಯಾರಿಕೇಡ್ ಹಾಕಿ ಯಾರೂ ಅಲ್ಲಿ ಓಡಾಡದಂತೆ ರಸ್ತೆಯಿಂದ ಪ್ರತ್ಯೇಕಿಸಲಾಗಿತ್ತು. ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.