ಖಜಾನೆ ಖಾಲಿ ಎಂದ ಬಿಜೆಪಿಯಿಂದ ಕೆಲಸ ನಿರೀಕ್ಷಿಸುವುದು ಸಾಧ್ಯವೇ?; ರಮಾನಾಥ ರೈ
ಮಂಗಳೂರು, ಅಕ್ಟೋಬರ್ 28: ನೆರೆ ಪರಿಹಾರ ನೀಡಲು ಸಾಧ್ಯವಾಗದೆ ಖಜಾನೆ ಖಾಲಿಯಾಗಿದೆ ಎಂದು ಹೇಳುತ್ತಿರುವ ಬಿಜೆಪಿ ಸರ್ಕಾರದಿಂದ ಕೆಲಸ ನಿರೀಕ್ಷೆ ಸಾಧ್ಯವೇ ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದ್ದಾರೆ.
ವಿಜಯಾ ಬ್ಯಾಂಕ್ ವಿಲೀನ ವಿರೋಧಿಸಿ ಮಂಗಳೂರಿನಲ್ಲಿ ಕರಾಳ ದಿನ ಆಚರಣೆ
ಮಂಗಳೂರಿನಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಆಡಳಿತಲ್ಲಿದ್ದಾಗ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಸಾಧ್ಯವಾಗಿದೆ. ಆದರೆ ಬಿಜೆಪಿ ಸರಕಾರದಿಂದ ನೆರೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ" ಎಂದು ಆಕ್ಷೇಪಿಸಿದರು.
"ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಮಹಾನಗರ ಪಾಲಿಕೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ನೀರಿನ ಸಮಸ್ಯೆಯನ್ನು ನಿವಾರಿಸುವಲ್ಲಿ ತುಂಬೆ ಅಣೆಕಟ್ಟು ರಚನೆ, ಒಳಚರಂಡಿ ಕಾಮಗಾರಿ, ನಗರದ ಪ್ರಮುಖ ರಸ್ತೆಗಳ ಕಾಂಕ್ರಿಟೀಕರಣ, ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣ, ಸುರತ್ಕಲ್ ನಲ್ಲಿ ಮಾದರಿ ಮಾರುಕಟ್ಟೆ ನಿರ್ಮಾಣ, ಲೇಡಿಗೇಶನ್ ಹಾಗೂ ವೆನ್ಲಾಕ್ ಆಸ್ಪತ್ರೆ ಮೇಲ್ದರ್ಜೆ, ಪಡೀಲ್ ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವಾರು ಯೋಜನೆಗಳು ಕಾಂಗ್ರೆಸ್ ಆಡಳಿತದಲ್ಲಿ ಆಗಿವೆ. ಜನತೆ ಈ ಅಭಿವೃದ್ಧಿ ಕಾರ್ಯಗಳನ್ನು ತುಲನೆ ಮಾಡಿಕೊಂಡು ಮತ್ತೊಮ್ಮೆ ಕಾಂಗ್ರೆಸ್ಗೆ ಅವಕಾಶ ನೀಡಬೇಕು. ನಗರದಲ್ಲಿ ಅಭಿವೃದ್ಧಿ ಜತೆಗೆ ಸಾಮಾಜಿಕ ಸಾಮರಸ್ಯವನ್ನು ಗಟ್ಟಿಗೊಳಿಸಲು ಪಕ್ಷವನ್ನು ಬೆಂಬಲಿಸಬೇಕು" ಎಂದರು.