ಇನ್ಸ್ಟಾಗ್ರಾಂ ಪೇಜ್ ಮೂಲಕ ಧರ್ಮ ಸಂಘರ್ಷಕ್ಕೆ ಪ್ರಚೋದನೆ; ಅಪ್ರಾಪ್ತ ಬಾಲಕನ ಬಂಧನ
ಮಂಗಳೂರು, ಫೆಬ್ರವರಿ 25: ಕರಾವಳಿಯಲ್ಲಿ ಕೋಮು ಸಂಘರ್ಷ ಉಂಟು ಮಾಡುತ್ತಿರುವವ ವಿರುದ್ಧ ಮಂಗಳೂರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಕೋಮು ಗಲಭೆಯನ್ನು ಮಾಡಲು ಪ್ರೇರೇಪಣೆ ನೀಡುವವರನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಸಾಮಾಜಿಕ ಜಾಲತಾಣದ ಮೂಲಕ ಅಶಾಂತಿ ಸೃಷ್ಟಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ.
ಮಂಗಳೂರು ಮುಸ್ಲಿಂ ಎಂಬ ಪೇಸ್ಬುಕ್ ಪೇಜ್ನಲ್ಲಿ ಶಿವಮೊಗ್ಗದ ಹರ್ಷ ಕೊಲೆಯಾದ ಸಂಧರ್ಭದಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಬರಹಗಳನ್ನು ಹಾಕಿದ್ದು, ಈ ಪೋಸ್ಟ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಈ ಆಕ್ಷೇಪಾರ್ಹ ಪೋಸ್ಟ್ಗಳನ್ನು ಲೈಕ್, ಶೇರ್ ಮಾಡಿದವರ ಮೇಲೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ನಮಗಾದ ಸ್ಥಿತಿ ಹರ್ಷ ಕುಟುಂಬಕ್ಕೆ ಆಗುವುದು ಬೇಡ; ಶರತ್ ಮಡಿವಾಳ ತಂದೆ
ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಉಡುಪಿಯ ಮಣಿಪಾಲ ಮೂಲದ ವ್ಯಕ್ತಿ ಮತ್ತು ಮುಲ್ಕಿ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರ ಮೊಬೈಲ್ ವಶ ಪಡಿಸಿಕೊಂಡಿರುವ ಪೊಲೀಸರು, ಆಕ್ಷೇಪಾರ್ಹ ಬರಹಗಳನ್ನು ಲೈಕ್, ಶೇರ್ ಮಾಡಿದ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಇವರು ಮಂಗಳೂರು ಮುಸ್ಲಿಂ ಪೇಜ್ನ ಐಕಾನ್ಗೆ ಲೈಕ್ ಮಾಡಿದ್ದು, ಈ ಹಿನ್ನಲೆಯಲ್ಲಿ ಇವರಿಗೆ ಎಚ್ಚರಿಕೆ ನೀಡಲಾಗಿದೆ.
ಇನ್ಸ್ಟಾಗ್ರಾಂನಲ್ಲೂ ಬಾಲಕನೋರ್ವ ವಿಕೃತಿ ಮೆರದಿದ್ದು, ಆತನನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದ್ದಾರೆ. ಮಂಗಳೂರು ಮೂಲದ ಹದಿನೇಳು ಹರೆಯದ ಯುವಕ ಬೆಂಗಳೂರಿನಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸಕ್ಕಿದ್ದು, ಆತನ ಇನ್ಸ್ಟಾಗ್ರಾಂನಲ್ಲಿ ಟ್ರೋಲ್_ಕಿಂಗ್ 193 ಎಂಬ ಪೇಜ್ ತೆರೆದು ಕೋಮು ಸಂಘರ್ಷ ಉಂಟು ಮಾಡುವ ಚಿತ್ರಗಳನ್ನು ವಿಡಿಯೋಗಳನ್ನು ಎಡಿಟ್ ಮಾಡಿದ್ದಾನೆ. ಈತ ತಾಯಿಯಿಂದಲೂ ಬೇರ್ಪಟ್ಟಿದ್ದು, ಮೂಲಭೂತವಾದಕ್ಕೆ ಆಕರ್ಷಿತನಾಗಿ ಪೋಸ್ಟ್ ರಚಿಸುತ್ತಿದ್ದ ಅನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಮಂಗಳೂರು ಪೊಲೀಸರು ಈತನನ್ನು ಬೆಂಗಳೂರಿನಲ್ಲಿ ವಶಪಡಿಸಿಕೊಂಡಿದ್ದು, ಜೆ.ಜೆ. ಬೋರ್ಡ್ಗೆ ಕಳುಹಿಸಲಾಗಿದೆ. ಈತನ ಪೋಸ್ಟ್ಗಳನ್ನು ಲೈಕ್, ಶೇರ್ ಮಾಡಿದವರ ವಿರುದ್ಧವೂ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಈತ ಧಾರ್ಮಿಕ ಕೇಂದ್ರಗಳ ಮೇಲೆ ಹಸಿರು ಬಾವುಟಗಳನ್ನು ಹಾಕಿ ವಿರೂಪ ಮಾಡುತ್ತಿದ್ದ. ಈತ ವಿಡಿಯೋ ಎಡಿಟ್ ಕೂಡಾ ತಾನೇ ಮಾಡುತ್ತಿದ್ದು, ಅದಕ್ಕೆ ಬೇಕಾದ ಸಾಫ್ಟ್ವೇರ್ಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದ ಎಂದು ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ಮಂಗಳೂರು ಮುಸ್ಲಿಂ ಪೇಜ್ ರೀತಿಯೇ ವಾಟ್ಸಪ್ನಲ್ಲಿ ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ವಾಟ್ಸಪ್ ಗ್ರೂಪ್ ಕಾರ್ಯಾಚರಿಸುತ್ತಿದ್ದು, ಮುಸ್ಲಿಂ ಸಂಪ್ರದಾಯ ಮುರಿಯುವ ಮಹಿಳೆಯರಿಗೆ ನೇರ ಎಚ್ಚರಿಕೆ ನೀಡಲಾಗಿದೆ. ಬುರ್ಖಾ ಧರಿಸಿ ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯವಾಗಿ ವರ್ತಿಸುವ ಮಹಿಳೆಯರು ಕಂಡುಬಂದರೆ ಸಾರ್ವಜನಿಕವಾಗಿ ಅವರ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಲಾಗಿದೆ.
ಹೆಣ್ಣುಮಕ್ಕಳನ್ನು ಮನೆಯವರೇ ಹದ್ದುಬಸ್ತಿನಲ್ಲಿ ಇಡಬೇಕೆಂದು ಪೋಸ್ಟ್ ಹಾಕಲಾಗಿದೆ. ಈ ಬಗ್ಗೆ ವರದಿ ನೀಡಲು ಸೂಚಿಸಿರುವುದಾಗಿ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.