ಮಂಗಳೂರು : ಬಾವಿಯಿಂದ ಬಿಸಿನೀರ ಬುಗ್ಗೆ, ಜನರಿಗೆ ಕುತೂಹಲ
ಮಂಗಳೂರು, ಆಗಸ್ಟ್ 29 : ಪೊಳಲಿ ರಾಜರಾಜೇಶ್ವರಿ ದೇವಾಸ್ಥನದ ಸಮೀಪದ ಮನೆಯೊಂದರ ಬಾವಿಯಲ್ಲಿ ಬಿಸಿನೀರಿನ ಬುಗ್ಗೆ ಕಾಣಿಸಿಕೊಂಡು ಬಾವಿಯ ಸಿಹಿನೀರು ಬಿಸಿನೀರಾಗಿ ಪರಿವರ್ತಿತವಾದ ಘಟನೆ ಸೋಮವಾರ ನಡೆದಿದೆ.
ಬಿಸಿ ನೀರಿನ ಬುಗ್ಗೆ ನೋಡಲು ಬ್ಯಾಂಡ್ ವಾದಕರಾಗಿರುವ ಮೋಹನ್ ದೇವಾಡಿಗ ಎಂಬವರ ಮನೆಯ ಬಾವಿಯತ್ತ ಕುತೂಹಲಿಗರ ದಂಡೇ ಆಗಮಿಸುತ್ತಿದ್ದು, ಅಕ್ಕಪಕ್ಕದ ಗ್ರಾಮಗಳ ಜನರು ಇದೊಂದು ಪವಾಡವೆಂದು ಹೇಳುತ್ತಿದ್ದಾರೆ. ಸದ್ಯ, ಮನೆಯ ಬಾವಿ ಕುತೂಹಲದ ಕೇಂದ್ರ ಬಿಂದುವಾಗಿದೆ.

ಮೋಹನ್ ಎಂಬುವವರ ಮನೆಯ ಅಂಗಳದಲ್ಲಿ ವರ್ಷ ಪೂರ್ತಿ ನೀರು ದೊರೆಯುವ ಸಿಹಿನೀರಿನ ಬಾವಿಯಿದ್ದು, ಇಂದು ಮುಂಜಾನೆ ಮನೆಯ ನಿತ್ಯ ಕೆಲಸಗಳಿಗಾಗಿ ಬಾವಿಯ ನೀರು ಸೇದಿದಾಗ ಅಚ್ಚರಿ ಎದುರಾಗಿದೆ. ಬಾವಿಯ ನೀರು ತಣ್ಣಗಿರದೆ ಬಿಸಿಯಾಗಿತ್ತು.
ಬಳಿಕ ಮನೆಮಂದಿ ಎಲ್ಲರೂ ಅಚ್ಚರಿಗೊಂಡು ಮತ್ತೆ ಮತ್ತೆ ಬಾವಿಯಿಂದ ನೀರು ಸೇದಿ ಮೇಲಕ್ಕೆ ತೆಗೆದಿದ್ದು, ಈ ವೇಳೆ ಬಾವಿಯ ನೀರು ಬಿಸಿಯಾಗಿದ್ದನ್ನು ಕಂಡು ಆಶ್ಚರ್ಯಗೊಂಡರು. ಈ ಸುದ್ದಿ ಗ್ರಾಮದೆಲ್ಲೆಡೆ ಹಬ್ಬಿದ್ದು, ಅಕ್ಕಪಕ್ಕದ ಮನೆಯವರು ಆಗಮಿಸಿ ಪರೀಕ್ಷೆ ನಡೆಸಿದ್ದು, ಈ ವೇಳೆಯೂ ಬಾವಿಯ ನೀರು ಬಿಸಿಯಾಗಿರುವುದು ಬೆಳಕಿಗೆ ಬಂದಿದೆ.

ಕೆಲವೇ ತಾಸಿನಲ್ಲಿ ವಿಷಯ ತಿಳಿದ ಪೊಳಲಿ, ಕರಿಯಂಗಳ, ಕೈಕಂಬ, ಗುರುಪುರ, ಕಾಜೋಳ, ಅಡ್ಡೂರು, ಬಡಕಬೈಲು ಕಡೆಯಿಂದ ಜನರ ದಂಡು ಬಾವಿಯತ್ತ ಆಗಮಿಸಿದ್ದು ಸ್ಥಳದಲ್ಲಿ ಗನಜಂಗುಳಿ ಸೇರಿದೆ.
ದೇವಾಲಯಕ್ಕೆ ಸಂಬಂಧವಿಲ್ಲ : ಬಾವಿಯಲ್ಲಿ ಬಿಸಿ ನೀರು ಕಂಡು ಬಂದಿದ್ದು, ಇದು ಗಂದಕದ ಪ್ರಭಾವದಿಂದ ಎಂಬುವುದು ತಿಳಿದು ಬಂದಿದೆ. ಈ ಬಾವಿಗೂ ದೇಗುಲಕ್ಕು ಯಾವುದೇ ಸಂಬಂಧವಿಲ್ಲ ಹಾಗೂ ಈ ಬಾವಿಯ ನೀರನ್ನು ದೇವಸ್ಥಾನಕ್ಕೆ ಬಳಸುತ್ತಿಲ್ಲ ಎಂದು ಶ್ರೀ ಕ್ಷೇತ್ರಕ್ಕೆ ಸಂಬಂಧ ಪಟ್ಟವರು ಹಾಗೂ ಸ್ಥಳೀಯರು ತಿಳಿಸಿದ್ದಾರೆ.












Click it and Unblock the Notifications