ಭಾರೀ ಮಳೆ: ದಕ್ಷಿಣ ಕನ್ನಡ ಮತ್ತು ಉಡುಪಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಮಂಗಳೂರು, ಜುಲೈ 09: ಕರಾವಳಿ ಭಾಗದಲ್ಲಿ ಮಳೆಯ ಬಿರುಸು ಕಡಿಮೆಯಾಗಿದೆ. ಕಳೆದ 3 ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು ನಿಧಾನವಾಗಿ ಇಳಿಯತೊಡಗಿದೆ.
ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಮಳೆಯ ಹೊಡೆತ ಇನ್ನೂ ಮುಂದುವರಿದಿದೆ. ಮಳೆಯಿಂದಾಗಿ ನದಿಗಳು ತುಂಬಿಕೊಂಡು ಹರಿಯುತಿದ್ದು, ತಗ್ಗು ಪ್ರದೇಶಗಳಿಗೆ ನುಗ್ಗಿದ್ದ ನೀರು ಇನ್ನೂ ಇಳಿಕೆಯಾಗಿಲ್ಲ.
ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ
ಒಂದೆಡೆ ಪ್ರವಾಹ ಭೀತಿ, ಇನ್ನೊಂದೆಡೆ ಥರಗುಟ್ಟಿಸುವ ಚಳಿಯ ನಡುವೆ ನದಿಗಳ ತೀರ ಪ್ರದೇಶದ ಜನ ಜೀವನ ನಡೆಸುವಂತಾಗಿದೆ.
ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹಾಗೂ ಉಡುಪಿ ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ ಎಲ್ಲ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಈಗಾಗಲೇ ವಿಪತ್ತು ನಿರ್ವಹಣಾ ತಂಡ ಜಿಲ್ಲೆಗಳಿಗೆ ಆಗಮಿಸಿದ್ದು, ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆಗೊಂಡಿದೆ.
ಮಂಗಳೂರು ಹೊರವಲಯದ ಮೂಲ್ಕಿ ಭಾಗದಲ್ಲಿ ನೆರೆಗೆ ಕಾರಣವಾಗಿದ್ದ ಶಾಂಭವಿ ನದಿಯಲ್ಲಿ ನೀರಿನ ರಭಸ ಇಳಿಕೆಯಾಗಿದೆ. ಹೀಗಿದ್ದರೂ, ಅಲ್ಲಿನ ಕೃಷಿ ಜಮೀನು ಮತ್ತು ತಗ್ಗಿನ ಪ್ರದೇಶದ ಮನೆಗಳಿಗೆ ನುಗ್ಗಿದ್ದ ನೀರು ಕಡಿಮೆಯಾಗಿಲ್ಲ. ಇದರಿಂದಾಗಿ ಶಿಬರೂರು, ಕಿಲೆಂಜೂರು ಭಾಗದಲ್ಲಿ ಸಂತ್ರಸ್ತರಿಗಾಗಿ ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕ ಗಂಜಿಕೇಂದ್ರ ಆರಂಭಿಸಲಾಗಿದೆ.
ಈ ಭಾಗದಲ್ಲಿ 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಜನ ಕಷ್ಟ ಪಡುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ಈ ರೀತಿ ನದಿಯಲ್ಲಿ ನೆರೆ ಏರಿದ್ದನ್ನು ಕಂಡಿಲ್ಲ ಅಂತಾರೆ, ಅಲ್ಲಿನ ಸ್ಥಳೀಯರು.