ಕುಸುಮಜ್ಜಿ ಬದುಕಿನ ಸಂಧ್ಯಾಕಾಲದಲ್ಲಿ ಬೆಳಕಾದ ಬಜಪೆ ಪೊಲೀಸರು
ಮಂಗಳೂರು, ಆಗಸ್ಟ್ 6: ಹಿರಿಯ ಜೀವವೊಂದಕ್ಕೆ ಪುಟ್ಟದೊಂದು ಆಸರೆ ಕಟ್ಟಿಕೊಡುತ್ತಿರುವ ಮಂಗಳೂರು ಪೊಲೀಸರ ಕಾರ್ಯ ಗಮನ ಸೆಳೆಯುತ್ತಿದೆ. ಆಕೆ ಹೆಸರು ಕುಸುಮಜ್ಜಿ. ಈ ಒಂಟಿ ಹಿರಿಯ ಜೀವದ ಬದುಕಿಗೆ ಪೊಲೀಸರು ನೇರವಾದ ಪ್ರೇರಣಾದಾಯಕ ಕತೆ ಇದು.
ಈ ಪ್ರಸಂಗ ನಡೆದಿದ್ದು ಮಂಗಳೂರು ಹೊರವಲಯದ ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಿಕಂಬಳದಲ್ಲಿ. ಇದು ಕಿನ್ನಿಕಂಬಳದ ಕುಸುಮಜ್ಜಿಯ ಪ್ರಸಂಗ. ಎಲ್ಲ ರೀತಿ ಕೂಲಿ ಕೆಲಸಗಳನ್ನು ಮಾಡುತ್ತಿದ್ದ ಕುಸುಮಜ್ಜಿ ಈಗ ದೈಹಿಕವಾಗಿ ಅಶಕ್ತರಾಗಿದ್ದಾರೆ. ಈ ಹಿರಿಯ ಜೀವವು ಪುಟ್ಟ ಡೇರೆಯೊಳಗೇ ಕಾಲು ಶತಮಾನ ಕಳೆದಿದೆ.
ಕುಸುಮಜ್ಜಿ ಅಥವಾ ಕುಸುಮಾ ಗೌಡ ಅವರಿಗೆ ಈಗ 65ರ ಆಸುಪಾಸಿನ ವಯಸ್ಸು. ಕೆಲಸ ಮಾಡುತ್ತಿದ್ದಾಗ ಜಾರಿ ಬಿದ್ದು ಸಂಭವಿಸಿದ ಸಣ್ಣ ಅವಘಡ ಅವರ ಎರಡೂ ಕಾಲುಗಳನ್ನು ಸಂಪೂರ್ಣ ಬಲಹೀನ ಆಗಿಸಿತು. ಎರಡು ಕೈಗಳು ಊರಿ, ತೆವಳುತ್ತಾ ಸಾಗಬೇಕಾದ ಅನಿವಾರ್ಯ ಎದುರಾಯಿತು.

ಇಂಥ ಕುಸುಮಜ್ಜಿಗೆ ತನ್ನವರು ಅಂತ ಯಾರೂ ಇಲ್ಲ. ಮೂಡುಪೆರಾರ ಶಾಸ್ತಾವು ಅವರ ಮೂಲ ಸ್ಥಾನವಾದರೂ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಕಿನ್ನಿಕಂಬಳ ಬಸ್ ಸ್ಟ್ಯಾಂಡ್ ಅವರ ವಾಸ ಸ್ಥಾನವಾಯಿತು.
ಅಲ್ಲೇ ಪಕ್ಕದಲ್ಲಿ ಚಿಕ್ಕದೊಂದು ಡೇರೆ ಕಟ್ಟಿಕೊಂಡಿದ್ದ ಕುಸುಮಜ್ಜಿ, ಕಾಲುಗಳು ಬಲಹೀನಗೊಂಡರೂ ಹುಲ್ಲು ಕೆತ್ತುವ , ಪಾತ್ರೆ ತೊಳೆಯುವ ಕೆಲಸ ಮಾಡಿ, ಹೊಟ್ಟೆ ಪಾಡಿಗೆ ದಾರಿ ಕಂಡುಕೊಂಡಿದ್ದಾರೆ. ಈ ಹಿರಿ ಜೀವದ ಪಾಡು ಕಂಡು ಯಾರಾದರೂ ಊಟ, ಚಹಾ- ತಿಂಡಿ ಕೊಟ್ಟರೆ ಸ್ವೀಕರಿಸಿ ಹರಸುತ್ತಾರೆ.

ಆದರೆ, ಡೇರೆಯಲ್ಲಿ ದಿನ ದೂಡುವ ಈ ಹಿರಿಯ ಜೀವಕ್ಕೆ ಆಸರೆ ಕಲ್ಪಿಸಲು ಬಜಪೆ ಪೊಲೀಸರು ಮುಂದೆ ಬಂದಿದ್ದಾರೆ. ಕುಸುಮಜ್ಜಿಯ ಡೇರೆ ಬಳಿಯೇ ಒಂದು ಕೋಣೆ ಹಾಗೂ ಶೌಚಾಲಯ ನಿರ್ಮಾಣ ಹಂತದಲ್ಲಿದ್ದು, ಬಹುತೇಕ ಕೆಲಸ ಮುಗಿದಿದೆ.
ಬಜಪೆ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ಇತರ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರ ಪಡೆದು, ಈ ಪುಟ್ಟ ಮನೆ ನಿರ್ಮಿಸುತ್ತಿದ್ದಾರೆ. ಕುಸುಮಜ್ಜಿಯ ಒಂಟಿ ಬದುಕಿನ ಸಂಧ್ಯಾಕಾಲವನ್ನು ನೆಮ್ಮದಿಯಿಂದ ಕಳೆಯಲು ವ್ಯವಸ್ಥೆ ಮಾಡುತ್ತಿರುವ ಪೊಲೀಸರ ನಡೆ ಶ್ಲಾಘನೀಯ.












Click it and Unblock the Notifications