ಆರಿದ್ರಾ ಮಳೆ ರೌದ್ರಾವತಾರ: ದ.ಕ ಜಿಲ್ಲಾ ಶಾಲಾ-ಕಾಲೇಜಿಗೆ ರಜೆ
ಮಂಗಳೂರು, ಜುಲೈ 6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಬುಧವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ, ಪಿಯುಸಿ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಹೀಗಾಗಿ, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಮಂಗಳವಾರ ಇಡೀ ದಿನ ಎಡೆಬಿಡದೆ ಸುರಿದ ಭಾರೀ ಮಳೆ ಇಡೀ ಜಿಲ್ಲೆಯಲ್ಲಿ ಅವಾಂತರ ಸೃಷ್ಠಿಸಿದ್ದು, ಅಲ್ಲಲ್ಲಿ ಮನೆ ರಸ್ತೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸುವಂತಾಗಿದೆ. ಮಂಗಳೂರು ನಗರ ಹೊರವಲಯದ ಸೋಮೇಶ್ವರ ಉಚ್ಚಿಲ ಬಳಿ ಡ್ರೈನೇಜ್ ನೀರು ಸುಮಾರು 50 ಕ್ಕೂ ಅಧಿಕ ಮನೆಗಳಿಗೆ ನುಗ್ಗಿ ಜನ ಭಾರೀ ತೊಂದರೆ ಅನುಭವಿಸುವಂತಾಗಿದೆ.
ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆ; ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಪಶ್ಚಿಮ ಘಟ್ಟ ಮತ್ತು ಘಟ್ಟದ ತಪ್ಪಲಿನ ತಾಲೂಕುಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಜೀವನದಿ ನೇತ್ರಾವತಿ ಮೈ ತುಂಬಿ ಹರಿಯುತ್ತಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ 7.2 ಮೀಟರ್ ಇದ್ದು, ಅಪಾಯ ಮಟ್ಟ 8.5 ಮೀಟರ್ ಆಗಿದೆ. ನೇತ್ರಾವತಿ, ಕುಮಾರಾಧಾರಾ, ಪಲ್ಗುಣಿ, ನಂದಿನಿ, ಪಯಸ್ವಿನಿ ಸೇರಿದಂತೆ ಹಲವು ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಲವು ಭಾಗಗಳಲ್ಲಿ ಹೊಳೆಯ ನೀರು ರಸ್ತೆ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಠಿಯಾಗಿದೆ.
ಮಂಗಳೂರು ನಗರ ಹೊರ ಭಾಗದ ಕೋಟೆಕಾರ್, ಉಚ್ಚಿಲ, ಬೀರಿ, ಸೋಮೇಶ್ವರ, ತಲಪಾಡಿ, ದೇವಿನಗರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಗೆ ಅಪಾರ ಹಾನಿಯಾಗಿದೆ. ಭಾರೀ ಮಳೆಯ ಹಿನ್ನಲೆಯಲ್ಲಿ ಮಳೆ ನೀರು ಮನೆಗೆ ನುಗ್ಗಿ ಸುಮಾರು 50 ಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ.
ಮುಳುಗಿದ ಹಡಗಿನಿಂದ ತೈಲ ಸೋರಿಕೆ ಭೀತಿ; ಭಾರೀ ಪ್ರಮಾಣದಲ್ಲಿ ಪರಿಸರ ಹಾನಿ ಆತಂಕ
ಮೂಡಬಿದ್ರೆ ಮೈಟ್ ಕಾಲೇಜಿನ ಕಾಂಪೌಂಡ್ ಕುಸಿತ
ಭಾರೀ ಮಳೆಯ ಪರಿಣಾಮವಾಗಿ ಮೂಡಬಿದ್ರೆಯಲ್ಲಿ ಕಾಲೇಜ್ ಕಾಂಪೌಂಡ್ ರಸ್ತೆಗುರುಳಿದೆ. ಮೂಡಬಿದ್ರೆ ಮೈಟ್ ಕಾಲೇಜ್ನನ ಕಾಂಪೌಂಡ್ ಕುಸಿತವಾಗಿದ್ದು,ರಸ್ತೆಯಲ್ಲಿ ನಿಂತಿದ್ದ ಮೂರು ಕಾರಿಗೆ ಹಾನಿಯಾಗಿದೆ. ಕಾರಿನಲ್ಲಿ ಯಾರೂ ಇಲ್ಲದಿರುವುದರಿಂದ ದುರಂತ ತಪ್ಪಿದ್ದು, ನೀರಿನ ಒತ್ತಡಕ್ಕೆ ಕಾಂಪೌಂಡ್ ಕುಸಿದಿರುವ ಸಾಧ್ಯತೆಗಳಿವೆ. ಬಳಿಕ ರಭಸವಾಗಿ ಮಣ್ಣು ಸಮೇತ ನೀರು ಹರಿದಿದ್ದು,ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಗುಡ್ಡ ಕುಸಿತ, ಮನೆಗಳಿಗೆ ಹಾನಿ
ಭಾರೀ ಮಳೆಗೆ ಮಂಗಳವಾರ ಸಂಪೂರ್ಣ ನಾಲ್ಕು ಮನೆಗಳು ಹಾನಿಗಳಿವೆ. 14 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಂಗಳವಾರ ರಾತ್ರಿಯಿಂದಲೇ ನಿರಂತರವಾಗಿ ಮಳೆ ಸುರಿದ ಹಿನ್ನಲೆಯಲ್ಲಿ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ. ದ. ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾರಡ್ಕ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದ್ದು, ಗುಡ್ಡ ಕುಸಿದು ಬಂಟ್ವಾಳದಿಂದ ಕೇರಳದ ಕಾಸರಗೋಡಿಗೆ ಸಂಪರ್ಕಿಸುವ ರಸ್ತೆ ಬಂದ್ ಆಗಿದೆ. ಮಣ್ಣು ತೆರವು ಕಾರ್ಯಾಚರಣೆ ನಡೆಸಿ ಮತ್ತೆ ಸಂಚಾರಕ್ಕೆ ಅವಕಾಶ ಮಾಡಿದರೂ, ಮಳೆ ಮುಂದುವರಿಯುತ್ತಿದ್ದು, ಮತ್ತೆ ಗುಡ್ಡ ಕುಸಿತ ವಾಗುವ ಸಾಧ್ಯತೆಗಳಿವೆ.
ವಿಮಾನಯಾನದಲ್ಲಿ ವ್ಯತ್ಯಯ
ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧಿಕೃತ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ವಾಡಿಕೆ ಮಳೆ-38.2 ಮಿಲಿಮೀಟರ್ ಸುರಿಯಬೇಕಾಗಿದ್ದು,ಆದರೆ ಕಳೆದ 24 ಗಂಟೆಗಳ ಅವಧಿಯಲ್ಲಿ 64.1 ಮಿಲಿ ಮೀಟರ್ ಮಳೆ ಸುರಿದಿದೆ. ಎಡೆಬಿಡದೆ ಮಳೆ ಸುರಿದ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲೂ ವ್ಯತ್ಯಯವಾಗಿದೆ.
ಮಂಗಳವಾರ ಮುಂಜಾನೆ ದಮಾಮ್ ನಿಂದ ಬಂದ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿಯೇ ಇಳಿಸಲಾಗದೇ, ಬೆಂಗಳೂರಿಗೆ ತಿರುಗಿಸಿ ಮತ್ತೆ ಮಧ್ಯಾಹ್ನ 3.35ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 6.45ಕ್ಕೆ ದುಬೈಗೆ ತೆರಳಬೇಕಾಗಿದ್ದ ವಿಮಾನ ಸಂಜೆ 4.30ಕ್ಕೆ ನಿರ್ಗಮಿಸಿದೆ.
ಅಡಿಕೆ ತೋಟಗಳು ಜಲಾವೃತ
ಭಾರೀ ಮಳೆಗೆ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿನ ಅಡಿಕೆ ತೋಟಗಳು ಜಲಾವೃತವಾಗಿದೆ. ಕೃಷಿಗೂ ಅಪಾರ ನಷ್ಟ ಸಂಭವಿಸಿದೆ. ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು,ಎಲ್ಲಾ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.