ದ.ಕದಲ್ಲಿ ರೆಡ್ ಅಲರ್ಟ್, ಬಂಟ್ವಾಳದಲ್ಲಿ ಮನೆ ಮೇಲೆ ಗುಡ್ಡಕುಸಿತ, 3 ಕಾರ್ಮಿಕರು ಸಾವು
ಮಂಗಳೂರು, ಜುಲೈ 7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣ ಅಬ್ಬರ ಮುಂದುವರಿದಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ. ಬಂಟ್ವಾಳದ ಪಂಜಿಕಲ್ಲು ಗ್ರಾಮದ ನೇಲ್ಯಪಲ್ಕೆ ಪಕ್ಕದ ಮುಕ್ಕಡ ಬಳಿ ಬುಧವಾರ ರಾತ್ರಿ ಗುಡ್ಡ ಕುಸಿದು ಮನೆ ಮೇಲೆ ಮಣ್ಣು ಬಿದ್ದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೇರಳದ ಕೊಟ್ಟಾಯಂ ನಿವಾಸಿ ಬಾಬು, ಪಾಲಕ್ಕಾಡು ನಿವಾಸಿ ಬಿಜು (46), ಅಲಪ್ಪುಳದ ಸಂತೋಷ್ (46) ಎಂಬ ಕಾರ್ಮಿಕರು ಸಾವೀಗೀಡಾಗಿದ್ದಾರೆ. ಕಣ್ಣೂರಿನ ಜಾನ್ ಎಂಬಾತ ಬದುಕುಳಿದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳೀಯರು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸುದ್ದಿ ಮುಟ್ಟಿಸಿದ್ದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ 9.30ರ ವೇಳೆಗೆ ಮೂವರು ಗಾಯಾಳು ಕಾರ್ಮಿಕರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ನಿರಂತರವಾಗಿ ಸುರಿಯುತ್ತಿದ್ದ ಮಳೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿತ್ತು.
ದಕ್ಷಿಣ ಕನ್ನಡದಲ್ಲಿ ಮುಂದುವರೆದ ಮಳೆ ಆರ್ಭಟ: ಬಂಟ್ವಾಳ ತಾಲೂಕಿನಲ್ಲಿ ಮನೆ ಮೇಲೆ ಕುಸಿದ ಗುಡ್ಡ, ಇಬ್ಬರ ರಕ್ಷಣೆ
ಹೆನ್ರಿ ಕಾರ್ಲೊ ಎಂಬುವವರಿಗೆ ಸೇರಿದ ಕೊಠಡಿಯಲ್ಲಿ ಕೇರಳದ ಈ ನಾಲ್ವರು ಕಾರ್ಮಿಕರು ವಾಸವಿದ್ದರು. ಅವರ ತೋಟದಲ್ಲಿಯೇ ಅನೇಕ ವರ್ಷಗಳಿಂದ ಇವರು ಕೆಲಸ ಮಾಡಿಕೊಂಡಿದ್ದರು.
ಇನ್ನು ಗುಡ್ಡದಿಂದ ಜಾರಿಕೊಂಡು ಬಂದಿರುವ ಮಣ್ಣು ಮಾಲೀಕನ ಮನೆ ಪಕ್ಕದ ಶಡ್ ಮೇಲೆ ಬಿದ್ದ ಪರಿಣಾಮ ಶಡ್ ಸಂಪೂರ್ಣ ಜಖಂ ಆಗಿದೆ. ಶಡ್ನಲ್ಲಿದ್ದ ಕಾರು ಮತ್ತು ಬೈಕ್ ಅವಶೇಷವಾಗಿದೆ. ಅಲ್ಲದ ಮತ್ತೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ.
ಮಳೆ ವಿಪರೀತ ಸುರಿಯುತ್ತಿರುವುದರಿಂದ ಮಳೆ ನೀರಿನ ಹರಿವಿಗೆ ಗುಡ್ಡ ಬಿರುಕು ಬಿಟ್ಟಿದೆ. ಹಾಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಮನೆಯಲ್ಲಿದ್ದವರನ್ನು ಜಿಲ್ಲಾಡಳಿತ ಬೇರೆಕಡೆಗೆ ಸ್ಥಳಾಂತರಿಸಿದೆ.
ಏರ್ಪೋರ್ಟ್ ರನ್ವೇ ಬದಿಯಲ್ಲೇ ರಸ್ತೆ ಕುಸಿತ; ಮಳೆಯ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ಬದಿಯಲ್ಲೇ ರಸ್ತೆ ಕುಸಿದಿದೆ. ಅದ್ಯಪಾಡಿ ಬಳಿ ಇರುವ ರನ್ ವೇ ಸಮೀಪ ಕುಸಿತವಾಗಿದ್ದು, ಕೈ ಕಂಬಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಮಳೆ ನೀರು ಹೆಚ್ಚಾಗಿ ಹರಿಯುತ್ತಿರುವುದರಿಂದ ಕುಸಿತ ಸಂಭವಿಸಿದೆ ಎನ್ನಲಾಗಿದೆ.
ಮುಂಗಾರು ಮಳೆ ಅಬ್ಬರ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ
ಶಾಲಾ ಕಾಲೇಜಿಗೆ ರಜೆ ಘೋಷಣೆ; ರಾಜ್ಯಾದ್ಯಂತ ಜುಲೈ 9 ರವರೆಗೆ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಗುರುವಾರವೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗಾಗಿ ಮುನ್ನೆಚ್ಚರಿಕೆಯ ಪರಿಣಾಮ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು , ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ರಜೆ ಘೋಷಿಸಲಾಗಿದೆ.