'2018ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ'
ಮಂಗಳೂರು, ಏಪ್ರಿಲ್ 22 : 'ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳಲ್ಲಿ ಈಗಾಗಲೇ 100ನ್ನು ಈಡೇರಿಸಿದ್ದು, 2018ರಲ್ಲೂ ನಾವೇ ಮರಳಿ ಅಧಿಕಾರಕ್ಕೆ ಬರುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, 'ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಈಗಾಗಲೇ 100ನ್ನು ಈಡೇರಿಸಿದೆ. ಮೇ. 13ಕ್ಕೆ ನಮ್ಮ ಸರ್ಕಾರಕ್ಕೆ ಮೂರು ವರ್ಷವಾಗುತ್ತದೆ. ಇನ್ನೂ ಎರಡು ವರ್ಷ ಅಧಿಕಾರವಿದ್ದು, ಈ ಅವಧಿಯಲ್ಲಿ ಉಳಿದ ಭರವಸೆಯನ್ನು ಪೂರೈಸುತ್ತೇವೆ' ಎಂದರು. [ಎತ್ತಿನಹೊಳೆ ಯೋಜನೆ ಬಗ್ಗೆ ಆತಂಕ ಬೇಡ : ಸಿದ್ದರಾಮಯ್ಯ]

'ಮಂಗಳೂರಿನಲ್ಲಿ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡುವ ಕುರಿತು ಪರಿಗಣಿಸಲಾಗುವುದು. ಮುಂದಿನ ಮುಂಗಡ ಪತ್ರದಲ್ಲಿ ಈ ಕುರಿತು ಘೋಷಿಸಲಾಗುವುದು. ವಿಮಾನ ನಿಲ್ದಾಣದ ರನ್ವೇಯನ್ನು ವಿಸ್ತರಿಸುವ ಕುರಿತಂತೆ ಹಾಗೂ ರಿಂಗ್ ರೋಡ್ ನಿರ್ಮಾಣ ಪ್ರಸ್ತಾವವನ್ನು ಪರಿಶೀಲಿಸಲಾಗುವುದು' ಎಂದು ಸಿದ್ದರಾಮಯ್ಯ ಹೇಳಿದರು.
ಕೊಂಕಣಿ ಮ್ಯೂಸಿಯಂಗೆ ಶಂಕುಸ್ಥಾಪನೆ : ಶಕ್ತಿ ನಗರದಲ್ಲಿರುವ ಕಲಾಂಗಣದ ಮಾಂಡ್ ಸೊಭಾಣ್ ವತಿಯಿಂದ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 'ಕೊಂಕಣಿ ಮ್ಯೂಸಿಯಂ'ಗೆ ಸಿದ್ದರಾಮಯ್ಯ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, 'ಈಗಾಗಲೇ ಕೊಂಕಣಿ ಭಾಷೆಯಲ್ಲಿ 10ನೇ ತರಗತಿವರೆಗೆ ಹಾಗೂ ಪದವಿ ತರಗತಿಗಳಲ್ಲಿ ಐಚ್ಛಿಕ ಭಾಷೆಯಾಗಿ ಕಲಿಸಲಾಗುತ್ತಿದೆ. ಪಿಯುಸಿ ಹಾಗೂ ಸ್ನಾತಕೋತ್ತರ ಪದವಿಯಲ್ಲೂ ಮುಂದಿನ ವರ್ಷದಿಂದ ಕೊಂಕಣಿ ಭಾಷೆಯನ್ನು ಅಳವಡಿಸುವ ಕುರಿತು ಪರಿಶೀಲಿಸಿ ತೀರ್ಮಾನಿಸಲಾಗುತ್ತದೆ' ಎಂದರು.
'ರಾಜ್ಯದಲ್ಲಿ ಸುಮಾರು 45 ಲಕ್ಷದಷ್ಟು ಕೊಂಕಣಿ ಭಾಷಿಗರಿದ್ದು, ರಾಜ್ಯದ ಪ್ರಗತಿಗೆ ಇವರ ಕೊಡುಗೆ ದೊಡ್ಡದಿದೆ. ಮ್ಯೂಸಿಯಂಗಾಗಿ ಈಗಾಗಲೇ 2.5 ಕೋಟಿ ರೂ. ನೀಡಿದ್ದು, ಮತ್ತೆ ಮುಂದಿನ ವರ್ಷ ಹಣ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಕೊಂಕಣಿ ಭಾಷೆ ನಮ್ಮ ಸಹೋದರ ಭಾಷೆಯಾಗಿರುವುದರಿಂದ ಅದರ ಅಭಿವೃದ್ಧಿಗೆ ಅಗತ್ಯ ನೆರವನ್ನು ಸರ್ಕಾರ ನೀಡಲಿದೆ' ಎಂದರು.
ಪ್ರತಿಭಟನೆಗೆ ಮುನ್ನವೇ ಬಂಧನ : ಸಿದ್ದರಾಮಯ್ಯ ಅವರು ಮಂಗಳೂರಿಗೆ ಆಗಮಿಸಿದಾಗ ಅವರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರನ್ನು ಪ್ರತಿಭಟನೆಗೂ ಮುನ್ನವೇ ಪಣಂಬೂರು ಪೊಲೀಸರು ಬಂಧಿಸಿದ್ದರು.
ಎತ್ತಿನಹೊಳೆ ಕಾಮಗಾರಿಗೆ ಅನುಮತಿ ನೀಡಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯು ಸುರತ್ಕಲ್ಗೆ ಮುಖ್ಯಮಂತ್ರಿ ಭೇಟಿ ನೀಡುವ ವೇಳೆ ಕಪ್ಪುಪಟ್ಟಿ ಧರಿಸಿ, ಖಾಲಿ ಕೊಡ ಹಿಡಿದು ಪ್ರತಿಭಟನೆಗೆ ಮುಂದಾಗಿತ್ತು. ಆದರೆ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದವರನ್ನು ಪೊಲೀಸರು ಬಂಧಿಸಿದರು.
ಬಂಧನ ಖಂಡಿಸಿದ ಕಟೀಲ್ : ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಸಂಸದ ನಳೀನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ.
ಚಿತ್ರಗಳು ಸಿದ್ದರಾಮಯ್ಯ ಮಂಗಳೂರು ಭೇಟಿ












Click it and Unblock the Notifications