ಸುರತ್ಕಲ್ ಟೋಲ್ ತೆರವಿಗೆ 20 ದಿನ ಸಮಯ ಕೊಡಿ; ನಳಿನ್ ಕುಮಾರ್ ಕಟೀಲ್
ಮಂಗಳೂರು, ಅಕ್ಟೋಬರ್, 17; ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯಲು ಮಂಗಳವಾರ 'ನೇರ ಕಾರ್ಯಾಚರಣೆ'ಗೆ ಸುರತ್ಕಲ್ ಟೋಲ್ ವಿರೋಧಿ ಸಮಿತಿ ಕರೆ ನೀಡಿದೆ. ಈ ಹೋರಾಟದ ಬಗ್ಗೆ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು,ಇನ್ನು ಇಪ್ಪತ್ತು ದಿನ ಸಮಯಾವಕಾಶ ನೀಡಿ, ಟೋಲ್ ತೆರವು ಮಾಡಿಸುತ್ತೇವೆ ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ.
ನಾವು ಹೋರಾಟ ಕೈಬಿಡಿ ಎಂದು ಈಗಾಗಲೇ ವಿನಂತಿ ಮಾಡಿದ್ದೇವೆ. ಹೋರಾಟಗಾರರಿಗೆ ಪೊಲೀಸರು ನೋಟಿಸ್ ಕೊಟ್ಟ ಬಗ್ಗೆ ಮಾಹಿತಿ ಇರಲಿಲ್ಲ. ಹೋರಾಟ ಸಹಜ, ಯಾವುದೇ ನೋಟಿಸ್ ನೀಡಬೇಡಿ ಎಂದು ಕಮಿಷನರ್ಗೆ ಹೇಳಿದ್ದೇನೆ. ಶಾಂತಿಯುತ ಹೋರಾಟಕ್ಕೆ ನನ್ನ ವಿರೋಧ ಇಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ತನ್ನದೇ ಆದ ನಿಯಮದಡಿ ಕ್ರಮ ಕೈಗೊಳ್ಳುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
'ಬಂಗಾರ್ದ ಪರ್ಬದ ಕೆಸರ್ದ್ ಗೊಬ್ಬುಲು': ಕೆಸರಿನಲ್ಲಿ ಮಿಂದೆದ್ದ ಮಂಗಳೂರಿನ ಜನ
ಟೋಲ್ ತೆರವಿಗೆ 20 ದಿನ ಸಮಯ ಕೊಡಿ
ಹೆದ್ದಾರಿ ಪ್ರಾಧಿಕಾರ 20 ದಿನ ಸಮಯ ಕೇಳಿದೆ, ನಾವು ಸಮಯ ಕೊಡೋಣ. ನಾನು ಹೋರಾಟಗಾರರ ಜೊತೆ ಮಾತನಾಡಿದರೆ ರಾಜಕೀಯ ಅಡ್ಡಿ ಆಗುತ್ತದೆ. ಹಾಗಾಗಿ ಡಿಸಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಈ ಬಗ್ಗೆ ಮಾತನಾಡಿಸಿದ್ದೇನೆ. 20 ದಿನಗಳ ಕಾಲಾವಕಾಶ ಕೊಡಿ ಮತ್ತೆ ವಿನಂತಿ ಮಾಡುತ್ತೇನೆ. ಶಾಂತಿಯುತವಾಗಿ ಹೋರಾಟ ಮಾಡಲು ನನ್ನ ಅಭ್ಯಂತರ ಇಲ್ಲ. ಕಾನೂನು ಕೈಗೆತ್ತಿಕೊಂಡರೆ ಮುಂದೆ ಆಗುವ ಅನಾಹುತಕ್ಕೆ ಅವರೇ ಹೊಣೆ ಎಂದು ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.
ಟೋಲ್ಗೇಟ್ ತೆರವುಗಳಸಲು ಬದ್ಧ-ಕಟೀಲ್
ನಾನು ಟೋಲ್ಗೇಟ್ ತೆರವುಗಳಸಲು ಬದ್ದನಾಗಿದ್ದೇನೆ. ಕಾನೂನು ಸಮಸ್ಯೆ ಕಾರಣ ಈಗ ಟೋಲ್ಗೇಟ್ ತೆರವು ಕಷ್ಟವಾಗಿದೆ. ಹೀಗಾಗಿ 20 ದಿನಗಳ ಕಾಲ ಹೋರಾಟ ಮುಂದೂಡಿ. ಟೋಲ್ ಗೇಟ್ ತೆರವು ವಿನಂತಿ ಹಿನ್ನೆಲೆಯಲ್ಲಿ ಅನೇಕ ಸಭೆ ಆಗಿದೆ. ಈಗ ತೆರವು ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದ್ದು, ನಿತಿನ್ ಗಡ್ಕರಿ ಕೂಡ ಇದರ ಬಗ್ಗೆ ಮಾತನಾಡಿದ್ದಾರೆ. ಆದರೆ ಕಾನೂನಿನ ತೊಡಕಿನ ಕಾರಣ ತೆರವು ತಡವಾಗಿದೆ. ಈಗಾಗಲೇ ನವಯುಗ್ ಸಂಸ್ಥೆ ಜೊತೆ ಮಾತುಕತೆ ಮುಗಿದಿದೆ. ಆದರೂ ಅವರು ಸಮಯವನ್ನು ಕೇಳಿದ್ದಾರೆ. ಹೆದ್ದಾರಿ ಪ್ರಾಧಿಕಾರ 20 ದಿನ ಸಮಯ ಕೇಳಿದೆ. ನಾವು ಅಧಿಕಾರಿಗಳ ಮೂಲಕ ಹೋರಾಟಗಾರರಿಗೆ ವಿನಂತಿ ಮಾಡಿದ್ದೇವೆ. ಸುರತ್ಕಲ್ ಟೋಲ್ಗೇಟ್ ತೆರವಿಗೆ ಬಿಜೆಪಿಯಿಂದ ಬೆಂಬಲ ಇದೆ. ಲೋಕಸಭಾ ಸದಸ್ಯನಾಗಿ ನಾನು ಕೂಡ ತೆರವಿಗೆ ಬೆಂಬಲಿಸುತ್ತಿದ್ದೇನೆ. 20 ದಿನದ ಬಳಿಕವೂ ತೆರವು ಆಗದಿದ್ದರೆ ನಾನೇ ಕೋರ್ಟ್ಗೆ ಹೋಗುತ್ತೇನೆ ಎಂದರು.
ಮಂಗಳವಾರ ಬ್ಯಾಂಕರ್ಸ್ ಬಂದು ಸಭೆ ನಡೆಸಿ ಒಪ್ಪಂದಕ್ಕೆ ಬರುತ್ತಾರೆ. ಈ ಹೋರಾಟದಲ್ಲಿ ರಾಜಕೀಯವೂ ಇದೆ, ಹಾಗಾಗಿ ನಾವೂ ಮಾತನಾಡುತ್ತೇವೆ. 2015ರಲ್ಲಿ ಆಸ್ಕರ್ ಇದ್ದಾಗಲೇ ಈ ಟೋಲ್ ಗೇಟ್ ಆಗಿದೆ. ಆದರೆ ಈ ಸಂಧರ್ಭದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಸಹಕಾರ ನೀಡುವಂತೆ ಹೋರಾಟಗಾರರಿಗೆ ಮನವಿ ಮಾಡುವುದಾಗಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.