ಮಂಗಳೂರು: ಫಾಜಿಲ್ ದಫನಕ್ರಿಯೆ ಅಂತ್ಯ-ಸುರತ್ಕಲ್ನಲ್ಲಿ ಕಟ್ಟೆಚ್ಚರ, ನಿಷೇಧಾಜ್ಞೆ ಜಾರಿ
ಮಂಗಳೂರು, ಜುಲೈ 29: ನಗರ ಹೊರವಲಯದ ಸುರತ್ಕಲ್ ನಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಫಾಜಿಲ್ ದಫನ ಕ್ರಿಯೆಯು ಸುರತ್ಕಲ್ ನ ಕಾಟಿಪಳ್ಳ ಮಂಗಳಪೇಟೆ ಸಮೀಪದ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನಡೆದಿದೆ.
ಆಸ್ಪತ್ರೆಯಿಂದ ಮನೆಗೆ ತಂದಿರುವ ಫಾಜಿಲ್ ಮೃತದೇಹದ ಅಂತಿಮ ದರ್ಶನಕ್ಕೆ ಮಹಿಳೆಯರಿಗೆ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಮಸೀದಿಗೆ ತರಲಾಯಿತು. ಅಲ್ಲಿ ಪುರುಷರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಬಳಿಕ ಮಯ್ಯತ್ ನಮಾಜ್ ನೆರವೇರಿಸಿ ದಫನ ಸ್ಥಳಕ್ಕೆ ಕೊಂಡೊಯ್ಯಲಾಗಿತು. ಅಲ್ಲಿ ಮುಸ್ಲಿಂ ಧರ್ಮಗುರುಗಳಿಂದ ಕುರಾನ್ ಪಠಣ ನೆರವೇರಿಸಿ ಅಂತ್ಯಸಂಸ್ಕಾರ ನೆರವೇರಿದೆ.
ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು, ಬಿಗಿಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕಾ ದೃಷ್ಟಿಯಿಂದ ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇನ್ನು ಹತ್ಯೆಗೆ ಸಾಕ್ಷಿಯಾದ ಸುರತ್ಕಲ್ನ ವಸ್ತ್ರಮಳಿಗೆಯ ರಸ್ತೆಯಲ್ಲಿ ಭಾರಿ ಪೊಲೀಸ್ ಬಿಗಿ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಸ್ಥಳ ಮಹಜರು ಆಗದ ಕಾರಣ ದುಷ್ಕರ್ಮಿಗಳ ದಾಳಿಗೊಳಗಾದ ವಸ್ತ್ರಮಳಿಗೆ ಇನ್ನೂ ತೆರೆದೇ ಇದೆ.
ಸುರತ್ಕಲ್ನಲ್ಲಿ ಯುವಕನ ಕೊಲೆ: ನಿಷೇಧಾಜ್ಞೆ ಜಾರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಸುರತ್ಕಲ್ ಜಂಕ್ಷನ್ ನಲ್ಲಿನ ಬಿಜೇಸ್ ಫ್ಯಾಷನ್ ಕಲೆಕ್ಷನ್ ಮುಂಭಾಗ ನಿನ್ನೆ ರಾತ್ರಿ 8.30 ಸುಮಾರಿಗೆ ದುಷ್ಕರ್ಮಿಗಳು ಫಾಜಿಲ್ ನನ್ನು ಹತ್ಯೆ ಮಾಡಿದ್ದರು. ಸ್ಥಳ ಮಹಜರು ಆಗದಿರುವುದರಿಂದ ವಸ್ತ್ರಮಳಿಗೆ ತೆರೆದೇ ಇದೆ. ಉಳಿದ ಎಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಮಾಡಲಾಗಿದೆ. ಸುರತ್ಕಲ್ ಜಂಕ್ಷನ್ ನಲ್ಲಿಯೇ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳು ಸಂಚರಿಸದಂತೆ ಬಿಗಿ ಪೊಲೀಸ್ ವ್ಯವಸ್ಥೆ ಇರಿಸಲಾಗಿದೆ.
ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ವಸ್ತ್ರಮಳಿಗೆಯ ಮುಂಭಾಗ ಗೆಳೆಯರೊಂದಿಗೆ ಮಾತನಾಡುತ್ತಿದ್ದ ವೇಳೆ ಫಾಜಿಲ್ ಮೇಲೆ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಬಟ್ಟೆ ಮಳಿಗೆಯ ಮುಂಭಾಗದ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದ್ದ ಸ್ಕೂಟರ್, ಹಾಗೂ ಅಂಗಡಿ ಗಾಜುಗಳ ಮೇಲೆ ರಕ್ತದ ಕಲೆಗಳು ಕಂಡು ಬರುತ್ತಿದೆ. ಇನ್ನೂ ಸ್ಥಳ ಮಹಜರು ಆಗದ ಹಿನ್ನೆಲೆಯಲ್ಲಿ ಎಲ್ಲವೂ ಹಾಗೆಯೇ ಇದೆ.
ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಸ್ಥಳದಲ್ಲಿ ಇನ್ನೂ ಬಿಗುವಿನ ವಾತಾವರಣವೇ ಇದೆ. ಸದಾ ಜನಜಂಗುಳಿ, ಸಾವಿರಾರು ವಾಹನಗಳ ಓಡಾಟದಿಂದ ಕಿಕ್ಕಿರಿಯುತ್ತಿದ್ದ ಸ್ಥಳದಲ್ಲಿ ಸಂಪೂರ್ಣ ಬಿಕೋ ಎನ್ನುತ್ತಿದೆ. ಅಲ್ಲೊಬ್ಬ ಇಲ್ಲೊಬ್ಬ ಪಾದಚಾರಿಗಳಷ್ಟೇ ಈ ಸ್ಥಳದಲ್ಲಿ ಓಡಾಡುತ್ತಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಸಿಸಿಟಿವಿ ಕ್ಯಾಮರಾ ಪರಿಶೀಲನೆ
ಇನ್ನು ಫಾಝಿಲ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸುರತ್ಕಲ್ಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಗುರುವಾರ ಸಾಯಂಕಾಲ ಈ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಫಾಜಿಲ್ ಅಂತ್ಯಕ್ರಿಯೆ ಇದೀಗ ತಾನೆ ನಡೆದಿದೆ. ಶುಕ್ರವಾರದ ನಮಾಜ್ ಬಳಿಕ ತನಿಖೆ ಮುಂದುವರೆಸಲಾಗುತ್ತದೆ. ಘಟನಾ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗುತ್ತದೆ.
ಸಾಮಾಜಿಕ ಜಾಲತಾಣ ಅಪಪ್ರಚಾರ ಬೇಡ
ಈ ಮೂಲಕ ದುಷ್ಕರ್ಮಿಗಳು ಆಗಮಿಸಿರುವ ವಾಹನದ ನಂಬರ್ ಆಧರಿಸಿ ತನಿಖೆ ನಡೆಸಲಾಗುತ್ತದೆ. ಸದ್ಯ ವಿಚಾರಣೆ ನಡೆಸುತ್ತಿದ್ದೇವೆ. ಮಂಗಳೂರು ಪೊಲೀಸ್ ಕಮೀಷನರ್ ನೇತೃತ್ವದಲ್ಲಿ ಈ ತನಿಖೆ ನಡೆಯುತ್ತದೆ. ಈ ಕೃತ್ಯದ ಹಿಂದೆ ಯಾರಿದ್ದಾರೆ. ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂಬುದನ್ನು ತನಿಖೆ ಮಾಡಲಾಗುತ್ತದೆ. ಪೊಲೀಸ್ ಇಲಾಖೆಯ ಮೇಲೆ ಜನತೆ ಇರಿಸಿರುವ ಭರವಸೆಯನ್ನು ಈಡೇರಿಸುತ್ತೇವೆ. ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಬೇಡ. ತನಿಖೆ ನಡೆಸಿದ ಯಾವ ಕಾರಣಕ್ಕೆ ಹತ್ಯೆ ನಡಿದಿದೆ ಎಂದು ತಿಳಿದು ಬರುತ್ತದೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತೇವೆ ಎಂದು ಹೇಳಿದರು.
ಮಸೂದ್ ಹತ್ಯೆ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗಿದೆ. ಪ್ರವೀಣ್ ನೆಟ್ಟಾರು ಮರ್ಡರ್ ಕೇಸ್ ನಲ್ಲಿ ಇಬ್ಬರನ್ನು ಬಂಧಿಸಿದ್ದೇವೆ. ಮಂಗಳೂರು ಭಾಗದಲ್ಲಿ ಸ್ಪೆಷಲ್ ಡ್ರೈವ್ ನಡೆಸುತ್ತೇವೆ. ಸಾರ್ವಜನಿಕರ ಭಯ ಕಡಿಮೆ ಮಾಡುವ ಕೆಲಸ ಮಾಡುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಶಾಂತಿ ಕಾಪಾಡುವಂತೆ ಮನವಿ
ಫಾಜಿಲ್ ಹತ್ಯೆಯ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಂಗಳೂರು ನಗರದ ಸುರತ್ಕಲ್, ಬಜ್ಪೆ, ಮುಲ್ಕಿ ಹಾಗೂ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ರಾತ್ರಿ ವೇಳೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿಷೇಧಾಜ್ಞೆ ಜಾರಿಯಾಗಿರುವ ಸ್ಥಳಗಳಲ್ಲಿ 19 ಚೆಕ್ ಪೋಸ್ಟ್ ಮೂಲಕ ಬಂದೋಬಸ್ತ್ ಏರ್ಪಡಿಸಲಾಗಿದೆ.
ಫಾಜಿಲ್ ಹತ್ಯೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ, ವ್ಯಾಟ್ಸಾಪ್ಗಳಲ್ಲಿ ಬರುವ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದೆಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮನವಿ ಮಾಡಿದ್ದಾರೆ. ಫಾಜಿಲ್ನನ್ನು ಯಾಕೆ ಹತ್ಯೆ ಮಾಡಲಾಗಿದೆ ಎಂದು ಇನ್ನೂ ಗೊತ್ತಾಗಿಲ್ಲ. ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಕೊಲೆಯ ಬಗ್ಗೆ ಬರುವ ಗಾಳಿ ಸುದ್ದಿ, ವದಂತಿಗಳು ಸಾರ್ವಜನಿಕರು ಪ್ರತಿಕ್ರಿಯೆ ನೀಡಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.