ಯುಟಿ ಖಾದರ್ ವಿರುದ್ಧ ಜೆಡಿಎಸ್ ನಿಂದ ಮುಸ್ಲಿಂ ಮುಖಂಡ ಅಶ್ರಫ್ ಕಣಕ್ಕೆ?
ಮಂಗಳೂರು, ಫೆಬ್ರವರಿ 15: ಕರಾವಳಿಯಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಹಾಗೂ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶ್ರಫ್ ಜೆಡಿಎಸ್ ಸೇರುತ್ತಿರುವುದು ಖಚಿತವಾಗಿದೆ. ಈ ನಿಟ್ಟಿನಲ್ಲಿ ಆಶ್ರಫ್ ಈಗಾಗಲೇ ಕಾಂಗ್ರೆಸಿಗೆ ಗುಡ್ ಬೈ ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಅಶ್ರಫ್ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಲಿದ್ದಾರೆ. ಈ ನಡುವೆ ಇನ್ನೊಂದು ಮಾಹಿತಿಯ ಪ್ರಕಾರ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಚಿವ ಯು.ಟಿ.ಖಾದರ್ ಅವರ ಎದುರು ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅಶ್ರಫ್, ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ನಲ್ಲಿ ಇರುವಾಗಲೇ ರಾಜ್ಯ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿದ್ದರು. ಅವರನ್ನು ಪಕ್ಷಕ್ಕೆ ಕರೆತಂದರೆ ಅಲ್ಪಸಂಖ್ಯಾತರ ಮತ ಪಡೆಯಬಹುದೆಂಬ ಯೋಚನೆ ಜೆಡಿಎಸ್ ವರಿಷ್ಠರದ್ದು.
ಮೇಯರ್ ಆಗಿದ್ದ ಸಂದರ್ಭದಲ್ಲಿ ಅಶ್ರಫ್ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಕಷ್ಟು ಜನಬೆಂಬಲವನ್ನು ಆಶ್ರಫ್ ಗಳಿಸಿದ್ದಾರೆ. ಈ ಕಾರಣಕ್ಕೆ ಅಶ್ರಫ್ ಜೆಡಿಎಸ್ ಸೇರ್ಪಡೆ ಕಾಂಗ್ರೆಸ್ ಪಾಳಯಕ್ಕೆ ಮುಳ್ಳಾಗುವ ಸಾಧ್ಯತೆ ಇದೆ. ಅಶ್ರಫ್ ಮಂಗಳೂರುದಿಂದ ಸ್ಪರ್ಧಿಸಿದರೆ ಚುನಾವಣೆ ಚಿತ್ರಣವೇ ಬದಲಾಗಲೂಬಹುದು.
ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಅಶ್ರಫ್ ಕಣಕ್ಕಿಳಿದರೆ. ಪಿಎಫ್ಐ ಹಾಗೂ ಅದರ ರಾಜಕೀಯ ಸಂಘಟನೆ ಎಸ್.ಡಿ.ಪಿ.ಐ ಅಶ್ರಫ್ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮತಗಳು ವಿಭಜನೆ ಗೊಳ್ಳುವ ಆತಂಕ ಕಾಂಗ್ರೆಸಿಗರನ್ನು ಕಾಡುತ್ತಿದೆ.
ಮುಸ್ಲಿಂ ಸಮುದಾಯದ ಮತಗಳು ವಿಭಜನೆಗೊಂಡರೆ ಮುಂಬರುವ ಚುನಾವಣೆಯಲ್ಲಿ ಯು.ಟಿ.ಖಾದರ್ ಅವರಿಗೆ ಭಾರೀ ಸಮಸ್ಯೆ ಎದುರಾಗಲಿದೆ.