ಎಂಆರ್ ಪಿಎಲ್ ನಿಂದ ಮತ್ತೆ ಹಾರಿದ ಹಾರು ಬೂದಿ, ಹೋರಾಟಕ್ಕೆ ಸಜ್ಜಾದ ಜೋಕಟ್ಟೆ ನಿವಾಸಿಗಳು
ಮಂಗಳೂರು, ನವೆಂಬರ್.21: ಮಂಗಳೂರು ಹೊರವಲಯದ ಜೋಕಟ್ಟೆ ಪ್ರದೇಶದಲ್ಲಿ ಮತ್ತೆ ಹಾರು ಬೂದಿ ಅವಾಂತರ ಸೃಷ್ಟಿಸುತ್ತಿದೆ. ಎಂಆರ್ ಪಿ ಎಲ್ ನ ಮೂರನೇ ವಿಸ್ತರಣಾ ಘಟಕದಿಂದ ಪೆಟ್ ಕೋಕ್ ಹಾರುಬೂದಿ ಮತ್ತೆ ಜೋಕಟ್ಟೆ ಪರಿಸರದ ಮೇಲೆ ಸುರಿಯತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಗೊಡಿದ್ದಾರೆ.
ಮರಗಿಡಗಳು, ಮನೆ ಮತ್ತು ವಾಹನಗಳ ಮೇಲೆ ಹಾರು ಬೂದಿ ಕಾಣಿಸಿಕೊಂಡಿದೆ. ಈ ಬಾರಿ ಜೋಕಟ್ಟೆ ಸೇರಿದಂತೆ ಪಕ್ಕದ ಕಾನ, ಕುಳಾಯಿ, ಕೋಡಿಕೆರೆ ಭಾಗದಲ್ಲೂ ಹಾರು ಬೂದಿ ಸುರಿದಿದೆ.
ಎಂಆರ್ ಪಿಎಲ್ ನ ಕೋಕ್ ಮತ್ತು ಸಲ್ಫರ್ ಘಟಕ ಆರಂಭವಾದ ಬಳಿಕ ಈ ಹಾರು ಬೂದಿ ಸಮಸ್ಯೆ ಎದುರಾಗಿತ್ತು. ಈ ಹಾರು ಬೂದಿ ಪರಿಸರದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಲಾಗಿದೆ.

ಇದರ ವಿರುದ್ಧ ಕೆಲ ದಿನಗಳ ಹಿಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ ಬಳಿಕ ಈ ಹಾರು ಬೂದಿ ಸಮಸ್ಯೆ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಹಾರು ಬೂದಿ ಸಮಸ್ಯೆ ಎದುರಾಗಿದೆ. ನಾಲ್ಕು ವರ್ಷಗಳ ಹಿಂದೆ ಘಟಕದ ವಿಷಕಾರಿ ಮಾಲಿನ್ಯದ ವಿರುದ್ಧ ಜೋಕಟ್ಟೆ, ತೋಕೂರು, ಕಳವಾರು ಭಾಗದ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದರು.
ಎರಡು ವರ್ಷ ಕಾಲ ಸ್ಥಳೀಯರು ಈ ಹಾರು ಬೂದಿ ಸಮಸ್ಯೆ ವಿರುದ್ಧ ಹೋರಾಟ ನಡೆಸಿದ್ದರು. ಇದರಿಂದ ರಾಜ್ಯ ಸರಕಾರ ಎಚ್ಚೆತ್ತು ಪರಿಹಾರ ಸೂತ್ರವನ್ನು ಮುಂದಿಟ್ಟಿತ್ತು. ಆದರೆ ಎಂಆರ್ ಪಿ ಎಲ್ ಮಾತು ತಪ್ಪಿದ್ದು, ಸರಕಾರದ ಆದೇಶವನ್ನು ಜಾರಿಗೆ ತರದೆ ದಿನ ದೂಡುವ ತಂತ್ರವನ್ನು ಅನುಸರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈಗ ಮತ್ತೆ ಕೋಕ್ ಹಾರು ಬೂದಿ, ಸಲ್ಫರ್ ಬೂದಿ ಸುತ್ತಲ ಗ್ರಾಮದ ಜನರ ಅನ್ನದ ತಟ್ಟೆ, ಕುಡಿಯುವ ನೀರಿನ ಮೂಲ ಸೇರತೊಡಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಹೋರಾಟಕ್ಕೆ ಜನರು ಸಜ್ಜಾಗುತ್ತಿದ್ದಾರೆ.












Click it and Unblock the Notifications