Breaking: ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆ, ಕಾರು ಮಾಲೀಕನ ಬಂಧನ
ಮಂಗಳೂರು, ಜುಲೈ 31: ಮಂಗಳೂರು ಹೊರವಲಯ ಸುರತ್ಕಲ್ನಲ್ಲಿ ಗುರುವಾರ ನಡೆದ ಕಾಟಿಪಳ್ಳ ಮಂಗಲಪೇಟೆಯ ಮಹಮ್ಮದ್ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಂಧನವಾಗಿದೆ. ಆರೋಪಿ ಅಜಿತ್ ಕ್ರಾಸ್ತ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.
ಫಾಜಿಲ್ ಹತ್ಯೆಗೆ ಬಿಳಿ ಹುಂಡೈ ಕಾರನ್ನು ಬಳಸಲಾಗಿತ್ತು. ಫಾಜಿಲ್ ಹತ್ಯೆಗೆ ಬಳಸಿದ್ದ ಕಾರು ಸಂಚಾರ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿ ಅಜಿತ್ ಕ್ರಾಸ್ತಾ ಈ ಹುಂಡೈ ಕಾರಿನ ಮಾಲೀಕ. ಕೃತ್ಯದಲ್ಲಿ ಅಜಿತ್ ನೇರವಾಗಿ ಭಾಗಿಯಾಗಿದ್ದನೇ ಅಥವಾ ಆತನ ಕಾರನ್ನು ಮಾತ್ರ ಕೃತ್ಯಕ್ಕೆ ಬಳಸಲಾಗಿತ್ತೇ ಎಂಬುದು ವಿಚಾರಣೆ ಬಳಿಕವಷ್ಟೇ ತಿಳಿದು ಬರಲಿದೆ.
ಇನ್ನು, ಫಾಜಿಲ್ ಹತ್ಯೆಯ ತನಿಖೆಯನ್ನು ಮಂಗಳೂರು ಪೊಲೀಸ್ ಕಮಿಷನರೇಟ್ನ ಎಸಿಪಿ ಮಹೇಶ್ ಕುಮಾರ್ಗೆ ವಹಿಸಿ ನಗರ ಪೊಲೀಸ್ ಕಮಿನಷರ್ ಎನ್. ಶಶಿಕುಮಾರ್ ಅವರು ಭಾನುವಾರ ಆದೇಶ ಹೊರಡಿಸಿದ್ದಾರೆ.
ಪ್ರಕರಣವನ್ನು ಈ ಹಿಂದೆ ಸುರತ್ಕಲ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಪ್ಪ ತನಿಖೆ ನಡೆಸುತ್ತಿದ್ದರು. ಪ್ರಕರಣದ ತನಿಖೆಯನ್ನು ಉನ್ನತ ಅಧಿಕಾರಿಗಳಿಂದ ನಿಕ್ಷ್ಪಕ್ಷಪಾತವಾಗಿ ನಡೆಸುವಂತೆ ಫಾಝಿಲ್ ಅವರ ತಂದೆ ಉಮರ್ ಫಾರೂಕ್ ಅವರು ಕೋರಿಕೆ ಸಲ್ಲಿಸಿದ್ದರು.
ಮಂಗಳೂರು ಹೊರವಲಯದಲ್ಲಿರುವ ಸುರತ್ಕಲ್ನಲ್ಲಿ ಗುರುವಾರ ಸಂಜೆ ದುಷ್ಕರ್ಮಿಗಳು ಫಾಜಿಲ್ ಮಂಗಲಪೇಟೆ (23) ಎನ್ನುವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಸರಣಿ ಹತ್ಯೆಗಳ ಹಿನ್ನೆಲೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರ ಬೆನ್ನಲ್ಲೇ ಶನಿವಾರ ಜಿಲ್ಲಾಧಿಕಾರಿ ಡಾ. ಕೆ. ವಿ ರಾಜೇಂದ್ರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಡೆಸಲಾಗಿದ್ದು, ಆದರೆ, ಶನಿವಾರದ ಸಭೆಯಲ್ಲಿ ಮುಖ್ಯವಾಗಿ ಹಿಂದೂ, ಮುಸ್ಲಿಂ ಸಂಘಟನೆಗಳ ಯಾವೊಬ್ಬ ಮುಖಂಡರು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಹಾಜರಾಗಿಲ್ಲ.
ಶಾಂತಿ ಸಭೆಯನ್ನು ಮುಸ್ಲಿಂ ಸಮಿತಿ ಬಹಿಷ್ಕರಿಸಿತ್ತು. "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವೀಣ್ ಅವರ ಮನೆಗೆ ಭೇಟಿ ನೀಡಿದ್ದರು. ಆದರೆ, ಮಸೂದ್ ಅಥವಾ ಫಾಜಿಲ್ ಅವರ ಮನೆಗೆ ಭೇಟಿ ನೀಡಿಲ್ಲ. ಅವರು ಇಬ್ಬರನ್ನೂ ಭೇಟಿ ಮಾಡಬಹುದಿತ್ತು. ಜೊತೆಗೆ ರಾಜ್ಯದಲ್ಲಿ ಯೋಗಿ ಮಾದರಿಯನ್ನು ಜಾರಿಗೆ ತರಲಾಗುವುದು ಎಂದು ಹೇಳಿತ್ತಾರೆ. ಹಾಗಾದರೆ ಈ ಶಾಂತಿ ಸಭೆಯ ಅರ್ಥವೇನು..?" ಎಂದು ಮುಸ್ಲಿಂ ಸಮಿತಿ ಅಧ್ಯಕ್ಷ ಮಸೂದ್ ಹೇಳಿದ್ದರು.