ಕಟೀಲು ದೇವಿಯ ಅವಹೇಳನ, ಮತ್ತೊಬ್ಬ ಆರೋಪಿ ಬಂಧನ
ಮಂಗಳೂರು, ಅ.18 : ಫೇಸ್ಬುಕ್ನಲ್ಲಿ ಕಟೀಲು ದೇವಿಯ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಪರ್ವೇಜ್ ಮೊಯ್ದಿನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ವಿದೇಶದಿಂದ ಮುಂಬೈಗೆ ಆಗಮಿಸುತ್ತಿದ್ದ ವೇಳೆ ಪೋಲೀಸರ ತಂಡ ಖಚಿತ ಮಾಹಿತಿ ಮೇರೆಗೆ ಬಂಧಿಸಿದೆ. ಈ ಪ್ರಕರಣದ ಮೊದಲ ಆರೋಪಿ ಕಲಂದರ್ ಶಾಪಿಯನ್ನು ಕಳೆದ ಸೆಪ್ಟೆಂಬರ್ ನಲ್ಲಿ ಬಂಧಿಸಲಾಗಿತ್ತು.

ಫೇಸ್ಬುಕ್ನಲ್ಲಿ ಕಟೀಲು ದೇವಿ ಮತ್ತು ಸೀತೆಗೆ ಅವಹೇಳನಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಅಧಿಕಾರಿಗಳು 11 ಫೇಸ್ಬುಕ್ ಅಕೌಂಟ್ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
ಮುಸ್ಲಿಂ ಯುವ ಸೇನೆ, ನಾನೊಬ್ಬ ಹಿಂದೂ ಸಹಿತ 11 ಅಕೌಂಟ್ಗಳಲ್ಲಿ ರಾಮಾಯಣದ ಸೀತೆ, ಕಟೀಲಿನ ದೇವಿಗೆ ಅವಹೇಳನ ಕುರಿತು 2016ರಲ್ಲಿ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಜೆಎಂಎಫ್ಸಿ ಎರಡನೇ ನ್ಯಾಯಾಲಯವು ಫೇಸ್ಬುಕ್ ಅಕೌಂಟ್ ಬ್ಲಾಕ್ ಸಹಿತ ಸೂಕ್ತ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿತ್ತು.
ಮಂಗಳೂರು ನಗರ ಪೊಲೀಸರು ಇದೀಗ ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳಿಗೆ ಪತ್ರ ಬರೆದು ಸಮಾಜದಲ್ಲಿ ಪ್ರಕ್ಷುಬ್ಧ ಸ್ಥಿತಿ, ಕ್ಷೋಭೆ ಆಗುವ ಭೀತಿ ಇರುವುದರಿಂದ 11 ಫೇಸ್ಬುಕ್ ಅಕೌಂಟ್ಗಳನ್ನು ಬ್ಲಾಕ್ ಮಾಡಲು ಮನವಿ ಮಾಡಿದ್ದರು.












Click it and Unblock the Notifications