ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ; ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ
ಮಂಗಳೂರು, ಜುಲೈ 14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಅಪಾರ ಹಾನಿ ಸಂಭವಿಸಿದೆ.
ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವರ್ಷಧಾರೆ ಸುರಿಯುತ್ತಿದ್ದು, ಜಿಲ್ಲೆಯ ಜೀವನದಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಮೈದುಂಬಿ ಹರಿಯುತ್ತಿವೆ.
ಕೊಡಗಿನಲ್ಲಿ ವರುಣನ ಆರ್ಭಟ: ತುಂಬಿ ಹರಿಯುತ್ತಿರುವ ನದಿ- ಕೊಳ್ಳಗಳು
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನಲೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ನದಿಗಿಳಿಯದೇ, ನದಿ ದಡದಲ್ಲೇ ತೀರ್ಥ ನೀರು ಸಂಪ್ರೋಕ್ಷಣೆ ಮಾಡುತ್ತಿದ್ದಾರೆ.
ಇನ್ನು ಬೆಳ್ತಂಗಡಿ ತಾಲೂಕಿನಲ್ಲೂ ಹಲವೆಡೆ ಮಳೆಯಿಂದಾಗಿ ಆಸ್ತಿ- ಪಾಸ್ತಿಗೆ ಹಾನಿಯಾಗಿದೆ. ಬೆಳ್ತಂಗಡಿಯ ಮಲವಂತಿಗೆ ಗ್ರಾಮದ ಅಡ್ಯತೋಡಿ ಎಂಬಲ್ಲಿ ಚೋಂಕ್ರ ಮಲೆಕುಡಿಯ ಎಂಬುವವರ ಮನೆಯ ಕೊಟ್ಟಿಗೆಗೆ ಅಡಿಕೆ ಮರ ಬಿದ್ದು, ಕೊಟ್ಟಿಗೆಯ ಛಾವಣಿಗೆ ಹಾಸಲಾಗಿದ್ದ ಶೀಟ್ಗಳು ಮುರಿದು ಬಿದ್ದಿದೆ.
ಪುತ್ತೂರು ತಾಲೂಕಿನ ಕಜೆ ದೇವಿನಗರ ಎಂಬಲ್ಲಿ ಭಾರೀ ಮಳೆಗೆ ಮನೆಯ ಆವರಣ ಗೋಡೆ ಕುಸಿತವಾಗಿದೆ. ಸಂತೋಷ್ ಕುಲಾಲ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆ ಕುಸಿದು ಬೀಳುವ ಭೀತಿಯಲ್ಲಿದ್ದಾರೆ. ಮನೆಯ ಕೆಳಭಾಗದಲ್ಲಿರುವ ಮತ್ತೊಂದು ಮನೆಗೂ ಆಪಾಯ ಎದುರಾಗುವ ಆತಂಕವಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಹಾಸನದ ಗಡಿ ಭಾಗವಾದ ಬಿಸಿಲೆ ಘಾಟ್ನಲ್ಲಿ ಭಾರೀ ಗಾಳಿ- ಮಳೆಗೆ ಮರ ರಸ್ತೆಗುರುಳಿದೆ. ಇದರಿಂದ ಸುಬ್ರಹ್ಮಣ್ಯ- ಬಿಸಿಲೆ ರಸ್ತೆ ಸಂಪರ್ಕ ಕಡಿತವಾಗಿದ್ದು, ನಂತರ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಮರ ತೆರವು ಕಾರ್ಯ ಮಾಡಿದ್ದಾರೆ.
ಜುಲೈ 18ರವರೆಗೆ ದ.ಕ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.