ವಾಯುಸೇನೆಯಲ್ಲಿದ್ದ ಕರ್ನಾಟಕದ ಯೋಧ ಏಕನಾಥ ಶೆಟ್ಟಿ ಕಣ್ಮರೆಯಾಗಿ 5 ವರ್ಷ
ಮಂಗಳೂರು, ಜುಲೈ 22: ಕರುನಾಡಿನ ಹೆಮ್ಮೆಯ ಯೋಧ, ನಿವೃತ್ತಿಯ ಬಳಿಕವೂ ದೇಶ ಸೇವೆಯ ತುಡಿತದಿಂದ ಸೈನ್ಯದಲ್ಲಿ ಮುಂದುವರಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿವಾಸಿ ಸುಬೇದಾರ್ ಏಕನಾಥ್ ಶೆಟ್ಟಿ ಕಣ್ಮರೆಯಾಗಿ ಇಂದಿಗೆ ಐದು ವರ್ಷಗಳಾಗಿವೆ.
2016 ಜುಲೈ 22ರಂದು ಚೆನೈನ ತಂಬಾರಮ್ ಏರ್ಬೇಸ್ನಿಂದ ಅಂಡಮಾನಿನ ಫೋರ್ಟ್ಬ್ಲೇರ್ ನೆಲೆಗೆ ತೆರಳುತ್ತಿದ್ದ ಭಾರತೀಯ ವಾಯುಸೇನೆಯ ಎನ್ -32 ವಿಮಾನ ನಿಗೂಢವಾಗಿ ಕಣ್ಮರೆಯಾಗಿತ್ತು. ವಿಮಾನದಲ್ಲಿದ್ದ 29 ಮಂದಿ ಯೋಧರ ಪೈಕಿ ಕರ್ನಾಟಕದ ಏಕೈಕ ಯೋಧ ಏಕನಾಥ ಶೆಟ್ಟಿ ಕೂಡಾ ಕಣ್ಮರೆಯಾಗಿದ್ದರು.
ನಾಪತ್ತೆಯಾದ ಸೇನಾ ವಿಮಾನದ ಪತ್ತೆಗಾಗಿ ನಾಸಾ ಸೇರಿದಂತೆ ಭಾರತೀಯ ಮೂರೂ ಸೇನಾ ವಿಭಾಗಗಳು ಸತತವಾಗಿ ಹುಡುಕಾಟ ಮಾಡಿದ್ದವು. ಆದರೆ ಈ ಕ್ಷಣದವರೆಗೆಯೂ ಸಮುದ್ರದಲ್ಲಿ ಯೋಧರ ಮೃತ ದೇಹಗಳಾಗಲೀ, ವಿಮಾನದ ಕುರುಹುಗಳಾಗಲೀ ಕಂಡು ಬಂದಿಲ್ಲ. ಹೀಗಾಗಿ ಭಾರತ ಸರ್ಕಾರ 29 ಯೋಧರೂ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದೆ.

1985ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಯಾದ ಏಕನಾಥ ಶೆಟ್ಟಿ, ಎಮ್ಆರ್ಸಿಗೆ ಸೇರಿಕೊಂಡಿದ್ದರು. ಸೇನೆಯಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1986ರಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅದಲ್ಲದೆ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಅರುಣಾಚಲ ಪ್ರದೇಶ ಮುಂತಾದೆಡೆ ಸೇವೆ ಸಲ್ಲಿಸಿದ್ದರು.

2009ರಲ್ಲಿ ಸೇವೆಯಿಂದ ನಿವೃತ್ತರಾದರು. ಆದರೆ ದೇಶ ಸಸೇವೆಗಾಗಿ ಯೋಧ ಏಕನಾಥ ಶೆಟ್ಟಿ ನಿವೃತ್ತರಾದ ಬಳಿಕವೂ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಏಕನಾಥ್ ಶೆಟ್ಟಿ ಕಣ್ಮರೆಯಾಗಿ 5 ವರ್ಷವಾದ ಹಿನ್ನಲೆಯಲ್ಲಿ ಏಕನಾಥ್ ಶೆಟ್ಟಿ ಪತ್ನಿ ಜಯಂತಿ ಶೆಟ್ಟಿ ಮತ್ತು ಕುಟುಂಬಸ್ಥರು ಗಿಡ ನೆಟ್ಟು ನೆನಪನ್ನು ಮತ್ತೆ ಅಜರಾಮರವಾಗಿಸಿಕೊಂಡಿದ್ದಾರೆ.












Click it and Unblock the Notifications