ನಾರಾಯಣ ಗುರು ನಿಗಮಕ್ಕೆ ಆಗ್ರಹ: ಸರ್ಕಾರದ ಆದೇಶ ಪ್ರತಿ ಹರಿದ ಸ್ವಾಮೀಜಿ
ಮಂಗಳೂರು, ಅಕ್ಟೋಬರ್ 31: ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪನೆಯ ರಾಜ್ಯ ಸರಕಾರದ ಆದೇಶ ಪ್ರತಿಯನ್ನು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಹರಿದು ಹಾಕಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, " ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸೇರಿದಂತೆ ತಮ್ಮ ಹಲವಾರ ಬೇಡಿಕೆಗಳನ್ನು ಈಡೇರಿಸದೆ ರಾಜ್ಯ ಸರಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು," ರಾಜ್ಯ ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದರು.
"ಸರಕಾರ ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪಿಸಲು ಹೊರಟಿದೆ. ಇದಕ್ಕೆ ಹಿಂದೆ - ಮುಂದೆ ಏನೂ ಇಲ್ಲ. ಮೇಲಿನ ವರ್ಗದವರು ನಿಗಮ ಕೊಡುವ ರಾಜ್ಯ ಸರಕಾರ. ನಮ್ಮ ಮಾತಿಗೆ ಸೊಪ್ಪು ಹಾಕುತ್ತಿಲ್ಲ. ಇದು ಸರಕಾರದ ನಾಟಕ," ಎಂದು ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪನೆಯ ರಾಜ್ಯ ಸರಕಾರದ ಆದೇಶ ಪ್ರತಿಯನ್ನು ಹರಿದು ಹಾಕಿದರು.

ನಾರಾಯಣ ಗುರು ನಿಗಮ ಆಗಬೇಕು: ಸ್ವಾಮೀಜಿ ಆಗ್ರಹ
ಮಾತು ಮುಂದುವರಿಸಿದ ಅವರು, "ಈ ಕೋಶವನ್ನು ಯಾವಾಗ ಬೇಕಾದರೂ ತೆಗೆದು ಹಾಕಬಹುದು. ಇದಕ್ಕೊಂದು ಅಧ್ಯಕ್ಷ, ಡೈರೆಕ್ಟರ್ ಇಲ್ಲ. ಅದಕ್ಕೆ ನಿವೃತ್ತ ಸರಕಾರಿ ಅಧಿಕಾರಿ ಅಥವಾ ನಿವೃತ್ತ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಸರಕಾರ ಇದನ್ನು ಕಾಟಚಾರಕ್ಕೆ ಮಾಡುತ್ತಿದೆ. ಆದ್ದರಿಂದ ನಮ್ಮ ಸಮುದಾಯಕ್ಕೆ ದ್ರೋಹ ಎಸಗಿರುವ ಸರಕಾರದ ನಡೆಯನ್ನು ಖಂಡಿಸುತ್ತದೆ. ಇಂತಹ ಕೋಶ ನಮಗೆ ಅವಶ್ಯಕತೆಯಿಲ್ಲ. ನಮಗೆ ನಾರಾಯಣ ಗುರು ನಿಗಮ ಆಗಬೇಕು. ಅದಕ್ಕೆ 500 ಕೋಟಿ ರೂಪಾಯಿ ಮೀಸಲಿಡಬೇಕು. ಆದ್ದರಿಂದ ಸರಕಾರದ ಬೋಗಸ್ ಕೋಶದ ಆದೇಶ ಪ್ರತಿಯನ್ನು ಹರಿದು ಹಾಕಿದ್ದೇನೆ," ಎಂದು ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಆಕ್ರೋಶದಿಂದ ಹೇಳಿದರು.

ಕುದ್ರೋಳಿ-ಬೆಂಗಳೂರು 658 ಕಿ.ಮೀ ಪಾದಯಾತ್ರೆ
ಇನ್ನು "ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಜನವರಿ 6ರಂದು ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಿಂದ ಬೆಂಗಳೂರುವರೆಗೆ 658 ಕಿ.ಮೀ. ದೂರದ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳಲಾಗುತ್ತದೆ" ಎಂದು ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ," ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಪಾದಯಾತ್ರೆಗೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಚಾಲನೆ ನೀಡಲಿದ್ದಾರೆ. ಬಳಿಕ ಪಾದಯಾತ್ರೆ ಉಡುಪಿ, ಬ್ರಹ್ಮಾವರ, ಮಾಸ್ತಿಕಟ್ಟೆ ಹೊಸನಗರವಾಗಿ ತೀರ್ಥಹಳ್ಳಿ, ಸಾಗರ, ಶಿವಮೊಗ್ಗ, ಚೆನ್ನಗಿರಿ, ಶಿಕಾರಿಪುರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಸುಮಾರು 35 ದಿನಗಳವರೆಗೆ ಈ ಪಾದಯಾತ್ರೆಯು ದಿನಕ್ಕೆ 20 ಕಿ.ಮೀ.ನಂತೆ ಸಾಗಲಿದೆ. ಬಳಿಕ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಾನು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇನೆ. ಸರಕಾರ ತಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ತಾನು ಈ ಹೋರಾಟದಿಂದ ಹಿಂದೆ ಸರಿಯಲ್ಲ," ಎಂದು ಎಚ್ಚರಿಕೆ ನೀಡಿದ್ದಾರೆ.

ಚುನಾವಣೆಯಲ್ಲಿ ಸಮುದಾಯದ 3 ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು
"ಈಗಾಗಲೇ ಹೋರಾಟದ ರೂಪುರೇಷೆ ತಯಾರಿಸಿ, ಸಮಿತಿಯನ್ನು ರಚಿಸಲಾಗಿದೆ. ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪಿಸಿ 500 ಕೋಟಿ ರೂ. ಮೀಸಲಿಡಬೇಕು. ನಮ್ಮ ಸಮುದಾಯದ ಕುಲಕಸುಬು ಶೇಂದಿ ಇಳಿಸುವಿಕೆಗೆ ರಾಜ್ಯಾದ್ಯಂತ ಅವಕಾಶ ನೀಡಬೇಕು. ಬೇರೆ ರಾಜ್ಯಗಳಿಂದಲೂ ಶೇಂದಿ ತಂದು ಮಾರಾಟಕ್ಕೆ ಅವಕಾಶ ಮಾಡಬೇಕು. ಬಿಲ್ಲವ ಸಮುದಾಯ ಈಗ 2ಎ ಮೀಸಲಾತಿ ಕೆಟಗರಿಯಲ್ಲಿದೆ. ಬೇರೆ ಸಮುದಾಯದವರಿಗೂ 2ಎ ಕೆಟಗರಿಯನ್ನು ಸರಕಾರ ನೀಡುವುದಾದಲ್ಲಿ ಈಗ ಇರುವ ನಮ್ಮ ಮೀಸಲಾತಿಯನ್ನು ಹೆಚ್ಚಳ ಮಾಡಿಕೊಂಡು ಬೇಕಾದರೆ ನೀಡಲಿ. ಸಿಗಂಧೂರು ಶ್ರೀ ಚೌಡೇಶ್ವರಿ ದೇವಾಲಯವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳದಂತೆ ಮಂಗಳೂರು, ಉಡುಪಿ, ಶಿವಮೊಗ್ಗ, ಕಾರವಾರ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಲ್ಲವ, ಈಡಿಗ ಸೇರಿದಂತೆ ನಮ್ಮ ಸಮುದಾಯದ ಮೂವರು ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು," ಆಗ್ರಹಿಸಿ ಈ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ನಮ್ಮ ಸಮುದಾಯದ ಮಂತ್ರಿಗಳ ಮೌನವೇ ಅನ್ಯಾಯಕ್ಕೆ ಕಾರಣ
"ಕೇರಳ ಹಾಗೂ ತೆಲಂಗಾಣ ರಾಜ್ಯಗಳ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರುಗಳು ಈ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ. ತೆಲಂಗಾಣ ಸಿಎಂ ಕೆಸಿಆರ್, ಅಲ್ಲಿನ ಸಚಿವರುಗಳು, ಕೇರಳ ಸಿಎಂ ಪಿಣರಾಯಿ ಈ ಪಾದಯಾತ್ರೆಯಲ್ಲಿ ಭಾಗವಹಿಸಲು ಆಹ್ವಾನ ನೀಡುತ್ತೇನೆ. ನಮ್ಮ ಸಮುದಾಯಕ್ಕೆ ಅನ್ಯಾಯವಾಗಲು ಮಂತ್ರಿಗಳಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಐದು ಜನ ಶಾಸಕರುಗಳ ಮೌನವೇ ಕಾರಣ. ಅಲ್ಲದೆ ಸಿಎಂ ಬೊಮ್ಮಾಯಿಯವರು ನಮ್ಮ ಸಮುದಾಯಕ್ಕೆ ನೇರವಾಗಿ ಅನ್ಯಾಯವೆಸಗುತ್ತಿದ್ದಾರೆ," ಎಂದು ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications