ಗೃಹ ಬಂಧನದಲ್ಲಿದ್ದ ವೃದ್ಧನನ್ನು ರಕ್ಷಿಸಿ ಮಾನವೀಯತೆ ಮೆರೆದ ಉಪ್ಪಿನಂಗಡಿ ಎಸ್ ಐ
ಮಂಗಳೂರು, ಅಕ್ಟೋಬರ್. 01: ಸೊಸೆಯ ಗೃಹಬಂಧನದಲ್ಲಿ ಕರುಣಾಜನಕ ಸ್ಥಿತಿಯಲ್ಲಿದ್ದ ವೃದ್ಧ ಮಾವನನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ ತನ್ನ ಮನೆಯಲ್ಲೇ ಆ ಹಿರಿಯ ಜೀವಕ್ಕೆ ಆಶ್ರಯ ನೀಡಿದ ಪ್ರಸಂಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಉಪ್ಪಿನಂಗಡಿ ಸಮೀಪದ ನಟ್ಟಿಬೈಲ್ ನಿವಾಸಿಯಾದ ಸುಲೈಮಾನ್ ಹಲವಾರು ದಿನಗಳಿಂದ ಸೊಸೆ ಹಾಗೂ ಮಗನ ಕಿರುಕುಳದಿಂದ ಗೃಹಬಂಧನದಲ್ಲಿದ್ದು, ಊಟ ಉಪಚಾರವಿಲ್ಲದೆ ನಿತ್ರಾಣ ಗೊಂಡಿದ್ದರು.
ಆಹಾರವಿಲ್ಲದೇ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆ ಹಿರಿಯ ಜೀವದ ಬಗ್ಗೆ ಸ್ಥಳೀಯರು ಉಪ್ಪಿನಂಗಡಿ ಸಬ್ ಇನ್ಸ್ ಪೆಕ್ಟರ್ ನಂದ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು.

ಘಟನೆಯ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ ಎಸ್ ಐ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಊರವರೊಂದಿಗೆ ಮಾನಾಡಿದ್ದಾರೆ . ನಂತರ ಸುಲೈಮಾನ್ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಿ, ತನ್ನ ಸ್ವಂತಮನೆಗೆ ಕರೆತಂದು ಅಲ್ಲಿ ಆಶ್ರಯ ನೀಡಿದ್ದಾರೆ.

ನೊಂದ ಜೀವಕ್ಕೆ ಊಟ ಉಪಚಾರ ನೀಡಿ, ಮಾನವಿಯತೆ ಮೆರೆದಿದ್ದಾರೆ. ಎಸ್ ಐ ನಂದಕುಮಾರ್ ಅವರ ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಆದರೆ ಮಾವ ಸುಲೈಮಾನ್ ಅವರನ್ನು ಗೃಹ ಬಂಧನದಿಂದ ರಕ್ಷಿಸಿದ್ದಕ್ಕೆ ಎಸ್. ಐ ನಂದಕುಮಾರ್ ಅವರ ವಿರುದ್ಧ ಸುಲೈಮಾನ್ ಸೊಸೆ ಹಾಗೂ ಮಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications