ಸಚಿವ ರಮಾನಾಥ್ ರೈ ಎಂಬ ಹುಲಿ ರಕ್ತ ಕುಡಿಯುತ್ತಿದೆ: ನಳಿನ್
ಮಂಗಳೂರು, ಜುಲೈ 12 : ಸಚಿವ ರಮಾನಾಥ್ ರೈ ತಮ್ಮನ್ನು ಹುಲಿ ಎಂದು ಹೇಳಿಕೊಂಡಿದ್ದಾರೆ. ಈಗ ಆ ಹುಲಿ ರಕ್ತ ಕುಡಿಯುತ್ತಿದೆ. ಹುಲಿ ಕಾಡಲ್ಲಿರುವುದೇ ಕ್ಷೇಮ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಬುಧವಾರ ಲೇವಡಿ ಮಾಡಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು, ಡಿ.ವಿ. ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ರಾಜ್ಯದ ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲುವ ತಾಕತ್ತಿದೆ. ಆದರೆ ರಮಾನಾಥ ರೈ ಬಂಟ್ವಾಳ ಬಿಟ್ಟು ಹೊರಗೆ ಬಂದಿಲ್ಲ ಎಂದು ವ್ಯಂಗ್ಯವಾಡಿದರು.
ಹಿಂದೂ ನಾಯಕರ ಬಂಧನ ಯತ್ನ- ಸಂಸದ ನಳಿನ್ ಪ್ರವಾಸ ಮೊಟಕು
ಜಿಲ್ಲೆಯಲ್ಲಿ ನಡೆದ ಎಲ್ಲ ಅಹಿತಕರ ಘಟನೆಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದಿಂದ ತನಿಖೆ ನಡೆಸಲು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಜೊತೆ ಚರ್ಚೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಸರಕಾರ ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಮುಖ್ಯಮಂತ್ರಿ ಮಂಗಳೂರಿಗೆ ಬಂದಾಗಲೂ ಗಂಭೀರ ಸ್ಥಿತಿಯಲ್ಲಿದ್ದ ಶರತ್ ನನ್ನು ನೋಡುವ ಸೌಜನ್ಯ ತೋರಲಿಲ್ಲ. ಕನಿಷ್ಠ ಪಕ್ಷ ವೈದ್ಯರಿಂದ ಮಾಹಿತಿ ಕೂಡ ಪಡೆಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿಗೆ ಕೆಂಪಯ್ಯರನ್ನು ಕಳಿಸಿದ್ದಕ್ಕೆ ಸಿದ್ದುಗೆ ಜಾಡಿಸಿದ ಸುರೇಶ್
ಪೊಲೀಸ್ ಇಲಾಖೆಯಲ್ಲಿ ಸಚಿವರ ಹಸ್ತಕ್ಷೇಪ
ರಷ್ಯಾ ದೇಶಕ್ಕೆ ನಾನು ಸಂಸದರ ನಿಯೋಗದೊಂದಿಗೆ ತೆರಳಿದ್ದೆ. ಇನ್ನೂ ಎರಡು ದಿನಗಳ ಕಾಲ ನಾನು ಅಲ್ಲಿರಬೇಕಿತ್ತು. ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಶಾಂತಿಯ ಕಾರಣದಿಂದ ಅರ್ಧಕ್ಕೇ ವಾಪಸ್ ಬರಬೇಕಾಯಿತು ಎಂದ ನಳಿನ್, ಪೊಲೀಸ್ ಇಲಾಖೆಯಲ್ಲಿ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ರಾಜ್ಯ ಸರಕಾರವೇ ನೇರ ಕಾರಣ ಎಂದು ಟೀಕಿಸಿದರು.
ನಾನು ಹುಲಿವಂಶದವನು: ಕಲ್ಲಡ್ಕ ಭಟ್ರಿಗೆ ರಮಾನಾಥ್ ರೈ ತಿರುಗೇಟು
ಮತಕ್ಕಾಗಿ ಎತ್ತಿಕಟ್ಟುವ ತಂತ್ರ
ಎಸ್ಡಿಪಿಐ ಚುನಾವಣೆಗೆ ನಿಲ್ಲುವುದರಿಂದ ಕಾಂಗ್ರೆಸ್ ಗೆ ತನ್ನ ಮತಬ್ಯಾಂಕ್ ಕೈತಪ್ಪಿ ಹೋಗುವ ಭಯ ಆವರಿಸಿದೆ. ಅದಕ್ಕಾಗಿ ಮುಸಲ್ಮಾನರನ್ನು ಎತ್ತಿಕಟ್ಟುವ ಕೆಲಸಕ್ಕೆ ಸಚಿವರು ಮುಂದಾಗಿದ್ದಾರೆ. ಅಲ್ಲದೆ ಸಂಘ ಪರಿವಾರದ ಸಂಘಟನೆಗಳ ನಾಯಕರನ್ನು ಜೈಲಿಗೆ ತಳ್ಳುವ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.
ಮಾಜಿ ಶಾಸಕರಾದ ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.